ಮಾಂಸದ ಅಂಗಡಿ ಮುಚ್ಚಬೇಕು ಎಂದು ಎಲ್ಲೂ ಹೇಳಿಲ್ಲ:ಪೇಜಾವರ ಶ್ರೀ ಸ್ಪಷ್ಟನೆ
ಉಡುಪಿ, ಜನವರಿ 12: ಮಾಂಸವನ್ನು ನೇತು ಹಾಕುವ ವಿಚಾರ ವಿಚಾರವಾಗಿ, ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ದೃಶ್ಯ ಮಾಧ್ಯಮದಲ್ಲಿ ಹಿಂಸೆಯ ವೈಭವೀಕರಣ ಆಗುತ್ತಿದೆ. ಇಂತವುಗಳನ್ನು ಆದಷ್ಟು ಕಡಿಮೆ ಮಾಡಬೇಕು. ಸರ್ಕಾರ ಹಾಗೂ ನ್ಯಾಯಾಲಯ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಮನೆಯಲ್ಲಿ ಮಾಂಸಾಹಾರ ಮಾಡುವವರು ಮಕ್ಕಳ ಮುಂದೆ ವಧೆ ಮಾಡಬಾರದು ಎಂದರು.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊರಗಡೆ ಮಾಂಸದ ಅಂಗಡಿಯ ಎದುರುಗಡೆ ಮಾಂಸ ನೇತು ಹಾಕುವುದನ್ನು ಕಾಣುತ್ತೇವೆ, ಅದನ್ನು ನಿಲ್ಲಿಸಬೇಕು. ಆಗ ಅದು ಮಕ್ಕಳ ಮೇಲೆ ದೊಡ್ಡ ಪ್ರಭಾವ ಬೀರುವುದಿಲ್ಲ. ಹೆಚ್ಚು ಹಿಂಸೆಯ ದೃಶ್ಯಗಳು ಕಾಣದೇ ಇದ್ದರೆ ಮಕ್ಕಳ ಮನಸ್ಸಲ್ಲಿ ಹಿಂಸೆ ಭಾವನೆ ಬಾರದೆ ಹೋಗಬಹುದು ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಕಾಫಿ, ಟೀ ಕುಡಿದರೆ ಮನಸ್ಸು ಉದ್ವಿಗ್ನ ಆಗುತ್ತದೆ ಎಂದು ಕೇಳಿದ್ದೇವೆ. ಸಾತ್ವಿಕ ಆಹಾರ ಅಂತ ಪರಿಗಣಿಸುವ ಆಹಾರವನ್ನು ನಾವು ಮಕ್ಕಳಿಗೆ ನೀಡಬೇಕು. ಆಹಾರ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಯಾವ ಆಹಾರ ನೀಡಿದರೆ ಮಕ್ಕಳ ಉದ್ವಿಗ್ನ ದೂರ ಆಗುತ್ತದೆ ಅಂತಹ ಆಹಾರ ನೀಡಬೇಕು.
ಕೇವಲ ಶಾಲೆಯಲ್ಲಿ ಅಂತ ನಾವು ಹೇಳುವುದಿಲ್ಲ ಮಕ್ಕಳ ಮೇಲೆ ಶಾಲೆಯಲ್ಲಿ ನೀಡುವ ಆಹಾರ ಮಾತ್ರ ಪ್ರಭಾವ ಬೀರುವುದಿಲ್ಲ. ಎಲ್ಲಾ ಕಡೆ ಕೂಡ ಮಕ್ಕಳ ಆಹಾರದಲ್ಲಿ ಉದ್ವಿಗ್ನ ಆಗದಂತೆ ಸಾತ್ವಿಕ ಆಹಾರ ನೀಡಬೇಕು.
ಯಾವ ಆಹಾರ ಸೇವಿಸಿದಾಗ ಮನಸ್ಸು ಉದ್ವಿಗ್ನ ಆಗುತ್ತದೆ ಅದು ತಾಮಸ ಆಹಾರ ಅಂತ ಪರಿಗಣನೆ ಮಾಡಿದ್ದಾರೆ. ಈ ಬಗ್ಗೆ ಸೂಕ್ಷ್ಮ ಅಧ್ಯಯನ ಮಾಡಬೇಕಾದರೆ ಆಯುರ್ವೇದದ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಮಾಂಸದ ಅಂಗಡಿ ಮುಚ್ಚಬೇಕು ಅಂತ ಎಲ್ಲೂ ಹೇಳಿಲ್ಲ
ಅಂಗಡಿಯಲ್ಲಿ ಮಾಂಸವನ್ನು ಎದುರು ನೇತಾಡಿಸಬೇಡಿ ಅಂತ ಹೇಳಿದ್ದೇವೆ ಅಷ್ಟೇ. ಮಾಂಸದ ಅಂಗಡಿ ಮುಚ್ಚಬೇಕು ಅಂತ ಎಲ್ಲೂ ಹೇಳಿಲ್ಲ. ಮಗುವೊಂದು ಪದಾರ್ಥವೊಂದನ್ನು ತಿನ್ನೋದಿಲ್ಲ ಎನ್ನುವ ವಾಟ್ಸಾಪ್ ವಿಡಿಯೋ ನೋಡಿದ್ದೇನೆ. ಕೋಳಿ ಕತ್ತರಿಸುವುದನ್ನು ಮಗು ತಡೆದ ದೃಶ್ಯವನ್ನು ಕೂಡ ನೋಡಿದ್ದೇನೆ . ಹೀಗೆ ಮಕ್ಕಳ ಮನಸ್ಸಲ್ಲಿ ದಯೆ ಕುರುಣೆ ಇದ್ದಾಗ ಇಂತದ್ದು ಮಾಡುವುದು ಸರಿಯಲ್ಲ.
