ಮೀನುಗಾರರು ನಾಪತ್ತೆ ಪ್ರಕರಣ: ಇಸ್ರೋ ಸಹಾಯಕ್ಕೆ ಯಾಚನೆ
ಉಡುಪಿ, ಜನವರಿ 09: ಕಳೆದ ತಿಂಗಳು ಉಡುಪಿ ತೀರದಿಂದ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರನ್ನು ಪತ್ತೆ ಮಾಡಲು ಜಿಲ್ಲೆಯ ಪೊಲೀಸರು ಇಸ್ರೋ ಸಂಸ್ಥೆಯ ಸಹಾಯ ಯಾಚಿಸಿದ್ದಾರೆ.
ಕಡಲು ತೀರ ರಕ್ಷಣಾ ಪಡೆ, ನೌಕಾಸೇನೆ ಮತ್ತು ಉಡುಪಿ ಪೊಲೀಸ್ ಮೂರು ಇಲಾಖೆಗಳು ಕಾಣೆಯಾಗಿರುವ ಮೀನುಗಾರರ ಶೋಧಕ್ಕಾಗಿ ತೀವ್ರ ಪ್ರಯತ್ನ ಪಡುತ್ತಿದ್ದು, ಇದೀಗ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಇಸ್ರೋ ನೆರವು ಪಡೆಯಲು ಮುಂದಾಗಿವೆ.
ಇದರ ಜೊತೆಗೆ ಹೈದರಾಬಾದ್ನಲ್ಲಿರುವ ಇಂಡಿಯನ್ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಓಶನ್ ಇನ್ಫಾರ್ಮೇಶನ್ ಸಿಸ್ಟಂ ಮತ್ತು ಬೆಂಗಳೂರಿನ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ನ ನೆರವನ್ನೂ ಸಹ ಕೋರಲಾಗಿದೆ.

ಸುವರ್ಣ ತ್ರಿಭುಜ ಬೋಟ್ನಲ್ಲಿ ಡಿಸೆಂಬರ್ 13 ರಂದು ತೆರಳಿದ್ದ 7 ಮಂದಿ ಮೀನುಗಾರರು ವಾಪಸ್ಸು ದಡಕ್ಕೆ ಬಂದಿಲ್ಲ. ಆಳ ಸಮುದ್ರದಲ್ಲಿ ಅವರು ಕಾಣೆಯಾಗಿದ್ದರು. ಬೋಟ್ ಸಹ ಈವರೆಗೆ ಪತ್ತೆ ಆಗಿಲ್ಲ. ಇದು ಮೀನುಗಾರರ ಕುಟುಂಬದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.
ಕಾಣೆಯಾಗಿರುವ ಮೀನುಗಾರರ ಕುಟುಂಬಕ್ಕೆ ಕುಮಾರಸ್ವಾಮಿ ಅವರು ಒಂದು ಲಕ್ಷ ಹಣ ಪರಿಹಾರ ಘೋಷಿಸಿದ್ದಾರೆ. ಇಂದು ಮೀನುಗಾರಿಕಾ ಸಚಿವ ವೆಂಕಟರಾಮ ನಾಡಗೌಡ ಅವರು ಕಾಣೆಯಾದ ಮೀನುಗಾರರ ಕುಟುಂಬಗಳನ್ನು ಭೇಟಿ ಆಗಿದ್ದರು. ಸಚಿವೆ ಜಯಮಾಲಾ, ಸಚಿವ ಯು.ಟಿ.ಖಾದರ್, ಸಾ.ರಾ.ಮಹೇಶ್, ಎಂ.ಬಿ.ಪಾಟೀಲ್ ಅವರುಗಳು ಈಗಾಗಲೇ ಮೀನುಗಾರರ ಕುಟುಂಬವನ್ನು ಭೇಟಿ ಆಗಿ ಧೈರ್ಯ ಹೇಳಿದ್ದಾರೆ.












Click it and Unblock the Notifications