ಶೀರೂರು ಶ್ರೀ ಲಕ್ಷ್ಮೀವರ ತೀರ್ಥರು ದೈವಾಧೀನ : ಗಣ್ಯರ ಕಂಬನಿ
Recommended Video

ಉಡುಪಿ, ಜುಲೈ 19: 'ಸನ್ಯಾಸಿಯಾಗಿದ್ದವನು ರಾಜಕಾರಣಕ್ಕೆ ಬರಬಾರದು ಎಂದು ಎಲ್ಲಿಯೂ ಹೇಳಿಲ್ಲ' ಎನ್ನುತ್ತಲೇ ರಾಜಕಾರಣಕ್ಕೂ ಹೆಜ್ಜೆ ಇಟ್ಟವರು ಶೀರೂರು ಸ್ವಾಮೀಜಿ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಲವು ಕಾರಣಗಳಿಂದ ಸುದ್ದಿಯಾಗಿದ್ದ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳು(55) ಇಂದು(ಜು.19) ಬೆಳಿಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದೈವಾಧೀನರಾದರು. ಫುಡ್ ಪಾಯ್ಸನ್ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳಿಗೆ 55 ವರ್ಷ ವಯಸ್ಸಾಗಿತ್ತು.
ಸನ್ಯಾಸಿಯಾಗಿದ್ದರೂ ಈಜು, ಡ್ರಮ್, ಕ್ರೀಡೆ, ಸಂಗೀತ, ಕರಾಟೆಗಳಲ್ಲೂ ಪರಿಣಿತಿ ಹೊಂದಿದ್ದವರು ಶ್ರೀಗಳು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕಟ್ಟಾ ಅಭಿಮಾನಿಗಳಾಗಿದ್ದರು.
ಸಮಾಜದ ನ್ಯೂನತೆಯನ್ನು ಯತಿಯಾಗಿ ತಿದ್ದುವುದಕ್ಕಿಂತ, ರಾಜಕಾರಣಿಯಾಗಿ ತಿದ್ದಲು ಸುಲಭ ಎನ್ನುತ್ತಿದ್ದ ಶ್ರೀಗಳ ಅಗಲಿಕೆಗೆ ನಾಡಿನಾದ್ಯಂತ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
|
ಕಂಬನಿ ಮಿಡಿದ ಯಡಿಯೂರಪ್ಪ
ಉಡುಪಿಯ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ದೈವಾಧೀನರಾಗಿರುವುದು ಮನಸ್ಸಿಗೆ ಅತೀವ ನೋವು ತಂದಿದೆ. ಜನರ ಜೊತೆ ಸಾಮಾನ್ಯರಂತೆ ಬೆರೆಯುತ್ತಿದ್ದ ಹಾಗೂ ಶ್ರೀಕೃಷ್ಣನ ಸೇವೆಯಲ್ಲಿ ಅಪಾರ ಶ್ರದ್ಧೆ ಹೊಂದಿದ್ದ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ - ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
|
ಟ್ವೀಟ್ ಮೂಲಕ ಶೋಭಾ ಕರಂದ್ಲಾಜೆ ಕಂಬನಿ
ತಮ್ಮ ಬದುಕಿನುದ್ದಕ್ಕೂ ಒಬ್ಬ ಅಧ್ಯಾತ್ಮ ಗುರುವಾಗಿ ಶಾಂತಿ ಮತ್ತು ಮಾನವೀಯತೆ ಸಂದೇಶ ನೀಡಿದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಅಗಲಿಕೆಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನನ್ನ ಸಂತಾಪಗಳು, ಓಂ ಶಾಂತಿ- ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ

