ಅಂಪಾರು ರಾಜ್ಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು
ಉಡುಪಿ, ಜುಲೈ.16:ತಾಲೂಕಿನ ಅಂಪಾರು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಕಾರು ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಕುಂದಾಪುರ ತಾಲೂಕಿನ ಹೊಸ್ಮಠ ನಿವಾಸಿ ಕಿರಣ ಶೆಟ್ಟಿ (23) ಹಾಗೂ ಮಲ್ಯಾಡಿ ಮೂಲದ ದೀಕ್ಷಿತ್ ಶೆಟ್ಟಿ (23) ಮೃತ ದುರ್ದೈವಿಗಳು. ಅಪಘಾತದಲ್ಲಿ ಅರುಣ ಎಂಬಾತನಿಗೆ ಗಂಭೀರ ಗಾಯವಾಗಿದ್ದು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮನೀಷ್ ಹಾಗೂ ಜೀವನ್ ಎಂಬುವವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ರಜಾ ದಿನವಾದ್ದರಿಂದ ಸ್ನೇಹಿತರೆಲ್ಲರೂ ಎರಡು ಕಾರಿನಲ್ಲಿ ಜೋಗ ಜಲಪಾತ ನೋಡಲು ತೆರಳುತ್ತಿದ್ದು, ಸಂಜೆ ವೇಳೆ ಊರಿಗೆ ವಾಪಾಸಾಗುತ್ತಿದ್ದರು. ಇದೇ ವೇಳೆ ಕುಂದಾಪುರದಿಂದ ಸಿದ್ದಾಪುರದತ್ತ ಸಾಗಿಬಂದ ಖಾಸಗಿ ಬಸ್ ಸ್ಯಾಂಟ್ರೋ ಕಾರಿಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಐವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ದೀಕ್ಷಿತ್ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಕಿರಣ್ ಹಾಗೂ ಅರುಣ್ ಎಂಬಿಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಾಗ ಕಿರಣ್ ಕೂಡ ಮೃತಪಟ್ಟಿದ್ದಾರೆ.
ಸದ್ಯ ಅರುಣ್ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತ ಕಿರಣ್ ಶೆಟ್ಟಿ ವಿದ್ಯಾಭ್ಯಾಸದ ಬಳಿಕ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೀಕ್ಷಿತ್ ಕೊಣಾಜೆಯಲ್ಲಿ ಎಂ.ಎಸ್.ಸಿ ಮುಗಿಸಿ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಉದ್ಯೋಗ ಗಿಟ್ಟಿಸಿ ಆ.1ಕ್ಕೆ ಹಾಜರಾಗುವವರಿದ್ದರು.

ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕೆ ಭೇಟಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.












Click it and Unblock the Notifications