Udupi: ದೀಪಾವಳಿ ದಿನವೇ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆಗೈದ ಆರೋಪಿ ಬಂಧನ
ಉಡುಪಿ, ನವೆಂಬರ್ 14: ಉಡುಪಿ ಜಿಲ್ಲೆ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಪ್ರಕರಣದ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್ ಅರುಣ್ ಚೌಗಲೆ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ದೀಪಾವಳಿ ಹಬ್ಬದ ದಿನ ಉಡುಪಿ ಜಿಲ್ಲೆಯ ನೇಜಾರಿನ ತೃಪ್ತಿ ನಗರದಲ್ಲಿ ನಡೆದಿದ್ದ ನಾಲ್ವರ ಭೀಕರ ಹತ್ಯೆ ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿತ್ತು. ಭಾನುವಾರ ಬೆಳಗ್ಗೆ ದುಷ್ಕರ್ಮಿಯೊಬ್ಬ ತಾಯಿ ಹಾಗೂ ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಕೊಂದು ವೃದ್ಧೆಯನ್ನು ಗಾಯಗೊಳಿಸಿದ್ದ. ತಾಯಿ ಹಸೀನಾ (46) ಆಕೆಯ ಮಕ್ಕಳಾದ ಅಫ್ನಾನ್ (23), ಅಯಾಂಜ್ (21), ಮತ್ತು ಅಸೀಮ್ (14) ದುಷ್ಕರ್ಮಿಯ ಇರಿತದಿಂದ ಮೃತಪಟ್ಟಿದ್ದರು.

ಸದ್ಯ ಈ ಪ್ರಕರಣದ ಆರೋಪಿಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಸಾಂಗ್ಲಿ ಮೂಲದವನಾದ ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೊಲೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಪ್ರವೀಣ್ ಬೆಳಗಾವಿಯ ಕುಡಚಿಯ ಸಂಬಂಧಿ ಮನೆಯಲ್ಲಿ ಆಶ್ರಯ ಪಡೆದಿದ್ದು, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಮೇಲ್ನೋಟಕ್ಕೆ ವೈಯಕ್ತಿಕ ದ್ವೇಷಕ್ಕೆ ಕೊಲೆ ನಡೆದಿದೆ ಎನ್ನಲಾಗುತ್ತಿದ್ದು, ತನಿಖೆಯ ಬಳಿಕವಷ್ಟೇ ಕೊಲೆಯ ನಿಖರ ಕಾರಣ ತಿಳಿದು ಬರಬೇಕಿದೆ.

ದೀಪಾವಳಿಯ ಬೆಳ್ಳಂಬೆಳ್ಳಗೆ ನಡೆದಿದ್ದೇನು..?
ಆರೋಪಿ ಭಾನುವಾರ ಬೆಳಗ್ಗೆ 8:30ರ ಸುಮಾರಿಗೆ ಸಂತೆಕಟ್ಟೆಯಿಂದ ತೃಪ್ತಿನಗರಕ್ಕೆ ಆಟೋ ಬಾಡಿಗೆಗೆ ಪಡೆದು ಬಂದಿದ್ದಾನೆ. ಏಕಾಏಕಿ ಹಸೀನಾ ಮನೆಗೆ ನುಗ್ಗಿದ ಹಂತಕ ನಾಲ್ವರನ್ನು ಚಾಕುವಿನಿಂದ ಇರಿದಿದ್ದಾನೆ. ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕ ಗಲಾಟೆ ಕೇಳಿ ಮನೆಯೊಳಗೆ ನುಗ್ಗಿದ್ದು, ಆತನಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ. ಕೇವಲ ಹದಿನೈದೇ ನಿಮಿಷದಲ್ಲಿ ಐವರಿಗೆ ಚಾಕು ಇರಿದಿದ್ದ ಹಂತಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಹಸೀನಾ ಅತ್ತೆ ಹಾಜಿರಾ (70) ಗಂಭೀರ ಗಾಯಗೊಂಡಿದ್ದರು.












Click it and Unblock the Notifications