ವಧೆ ಮಾಡುವಾಗ ವಿಲವಿಲ ಒದ್ದಾಡಿ ಆರ್ತನಾದದಿಂದ ಕೂಗುತ್ತದೆ. ಇದನ್ನು ನಿತ್ಯ ನೋಡಿದರೆ ಮಗುವಿನಲ್ಲಿ ಸಹಜ ಎನ್ನುವ ಮನೋಭಾವ ಮೂಡುತ್ತದೆ .ಮತ್ತೊಬ್ಬರ ಜೊತೆ ಕೂಡ ಹೀಗೆ ಆದರೆ ಕಷ್ಟ. ಯಾಕೆಂದರೆ ಸಮಾಜದಲ್ಲಿ ಇಂಥ ದೃಶ್ಯ ಎಲ್ಲಾ ಕಡೆ ಕಾಣುತ್ತಿದ್ದೇವೆ.
ಮಾಂಸದ ಅಂಗಡಿಗಳಲ್ಲಿ ಮಾಂಸವನ್ನು ಮರೆ ಮಾಡಬೇಕು
ಯಾಕೆ ಸಮಾಜದಲ್ಲಿ ಇಷ್ಟು ಹಿಂಸೆ ನಡೆಯುತ್ತಿದೆ. ಸಮಾಜದಲ್ಲಿ ನಿತ್ಯ ನೋಡಿ ನೋಡಿ ಮನಸ್ಸು ಈ ರೀತಿ ಆಗುತ್ತಿದೆ. ಈ ಕಾರಣದಿಂದ ಸಮಾಜದಲ್ಲಿ ಅಂತಹ ಘಟನೆ ಗಟಿಸಬಾರದು ಇದನ್ನು ತಪ್ಪಿಸುವುದರಿಂದ ದೊಡ್ಡ ದುರ್ಘಟನೆ ತಪ್ಪಿಸಬಹುದು. ಹೀಗಾಗಿ ಯಾಕೆ ಇದನ್ನೆಲ್ಲ ತಪ್ಪಿಸಬೇಕು ಎನ್ನುವುದು ನಮ್ಮ ಅನಿಸಿಕೆ.
ಹೀಗಾಗಿ ಮಾಂಸದ ಅಂಗಡಿಗಳಲ್ಲಿ ನೇತು ಹಾಕುವ ಪದ್ಧತಿ ನಿಲ್ಲಿಸಬೇಕು ಅಥವಾ ಮರೆ ಮಾಡಬೇಕು ಎಂದು ಸರ್ಕಾರಕ್ಕೆ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಬೇಡ ಎನ್ನುವ ದೃಶ್ಯ ಮಾತು ನಡವಳಿಕೆ ಮಕ್ಕಳ ಮುಂದೆ ಕಾಣಬಾರದು
ವಿಧಾನಸೌಧದಲ್ಲಿ ಶಿಕ್ಷಣ ಸಚಿವರು, ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ವರ್ಧನೆ ಕುರಿತು ಧರ್ಮ ಗುರುಗಳ ಸಭೆ ಕರೆದಿದ್ದರು. ದುಂಡುಮೇಜಿನ ಸಮಾಲೋಚನಾ ಸಭೆಯಲ್ಲಿ ಹಲವು ಧರ್ಮ ಗುರುಗಳು ಭಾಗಿಯಾಗಿದ್ದರು. ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಶ್ರೀಗಳ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು.
ಹೀಗಾಗಿ ಸಭೆಯ ಕುರಿತು ಮಾತನಾಡಿದ ಪೇಜಾವರ ಶ್ರೀ, ಸಚಿವರು ಕರೆದಿದ್ದ ಸಭೆಯಲ್ಲಿ ಎಲ್ಲಾ ಧರ್ಮ ಗುರುಗಳು ಪಾಲ್ಗೊಂಡಿದ್ದರು. ಎಲ್ಲಾ ಧರ್ಮ ಗುರುಗಳು ಅವರ ಅಭಿಪ್ರಾಯ ಮಂಡಿಸಿದ್ದಾರೆ. ಅಭಿಪ್ರಾಯ ಮಂಡನೆಯ ಬಗ್ಗೆ ಯಾರ ತಕರಾರು ಇರಲಿಲ್ಲ. ಸಮಾಜದ ಶಾಂತಿ ಸುವ್ಯವಸ್ಥೆ ನೆಮ್ಮದಿಗಾಗಿ ಧರ್ಮ ಗುರುಗಳು ಸಲಹೆ ನೀಡಿದ್ದೇವೆ.
