ಧರ್ಮ ಸಂಸದ್ ನಲ್ಲಿ ರಾಮಮಂದಿರ ನಿರ್ಮಾಣ ನಿರ್ಣಯ?
ಉಡುಪಿ, ನವೆಂಬರ್ 23 : ಅಯೋಧ್ಯೆಯಲ್ಲಿ ನಿರ್ಮಾಣವಾಗೋ ರಾಮ ಮಂದಿರಕ್ಕೆ ಕರಾವಳಿಯಲ್ಲಿ ಸಿದ್ಧತೆ ನಡೀತಿದೆ. ಸಾಧು ಸಂತರು ಸೇರಿಕೊಂಡು ರಾಮಮಂದಿರ ನಿರ್ಮಾಣಕ್ಕೆ ಬುನಾದಿ ಹಾಕುತ್ತಿದ್ದಾರೆ. ಕಡಲತಡಿಯಲ್ಲಿ ನಡೆಯೋ ಧರ್ಮ ಸಂಸದ್ ನಿಂದ ನನಸಾಗುತ್ತಾ ರಾಮ ಮಂದಿರದ ಕನಸು.
ಇಂತಹಾ ಚರ್ಚೆಯೊಂದು ದೇಶಾದ್ಯಂತ ಚಾಲ್ತಿಗೆ ಬಂದಿದೆ. ಅದಕ್ಕೆ ಕಾರಣ ನಾಳೆ (ನವೆಂಬರ್ 24)ರಂದು ಉಡುಪಿಯಲ್ಲಿ ನಡೆಯಲಿರುವ ಧರ್ಮಸಂಸದ್.
ಉಡುಪಿಯಲ್ಲಿ ಹಿಂದೂ ಧರ್ಮಸಂಸದ್ ಸಾಧು ಸಂತರ ಸಮಾವೇಶಕ್ಕೆ ವೇದಿಕೆ ನಿರ್ಮಾಣವಾಗುತ್ತಿದ್ದಂತೆ ಅಯೋಧ್ಯೆ ರಾಮಜನ್ಮಭೂಮಿ ವಿಚಾರ ಮತ್ತೆ ಗರಿಗೆದರಿದೆ. ರಾಮಮಂದಿರ ಕುರಿತು ಹಿಂದೂ ಧರ್ಮಸಂಸದ್ ನಲ್ಲಿ ಈ ಕುರಿತ ಮಹತ್ವದ ನಿರ್ಣಯ ಹೊರಬೀಳಲಿದೆ.
ಆರ್ಟ್ ಆಫ್ ಲಿವಿಂಗ್ ನ ಶ್ರೀರವಿಶಂಕರ ಗುರೂಜಿ ಅಯೋಧ್ಯೆ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದ ಬಳಿಕ ರಾಮ ಮಂದಿರ ನಿರ್ಮಾಣವಾಗುವ ಸಾಧ್ಯತೆ ಬಗ್ಗೆ ಕೇಳಿಬರುತ್ತಿದೆ. ರವಿಶಂಕರ ಗುರೂಜಿ ಎರಡೂ ಪಂಗಡದವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಇದೆಲ್ಲದರ ಮಧ್ಯೆ ಇತ್ತ ಕರಾವಳಿಯ ಉಡುಪಿಯಲ್ಲಿ ಧರ್ಮಸಂಸದ್ ಸಾಧು ಸಂತರ ಸಮ್ಮೇಳನ ನಡೆಯುತ್ತಿದೆ. ಇದರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರ ಪ್ರಮುಖವಾಗಿ ಚರ್ಚೆಗೆ ಬರಲಿದೆ.
ನವೆಂಬರ್ 24 ರಿಂದ ನವೆಂಬರ್ 26 ರ ತನಕ
ನವೆಂಬರ್ 24 ರಿಂದ ನವೆಂಬರ್ 26 ರ ತನಕ ಉಡುಪಿಯ ರಾಯಲ್ ಗಾರ್ಡನ್ ಮೈದಾನದಲ್ಲಿ ಧರ್ಮ ಸಂಸದ್ ನಡೆಯಲಿದ್ದು ಇದರಲ್ಲಿ ಆರ್.ಎಸ್.ಎಸ್. ಸರಸಂಘಚಾಲಕ ಮೋಹನ್ ಭಾಗವತ್ ಭಾಗವಹಿಸಲಿದ್ದಾರೆ. ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಶೃಂಗೇರಿಯ ಶ್ರೀ ಭಾರತೀ ತೀರ್ಥ ಸ್ವಾಮೀಜಿ, ಕಂಚಿ ಕಾಮಕೋಟಿ ಶ್ರೀಗಳು, ಆರ್ಟ್ ಆಫ್ ಲಿವಿಂಗ್ನ ಶ್ರೀ ರವಿಶಂಕರ್ ಗುರೂಜಿ, ಮಾತಾ ಅಮೃತಾನಂದಮಯಿ, ಸಾಧ್ವಿ ಉಮಾಭಾರತಿ, ಆಯೋಧ್ಯೆಯ ಮಹಾಂತ ಧರ್ಮದಾಸ್, ಮುಂಬೈನ ಸಾಂದೀಪನಿ ಸಾಧನಾಶ್ರಮದ ಆಚಾರ್ಯರು, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಮತ್ತು ಪಂಜಾಬ್, ಬಿಹಾರ, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಿಂದಲೂ ನೂರಾರು ಮಂದಿ ಸ್ವಾಮೀಜಿಗಳು ಸಂಸದ್ನಲ್ಲಿ ಭಾಗವಹಿಸಲಿದ್ದಾರೆ. ಅದಲ್ಲದೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವೆ ಸಾಧ್ವಿ ಉಮಾಭಾರತಿ ಕೂಡ ಭಾಗವಹಿಸಲಿದ್ದಾರೆ.
