ಪ್ರವಾಸಿ ತಾಣವಾಗಿ ಉಡುಪಿಯ 'ಮೂಡುಕುದ್ರು' ದ್ವೀಪ ಘೋಷಣೆ
ಉಡುಪಿ, ಸೆಪ್ಟೆಂಬರ್ 28: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಉಡುಪಿಯ ಸಂತೆಕಟ್ಟೆ ಸಮೀಪದ ಮೂಡುಕುದ್ರು ದ್ವೀಪವನ್ನು ಬುಧವಾರ ಸಂಜೆ ಪ್ರವಾಸಿ ತಾಣವನ್ನಾಗಿ ಘೋಷಣೆ ಮಾಡಲಾಗಿದೆ. ಗ್ರಾಮೀಣ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಘೋಷಣೆ ಮಾಡಲಾಗಿದೆ.
ಉಡುಪಿ ಜಿಲ್ಲಾಡಳಿತ, ಕಲ್ಯಾಣಪುರ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಹಕಾರದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉದ್ಘಾಟಿಸಿ 'ಮೂಡುಕುದ್ರು' ದ್ವೀಪವನ್ನು ಪ್ರವಾಸಿ ತಾಣವಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳು ಹಾಗೂ ಪ್ರವಾಸಿಗರನ್ನು ಸುಮಾರು ಅರ್ಧಗಂಟೆಯ ದೋಣಿ ಪ್ರಯಾಣದಲ್ಲಿ ಮೂಡುಕುದ್ರುವಿಗೆ ಕರೆದೊಯ್ಯಲಾಯಿತು. ಅಲ್ಲಿ ಗ್ರಾಮೀಣ ಪ್ರದೇಶದ ಜನರೇ ವ್ಯವಸ್ಥೆಗೊಳಿಸಿದ ಕಾರ್ಯಕ್ರಮದಲ್ಲಿ ನಂತರ ಅತಿಥಿಗಳು ಮತ್ತು ಪ್ರವಾಸಿಗರು ಭಾಗವಹಿಸಿದರು.
ಅತಿಥಿಗಳಿಗೆ ಸ್ಥಳೀಯ ಕಲೆ, ಸಂಸ್ಕೃತಿ, ಖಾದ್ಯಗಳನ್ನು ಬಡಿಸುವ ಮೂಲಕ ಗ್ರಾಮೀಣ ಬದುಕಿನ ಪರಿಚಯವನ್ನು ಮಾಡಿಕೊಡಲಾಯಿತು.
ಕಾರ್ಯಕ್ರಮವನ್ನು ದೊಂದಿ ಬೆಳಕನ್ನು ಹೊತ್ತಿಸುವ ಮೂಲಕ ಉದ್ಘಾಟಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಕುದ್ರುಗಳು ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿವೆ. ಇಲ್ಲಿನ ಪರಿಸರ, ಬದುಕನ್ನು ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲು ಸಾಧ್ಯವಿದೆ. ಇದು ಸ್ಥಳೀಯರಿಗೆ ಆರ್ಥಿಕ ಸಂಪನ್ಮೂಲವೂ ಆಗಲು ಸಾಧ್ಯವಿದೆ. ಈ ಮೂಲಕ ಸಮುದಾಯ ಆಧಾರಿತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಾಧ್ಯವಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಸ್ವಸಹಾಯ ಗುಂಪಿನ ಮಹಿಳೆಯರು ತಾವು ತಯಾರಿಸುವ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಿದ್ದರು.