ಮೀನುಗಾರರ ನಾಪತ್ತೆ ಪ್ರಕರಣ:ಸಿಎಂ ಮನೆ ಮುಂದೆ ಪ್ರತಿಭಟನೆಗೆ ನಿರ್ಧರಿಸಿದ ಮೀನುಗಾರರು
ಉಡುಪಿ ಫೆಬ್ರವರಿ 27: ಮೀನುಗಾರರ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿದೆ. ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಜನ ಮೀನುಗಾರರು ನಾಪತ್ತೆಯಾಗಿ ಎರಡು ತಿಂಗಳು ಕಳೆದಿದ್ದರೂ ಇದುವರೆಗೆ ಮೀನುಗಾರರ ಸುಳಿವಾಗಲಿ, ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಬಗ್ಗೆಯಾಗಲಿ ಒಂದೇ ಒಂದು ಕುರುಹು ಪತ್ತೆಯಾಗಿಲ್ಲ.
ಅತ್ತ ಕಾಣೆಯಾದ 7 ಮಂದಿ ಮೀನುಗಾರರ ಮನೆಯವರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಮೀನುಗಾರರ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮೀನುಗಾರರು ಮುಖ್ಯಮಂತ್ರಿ ಅವರ ಮನೆಯ ಮುಂದೆ ಧರಣಿ ನಡೆಸಲು ಮುಂದಾಗಿದ್ದಾರೆ.
ಆಳ ಸಮುದ್ರದಲ್ಲಿ ನೌಕಾಪಡೆಯ ಹಡಗು 7 ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟ್ ಗೆ ಡಿಕ್ಕಿ ಹೊಡೆದಿದತ್ತು ಎಂದು ಅನುಮಾನಿಸಲಾಗಿತ್ತು. ಈ ವಿಚಾರದಲ್ಲಿ ತನಿಖೆ ನಡೆಸಿ ಯಾವುದೇ ನಿರ್ಣಾಯಕ ಹಂತಕ್ಕೆ ಬರಲು ಸಾಧ್ಯವಾಗಿಲ್ಲ.

ಅಪಘಾತ ನಡೆದಿರುವ ಶಂಕೆಯಿಂದ ಸಮುದ್ರದ 60 ಮೀಟರ್ ಆಳದಲ್ಲಿ ಪರಿಶೀಲನೆ ನಡೆಸಿದಾಗ 23 ಅಡಿ ಉದ್ದದ ಕಬ್ಬಿಣದ ತುಂಡಿನ ಮಾದರಿ ಸಿಕ್ಕಿತ್ತು. ಸಟ್ಲೇಜ್ ಹಾಗೂ ನಿರೀಕ್ಷಕ್ ಎಂಬ ನೌಕಾಸೇನೆಯ ಎರಡು ಹಡಗುಗಳು ಈ ಭಾಗದಲ್ಲಿ ಪರಿಶೀಲನೆ ನಡೆಸಿದ್ದವು.
ಮೀನುಗಾರರು ನಾಪತ್ತೆಯಾಗಿ 64 ದಿನಗಳ ನಂತರವೂ ಕುರುಹು ಸಿಕ್ಕಿಲ್ಲ. ಮೀನುಗಾರರ ನಾಪತ್ತೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ. ಮೀನುಗಾರರು ರಸ್ತೆಗಿಳಿದು ಪ್ರತಿಭಟಿಸಿದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಅಲ್ಲದೇ ಮೀನುಗಾರರನ್ನು ಹುಡುಕಿ ಕೊಡುವ ಭರವಸೆ ನೀಡಿದ ರಾಜಕೀಯ ನಾಯಕರೇ ಈಗ ಕಾಣೆಯಾಗಿದ್ದಾರೆ. ಇಲ್ಲೇ ಇದ್ದು ಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳಿದ್ದ ಉಸ್ತುವಾರಿ ಸಚಿವೆ ಜಯಮಾಲಾ ಇತ್ತ ಮುಖವೇ ಹಾಕಿಲ್ಲ. ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಎಲ್ಲಿದ್ದಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮೀನುಗಾರರು ಸಿಎಂ ಮನೆಯ ಮುಂದೆ ಧರಣಿ ಮಾಡಲು ತೀರ್ಮಾನಿಸಿದ್ದಾರೆ.












Click it and Unblock the Notifications