ಯೋಗಿ ಆದಿತ್ಯಾನಾಥ ಕೂಡ ಭಾಗಿ
ಅದೆಲ್ಲಕ್ಕೂ ಮಿಕ್ಕಿ ಈ ಧರ್ಮ ಸಂಸದ್ ನಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣದ ಮಧ್ಯಸ್ಥಿಕೆ ವಹಿಸಿಕೊಳ್ಳುತ್ತಿರುವ ಶ್ರೀ ರವಿಶಂಕರ ಗುರೂಜಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗವಹಿಸುತ್ತಿರೋದು ರಾಮಮಂದಿರ ನಿರ್ಮಾಣದ ಸಾಧ್ಯತೆಯನ್ನು ಒತ್ತಿ ಹೇಳುತ್ತಿದೆ ಎಂದು ಅಂದಾಜಿಸಲಾಗಿದೆ. ವಿಶೇಷ ಅಂದರೆ ಸರಿ ಸುಮಾರು 32 ವರುಷಗಳ ಬಳಿಕ ಉಡುಪಿಯಲ್ಲಿ ಧರ್ಮ ಸಂಸದ್ ಆಯೋಜಿಸಲಾಗಿದೆ.
ಪೇಜಾವರ ಶ್ರೀಗಳ ಪೀಠಿಕೆ
1985 ರ ಧರ್ಮ ಸಂಸದ್ ಸಮಯದಲ್ಲಿ ಭಾಗವಹಿಸಿದ್ದ ಸಾಧು ಸಂತರು ಅಯೋಧ್ಯಾ ಚಳುವಳಿ ಹುಟ್ಟುಹಾಕಿದ್ದರು. ಅಂದಿನ ಅಯೋಧ್ಯೆ ರಥಯಾತ್ರೆಯಲ್ಲಿ ಉಡುಪಿಯ ಪರ್ಯಾಯ ಪೇಜಾವರ ಶ್ರೀಗಳೂ ಭಾಗವಹಿಸಿದ್ದರು. ಇದೀಗ ಪೇಜಾವರ ಶ್ರೀಗಳು ಮತ್ತೆ ರಾಮ ಮಂದಿರದ ಬಗ್ಗೆ ಮಾತಾಡಿದ್ದು. ಮಂದಿರ ನಿರ್ಮಾಣ ಸಾಧ್ಯತೆ ಬಗ್ಗೆಯೂ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಉಡುಪಿಯಲ್ಲಿ ಇನ್ನೊಂದು ಅಯೋಧ್ಯೆ ಚಳುವಳಿಗೆ ಪೇಜಾವರ ಶ್ರೀಗಳು ಧರ್ಮಸಂಸದ್ ನಲ್ಲಿ ಪಿಠಿಕೆ ಹಾಕಲಿದ್ದಾರೆಯೆ ಎಂದು ಕಾದು ನೋಡ ಬೇಕಿದೆ.
ರಾಮಂದಿರ ನಿರ್ಮಾಣ ನಿರ್ಣಯ ಗ್ಯಾರಂಟಿ
ಮುಂಬರುವ ಡಿಸೆಂಬರ್ 6 ಕ್ಕೆ ಬಾಬರಿ ಮಸೀದಿ ಧ್ವಂಸಗೊಂಡು 25 ವರುಷವಾಗುತ್ತಿದ್ದಂತೆಯೇ, ಇತ್ತ ಸಂತ ಸಮ್ಮೇಳನದಲ್ಲಿ ರಾಮಮಂದಿರ ನಿರ್ಮಾಣದ ಕುರಿತು ನಿರ್ಣಯ ಕೈಗೊಳ್ಳಲು ಸಾಧು ಸಂತರು ನಿಶ್ಚಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮಸಂಸದ್ ನತ್ತ ಎಲ್ಲರ ದೃಷ್ಠಿನೆಟ್ಟಿದೆ.