ಸಂತೋಷ ಭಾರತೀ ಶ್ರೀ
"ಸ್ವಾಮಿಗಳ ಏಕಾಏಕಿ ಅಗಲಿಕೆ ತೀವ್ರ ಆಘಾತ ತಂದಿದೆ. ಅವರ ಋಣ ನನ್ನ ಮೇಲೆ ಸಾಕಷ್ಟಿದೆ. ನನ್ನಂಥ ಕಿರಿಯ ಸ್ವಾಮೀಜಿಗಳನ್ನು ಅವರು ಗೌರವದಿಂದ ಕಾಣುತ್ತಿದ್ದರು. ಬಹಳ ಮಾನವೀಯ ಅಂತಃಕರಣದ ವ್ಯಕ್ತಿ. ಇದ್ದಿದ್ದನ್ನು ಇದ್ದ ಹಾಗೇ ಹೇಳುತ್ತಿದ್ದರು. ಅವರ ನೇರ ಸ್ವಭಾವವೇ ಅವರಿಗೆ ಮುಳುವಾಯಿತು ಅನ್ನಿಸುತ್ತೆ. ಅವರ ಅಗಲಿಕೆ ಅನುಮಾನ ಹುಟ್ಟಿಸುವಂತಿದೆ. ಈ ಕುರಿತು ಪಾರದರ್ಶಕ ತನಿಖೆ ನಡೆಯಬೇಕು" - ಸಂತೋಷ ಭಾರತೀ ಶ್ರೀ, ಬರ್ಕೂರು ಸಂಸ್ಥಾನದ ಸ್ವಾಮೀಜಿ

ಸಿದ್ಧಗಂಗಾ ಕಿರಿಯ ಸ್ವಾಮೀಜಿ
ಶ್ರೀಗಳ ಅಕಾಲಿಕ ಅಗಲಿಕೆ ತೀವ್ರ ನೋವು ತಂದಿದೆ. ಅವರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಶೀರೂರು ಮಠವನ್ನು ಧಾರ್ಮಿಕವಾಗಿ ಬೆಳೆಸುವಲ್ಲಿ ಅವರು ಸಾಕಷ್ಟು ಶ್ರಮಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ- ಶ್ರೀ ಸಿದ್ದಲಿಂಗಸ್ವಾಮಿ, ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ

ಆರ್ ವಿ ದೇಶಪಾಂಡೆ ಭಾವಪೂರ್ಣ ಶ್ರದ್ಧಾಂಜಲಿ
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಮುಖ್ಯಸ್ಥರಾಗಿದ್ದ ಶ್ರೀ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.
ಆಧ್ಯಾತ್ಮಿಕ ಸಾಧನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಶ್ರೀಗಳು, ಸಮಕಾಲೀನ ಸಮಾಜದ ಆಗುಹೋಗುಗಳಿಗೂ ಸ್ಪಂದಿಸುತ್ತಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಭಕ್ತರು ಸಮರ್ಥ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ದುಃಖಿಸಿದ್ದಾರೆ.
ಶ್ರೀಲಕ್ಷೀವರತೀರ್ಥರು ತಮ್ಮ ಸಾಂಸ್ಕೃತಿಕ ಆಸಕ್ತಿಯಿಂದಲೂ ಗಮನ ಸೆಳೆದಿದ್ದರು. ಚಿಕ್ಕ ವಯಸ್ಸಿನಲ್ಲೇ ಯತಿಗಳಾದ ಅವರು ಪರಂಪರೆ ಮತ್ತು ಆಧುನಿಕತೆಯ ಸಮನ್ವಯದಂತಿದ್ದರು ಎಂದು ಆರ್.ವಿ.ದೇಶಪಾಂಡೆ ನೆನಪಿಸಿಕೊಂಡರು.
ಶ್ರೀಗಳ ನಿಧನದಿಂದ ಉಂಟಾಗಿರುವ ದುಃಖವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಭಕ್ತರಿಗೆ ದಯಪಾಲಿಸಲಿ ಎಂದು ಅವರು ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಆಘಾತ
ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಶ್ರೀಗಳು 8 ವರ್ಷದ ಎಳೆಯ ಪ್ರಾಯದಲ್ಲೇ ಮಠಾಧೀಶರಾಗಿ ಮೂರು ಪರ್ಯಾಯಗಳನ್ನು ನಡೆಸಿಕೊಟ್ಟಿದ್ದಾರೆ. ಶ್ರೀಕೃಷ್ಣನಿಗೆ ವಿವಿಧ ರೀತಿಯ ಅಲಂಕಾರ ಮಾಡುವುದರಲ್ಲಿ ಸಿದ್ಧ ಹಸ್ತರಾಗಿದ್ದ ಅವರು ವಿವಿಧ ಕಲಾ ಪ್ರಕಾರಗಳಲ್ಲಿ ಪರಿಣತಿ ಹೊಂದಿದ್ದರು.
ಇವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications