ಇಬ್ಬರು ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಉಡುಪಿ ಕೋರ್ಟ್
ಉಡುಪಿ, ಸೆಪ್ಟೆಂಬರ್ 09: ಇಲ್ಲಿನ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದಿದ್ದ ಶಕುಂತಳಾ ಎಂಬವರ ಕೊಲೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.
ಉಪ್ಪೂರಿನ ಕೆ.ಜಿ ರೋಡ್ ನಿವಾಸಿ ಹರೀಶ್ ಪೂಜಾರಿ ಮತ್ತು ಆತನ ಗೆಳೆಯ ಹೇರೂರಿನ ಸಂತೋಷ್ ಪೂಜಾರಿ ಎಂಬವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದೆ.
ಸಾಲ ಮಾಡಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಆರೋಪಿಗಳಾದ ಹರೀಶ್ ಪೂಜಾರಿ ಹಾಗೂ ಸಂತೋಷ್ ಪೂಜಾರಿ ಹಣ ಹೊಂದಿಸಲು 2012 ಜೂನ್ 25 ರಂದು ಶಕುಂತಲಾ ಪೂಜಾರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಮನೆಯಲ್ಲಿದ್ದ ಕರಿಮಣಿ ಸರ ,ಬೆಂಡೋಲೆ ,ಚಿನ್ನದ ಸರ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತು ದೋಚಿ ಪರಾರಿಯಾಗಿದ್ದರು.
ಈ ಪ್ರಕರಣದ ಕುರಿತು ತನಿಖೆ ನಡೆಸಿದ ಮಲ್ಪೆ ಪೊಲೀಸರು ಆರೋಪಿಗಳಾದ ಸಂತೋಷ್ ಪೂಜಾರಿ ಹಾಗೂ ಹರೀಶ್ ಪೂಜಾರಿಯನ್ನು ಬಂಧಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.
ಅದಲ್ಲದೆ ತಲಾ 20 ಸಾವಿರ ರೂಪಾಯಿ ದಂಡ ಹಾಗೂ ಕಲಾಂ 357ಸಿಆರ್ ಪಿಸಿ ಅಡಿಯಲ್ಲಿ ತಲಾ 25 ಸಾವಿರ ರು. ಶಕುಂತಲಾರ ಮಕ್ಕಳಿಗೆ ಪರಿಹಾರ ಧನವಾಗಿ ನೀಡುವಂತೆ ಆದೇಶಿಸಿದೆ.