ಚುನಾವಣೆ ಗೆಲುವಿನ ಹರಕೆ ತೀರಿಸಿದ ಉಡುಪಿ ಬಿಜೆಪಿ ನಾಯಕರು
ಉಡುಪಿ, ಫೆಬ್ರವರಿ 04 : ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು ಭೂತಾರಾಧನೆ. ಇಲ್ಲಿಯ ಜನರು ದೇವೆರ ಆರಾಧನೆಯಂತೆ ಭೂತಾರಾಧನೆಯಲ್ಲೂ ಬಲವಾದ ನಂಬಿಕೆ ಇರಿಸಿದ್ದಾರೆ. ತುಳುನಾಡಿನಲ್ಲಿ ದೇವರಿಗಿಂತಲೂ ದೈವಗಳಿಗೇ ಪ್ರಾಮುಖ್ಯತೆ ಹೆಚ್ಚು. ಇಲ್ಲಿಯ ಜನ ಕಷ್ಟ-ಸುಖ ಎಲ್ಲದಕ್ಕೂ ದೈವದ ಮೊರೆ ಹೋಗೋದು ವಾಡಿಕೆ.
ಈ ಭಾಗದ ಜನರು ಮಾತ್ರವಲ್ಲದೇ ರಾಜಕಾರಣಿಗಳು ಕೂಡಾ ದೈವಕ್ಕೆ ಹರಕೆ ಹೊತ್ತು, ಸೋಲು ಗೆಲುವಿನ ಲೆಕ್ಕಾಚಾರ ಕೂಡ ಮಾಡ್ತಾರೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡುವ ಭರವಸೆಯನ್ನು ಚುನಾವಣೆಯಲ್ಲಿ ಗೆದ್ದಬಳಿಕ ಜನಪ್ರತಿನಿಧಿಗಳು ಮರೆಯುತ್ತಾರೆ ಎಂಬ ಅಪವಾದ ಜನಜನಿತ. ಆದರೆ ಉಡುಪಿಯ ಜನಪ್ರತಿನಿಧಿಗಳು ಮಾತ್ರ ದೈವಗಳ ಎದುರು ಹೊತ್ತಿದ್ದ ಹರಕೆ ತೀರಿಸಿದ್ದಾರೆ.
ಉಡುಪಿಯ ಬಿಜೆಪಿ ಕಚೇರಿಯ ಪಕ್ಕದಲ್ಲೇ ಇರುವ ಬಬ್ಬುಸ್ವಾಮಿ ದೈವದ ಸನ್ನಿಧಾನದಲ್ಲಿ ಬಿಜೆಪಿ ಶಾಸಕರು ಹರಕೆ ತೀರಿಸಿದ್ದಾರೆ. ಉಡುಪಿಯಲ್ಲಿ ಬಿಜೆಪಿಯವರು ಪ್ರತಿಯೊಂದು ಚುನಾವಣೆಗೂ ಮುನ್ನ ಬಬ್ಬುಸ್ವಾಮಿಗೆ ಕೈಮುಗಿದೇ ಪ್ರಚಾರಕ್ಕೆ ಹೋಗುವುದು ಹಿಂದಿನಿಂದಲು ನಡೆಸಿಕೊಂಡು ಬಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಬಿಜೆಪಿ ನಾಯಕರು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಗೆಲುವಿಗೆ ಹರಕೆ ಹೊತ್ತಿದ್ದರು.

ಕಳೆದ ಚುನಾವಣೆ ಸಂದರ್ಭದಲ್ಲಿ ಬಬ್ಬುಸ್ವಾಮಿಗೆ ಪೂಜೆ ಕೊಟ್ಟ ನಂತರವೇ ಪ್ರಚಾರಕ್ಕೆ ಹೊರಟಿದ್ದರು. ಚುನಾವಣೆಯಲ್ಲಿ ಜನ ಬಿಜೆಪಿಯ ಕೈ ಹಿಡಿದರು. ಜಿಲ್ಲೆಯ ಎಲ್ಲಾ ಐದು ವಿಧಾನ ಸಭಾ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. ಉಡುಪಿ ನಗರಸಭಾ ಚುನಾವಣೆಯಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತು . ಹಾಗಾಗಿ ಬಬ್ಬುಸ್ವಾಮಿ ದೈವಕ್ಕೆ ಕೃತಜ್ಞತೆ ತಿಳಿಸಿಲು ಬಿಜೆಪಿ ವತಿಯಿಂದ ನೇಮೋತ್ಸವ ಸೇವೆ ನಡೆಸಲಾಯಿತ್ತು.

ಬಬ್ಬುಸ್ವಾಮಿ - ತನ್ನಿ ಮಾನಿಗ, ಪಂಜುರ್ಲಿ, ಗುಳಿಗ, ದೂಮಾವತಿ, ಬಂಟ, ನೀಚದೈವ ಇವು ಕರಾವಳಿಯ ಆರಾಧ್ಯ ದೈವಗಳು. ಎಲ್ಲಾ ದೈವಗಳಿಗೂ ನೇಮೋತ್ಸವ ಮಾಡಿ ಸಂತುಷ್ಟಿಗೊಳಿಸಲಾಯ್ತು. ಒಂದು ರಾತ್ರಿ ಎರಡು ಹಗಲು ನಡೆದ ಈ ನೇಮೋತ್ಸವದಲ್ಲಿ ಜಿಲ್ಲೆಯ ಶಾಸಕರಾದ ರಘುಪತಿ ಭಟ್, ಹಲಾಡಿ ಶ್ರೀನಿವಾಸ್ ಶೆಟ್ಟಿ, ಸುನೀಲ್ ಕುಮಾರ್, ಲಾಲಾಜೀ ಮೆಂಡನ್, ಸುಕುಮಾರ್ ಶೆಟ್ಟಿ ಭಾಗಿಯಾಗಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವನ್ನು ಕರುಣಿಸುವಂತೆಯೂ ದೈವಗಳ ಬಳಿ ಬಿಜೆಪಿ ನಾಯಕರು ಪ್ರಾರ್ಥಿಸಿದರು.












Click it and Unblock the Notifications