ಬಡ ವಿದ್ಯಾರ್ಥಿಗಳಿಗೆ ನಂದಗೋಕುಲವಾದ ಉಡುಪಿಯ ನಿಟ್ಟೂರು ಶಾಲೆ
ಉಡುಪಿ, ಜುಲೈ.01: ಕರಾವಳಿಯ ಈ ಶಾಲೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಮಾದರಿ. ಈ ಹಿಂದೆ ಕೂಡ ಇಲ್ಲಿನ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಂಬಂಧ ರಾಜ್ಯದಲ್ಲೇ ಪ್ರಶಂಸೆಗೆ ಗುರಿಯಾಗಿತ್ತು.
ಇಂದು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರಬೇಕಾದರೆ ಅವುಗಳ ಮಧ್ಯೆ ಮಾದರಿಯಾಗಿ ನಿಂತಿರುವುದು ಉಡುಪಿಯ ನಿಟ್ಟೂರು ಶಾಲೆ. ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಬಿಸಿಯೂಟದ ಪರಿಕಲ್ಪನೆಯನ್ನು ಮೊದಲು ಮೂಡಿಸಿದ್ದು ಇದೇ ಶಾಲೆಯೇ.
ಸರ್ಕಾರಿ ಹೈಸ್ಕೂಲ್ ಮಕ್ಳು ಇಂಗ್ಲಿಷ್ ಮೇಷ್ಟ್ರಿಗಾಗಿ ಕಣ್ಣೀರಿಟ್ಟರು!
ಬಡ ವಿದ್ಯಾರ್ಥಿಗಳ ಪಾಲಿಗೆ ಈ ಶಾಲೆ ನಂದಗೋಕುಲವೇ ಸರಿ. ಇಲ್ಲಿ ಪ್ರತಿ ವರ್ಷ ದಾಖಲಾತಿ ಪ್ರಮಾಣ ಹೆಚ್ಚುತ್ತಲೇ ಇದೆ. ಯಾಕೆಂದರೆ ಸದ್ಯ 172 ವಿದ್ಯಾರ್ಥಿಗಳನ್ನು ಹೊಂದಿರುವ ನಿಟ್ಟೂರು ಶಾಲೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಮಾತ್ರವಲ್ಲದೇ, ಕಷ್ಟ ಕಾರ್ಪಣ್ಯಗಳಿಗೂ ಸ್ಪಂದಿಸುತ್ತದೆ.
ಈ ಶೈಕ್ಷಣಿಕ ವರ್ಷಾರಂಭದಲ್ಲಿ ಯಾವ ವಿದ್ಯಾರ್ಥಿಯ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕ ಇಲ್ಲ ಎನ್ನುವ ಮಾಹಿತಿ ಪಡೆದ ಶಾಲೆಯ ಶಿಕ್ಷಕರು, ನಂತರ ಹತ್ತಾರು ದಾನಿಗಳ ಸಹಕಾರ ಪಡೆದು ಆ ಬಡ ವಿದ್ಯಾರ್ಥಿಗಳ ಮನೆಯಲ್ಲಿ ಗ್ಯಾಸ್ ಸ್ವವ್ ಉರಿಯುವಂತೆ ಮಾಡಿದ್ದಾರೆ.
ಒಟ್ಟು 28 ವಿದ್ಯಾರ್ಥಿಗಳ ಮನೆಗೆ ಗ್ಯಾಸ್ ಸ್ವವ್ ಹಾಗೂ ಗ್ಯಾಸ್ ಸಿಲಿಂಡರ್ ವಿತರಿಸುವ ಮೂಲಕ ವಿದ್ಯಾರ್ಥಿಗಳ ಮಾತ್ರವಲ್ಲದೆ, ಅವರ ಪೋಷಕರ ಸಂಕಷ್ಟಕ್ಕೂ ಧ್ವನಿಯಾಗಿದೆ.
ಈ ಹಿಂದೆ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಸೋಲಾರ್ ದೀಪ ಅಳವಡಿಕೆ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ವಾಹನ ವ್ಯವಸ್ಥೆ ಹಾಗೂ ದೂರದೂರಿನಿಂದ ಬರುವ ವಿದ್ಯಾರ್ಥಿಗಳಿಗೆ ಕಡಿಮೆ ಬಸ್ಸು ಟಿಕೆಟ್ ದರ, ಹೊರ ಜಿಲ್ಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜೊತೆಗೆ ವಲಸೆ ಕಾರ್ಮಿಕರ ಮಕ್ಕಳೇ ಇಲ್ಲಿಗೆ ಹೆಚ್ಚಾಗಿ ಬರುವುದರಿಂದ ಕೃಷಿ ಚಟುವಟಿಕೆ , ಯಕ್ಷಗಾನ, ಇಂಗ್ಲೀಷ್ ಭಾಷಾ ತರಬೇತಿ ನೀಡಿ ಅವರಲ್ಲೂ ಶಿಕ್ಷಣದ ಬಗೆಗಿನ ಒಲವು ಮೂಡಿಸಲಾಗಿದೆ. ಮಕ್ಕಳು ಸಹ ಗುರುಗಳ ಪ್ರೋತ್ಸಾಹಕ್ಕೆ ತಕ್ಕಂತೆ ಕಲಿತು ಶಾಲೆಗೆ ಉತ್ತಮ ಹೆಸರು ತರುತ್ತಿದ್ದಾರೆ.
ಒಟ್ಟಿನಲ್ಲಿ ಕೃಷ್ಣ ನಗರಿಯ ಈ ಶಾಲೆಯ ಗುರು-ಶಿಷ್ಯರ ಸಂಬಂಧ ಅನ್ನೋದು ಹಾಲು-ಜೇನಿನಂತೆ ಎಂದು ತೋರಿಸಿಕೊಟ್ಟಿದೆ. ಬಡ ವಿದ್ಯಾರ್ಥಿಗಳ ಪಾಲಿಗೆ ನೆರವಾಗುವ ಮೂಲಕ ಮಕ್ಕಳ ಬಾಳಲ್ಲಿ ಆಶಾಕಿರಣವಾಗಿದೆ.