ಮಕ್ಕಳಿಂದ ನಾವು ಏನು ಬಯಸುತ್ತೇವೋ ಅದನ್ನೇ ತೋರಿಸಬೇಕು. ಸಮಾಜದಲ್ಲಿ ನಾವು ಬೇಡ ಎಂದು ಬಯಸುವ ಯಾವುದೇ ದೃಶ್ಯ ಮಾತು ನಡವಳಿಕೆ ಮಕ್ಕಳ ಮುಂದೆ ಕಾಣಬಾರದು. ಮಾಂಸದ ಅಂಗಡಿಗಳು ಯಾವುದು ಎಂದು ಎಲ್ಲರಿಗೂ ಗೊತ್ತಿರುತ್ತದೆ. ಪ್ರಾಣಿ ವಧೆಯನ್ನು ಮಕ್ಕಳ ಎದುರಲ್ಲಿ ಮಾಡಲೇಬಾರದು ಎಂದು ಹೇಳಿದರು.
ಮಕ್ಕಳು ಸಾತ್ವಿಕ ಆಹಾರ ತಿನ್ನಬೇಕು
ಕೇವಲ ಮಾಂಸದ ಅಂಗಡಿ ಮಾತ್ರವಲ್ಲ ಮನೆಯಲ್ಲೂ ಈ ನಿಯಮ ಪಾಲಿಸಿ ಮಾಡಬೇಕು. ದಯವಿಟ್ಟು ಮಕ್ಕಳ ಎದುರಲ್ಲಿ ಪ್ರಾಣಿವಧೆ ಮಾಡಬೇಡಿ. ರಕ್ತ ಚಿಮ್ಮುವ, ಜೋತಾಡುವ, ಸ್ಥಿತಿಯಲ್ಲಿ ಪ್ರಾಣಿಗಳನ್ನು ಮಾರ್ಗದ ಬದಿಯಲ್ಲಿ ನೇತು ಹಾಕುವುದು ಸರಿಯಲ್ಲ.
ಪುಟ್ಟ ಮಕ್ಕಳ ಮನಸ್ಸು ವಿಕಾರ ಆಗುವ ಸಾಧ್ಯತೆ ಇದೆ. ನಿತ್ಯವೂ ಅದನ್ನೇ ನೋಡಿದರೆ ರೂಢಿಯಾಗುವ ಅಪಾಯ ಇದೆ. ಕ್ರೌರ್ಯ ಮಾಂಸ ಗಾಯ ಹೊಡೆತ ನೋಡಿಯೂ ಮಕ್ಕಳು ಮುಂದೆ ಸ್ಪಂದಿಸದೆ ಹೋಗಬಹುದು. ಇದು ಸಮಾಜಕ್ಕೆ ನನ್ನ ಸಲಹೆ. ಮಕ್ಕಳು ಸಾತ್ವಿಕ ಆಹಾರ ತಿನ್ನಬೇಕು ಎಂದು ಹೇಳಿದ್ದೇನೆ.
ಸಸ್ಯಹಾರ ಮತ್ತು ಮಾಂಸಾಹಾರ ಎರಡರಲ್ಲೂ ಸಾತ್ವಿಕ ಮತ್ತು ತಾಮಸ ಗುಣಗಳಿವೆ. ಮನಸ್ಸನ್ನು ಉದ್ವಿಗ್ನಗೊಳಿಸುವ ತಾಮಸ ಆಹಾರವನ್ನು ಮಕ್ಕಳಿಗೆ ಕೊಡಬೇಡಿ. ಮಕ್ಕಳಿಗೆ ಒಳ್ಳೆಯ ಭಾವನೆ ಮೂಡುವ ಆಹಾರ ನೀಡಿ. ಮಾಂಸಾಹಾರವನ್ನು ವಿರೋಧಿಸಿ ನಾನು ಯಾವುದೇ ಮಾತನಾಡಿಲ್ಲ. ಸಸ್ಯಾಹಾರದಲ್ಲೂ ತಮಸ ಆಹಾರ ಇರಬಹುದು. ಮಾಂಸಾಹಾರದಲ್ಲಿ ಸಾತ್ವಿಕ ಆಹಾರ ಇರಬಹುದು. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ನೀಡಬೇಕು ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಪೇಜಾವರ ಶ್ರೀ ಹೇಳಿದ್ದಾರೆ.