ಪಂಜಿನ ಮಂದ ಬೆಳಕಲ್ಲಿ ಅನಾವರಣಗೊಂಡ ಕೊರಗ ಮಕ್ಕಳ ಯಕ್ಷಲೋಕ
ಉಡುಪಿ, ಡಿಸೆಂಬರ್ 23: ಹಿಂದೆ ವಿದ್ಯುತ್ ದೀಪಗಳಿಲ್ಲದ ದಿನಗಳಲ್ಲಿ ಪ್ರಕೃತಿಯ ಮಡಿಲಲ್ಲಿ ದೊಂದಿ ಅಥವಾ ಪಂಜಿನ ಬೆಳಕಿನ ನಡುವೆ ಆಯೋಜಿಸಲಾಗುತ್ತಿದ್ದ ಯಕ್ಷಗಾನ ಪ್ರಸಂಗಗಳು ಪ್ರೇಕ್ಷಕರಿಗೆ ರಸದೌತಣ ಉಣ ಬಡಿಸುತ್ತಿತ್ತು . ಆ ಹಿಂದಿನ ಯಕ್ಷಗಾನದ ಗತ ವೈಭವದ ಪ್ರಯೋಗವನ್ನು ಉಡುಪಿಯಲ್ಲಿ ಇತ್ತೀಚೆಗೆ ಮಾಡಲಾಯಿತು.
ಕೊರಗರ ಮಕ್ಕಳ ಮನೆಯಲ್ಲಿ ದೊಂದಿ ಬೆಳಕಿನ ಯಕ್ಷ ಪ್ರಯೋಗ ಮಾಡಲಾಯಿತು. ಪ್ರಕೃತಿಯ ಮಡಿಲಲ್ಲಿ ಚುಮು ಚುಮು ಚಳಿಯ ನಡುವೆ ದೊಂದಿಯ ಮಂದ ಬೆಳಕಿನಲ್ಲಿ ಬಡಗುತಿಟ್ಟಿನ ಯಕ್ಷ ಪ್ರಯೋಗದೊಂದಿಗೆ ಯಕ್ಷಲೋಕಕ್ಕೆ ಕೊರಗರ ಮಕ್ಕಳು ಕಾಲಿಟ್ಟರು.
ಉಡುಪಿ ಯುವಕರ ಈ ಕ್ರಿಯೇಟಿವಿಟಿಗೆ ಒಂದು ಲೈಕ್ ಕೊಡಲ್ವಾ?
ಯಕ್ಷಗಾನ ವನ್ನು ಕರಾವಳಿಯ ಹೆಮ್ಮೆಯ ಗಂಡು ಕಲೆ ಎಂದೇ ಗುರುತಿಸಲಾಗುತ್ತದೆ. ಯಕ್ಷಗಾನಕ್ಕೆ ಮೂಲ ಪ್ರೇಕ್ಷಕರು ಅಂದರೆ ಕೊರಗ ಜನಾಂಗ. ಯಕ್ಷಗಾನದ ಮೂಲ ಪ್ರೇಕ್ಷಕರಿಗೆ ಮೂಲ ಸ್ವರೂಪವನ್ನು ಉಣಬಡಿಸಿ ಕೊರಗ ಜನಾಂಗಕ್ಕೆ ಯಕ್ಷ ಕಲೆಯಲ್ಲಿ ತೊಡಗಿಸಿಕೊಳ್ಳುವ ಹೊಸ ಪ್ರಯತ್ನ ಕೊರಗರ ಛಾವಡಿ ಮಕ್ಕಳ ಮನೆಯಲ್ಲಿ ನಡೆಯಿತು. ಮಂದ ಬೆಳಕಿನಲ್ಲಿ ಪ್ರಕ್ರತಿಯ ಮಡಿಲಲ್ಲಿ ನಡೆದ ಈ ಸಾಂಪ್ರದಾಯಿಕ ಪ್ರಯೋಗ ಗತಕಾಲದ ದಿನಗಳ ವೈಭವದ ಪರಿಚಯ ಮಾಡಿಕೊಟ್ಟಿತು.
ದಾರಿಯುದ್ದಕ್ಕೂ ಸಾಲು ಪ್ರಕೃತಿಯ ನಡುವೆ ದೊಂದಿ ಬೆಳಕಿನ ಮಂದ ಬೆಳಕು. ರಾತ್ರಿ ಕತ್ತಲಿಗೆ ಕೊರಗ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬುಟ್ಟಿ , ಡೋಲು ಪ್ರದರ್ಶನ. ರಾತ್ರಿ ಕತ್ತಲಿಗೆ ರಂಗೇರಿಸುವ ಬಡಗುತಿಟ್ಟಿನ ಯಕ್ಷ ನರ್ತನ. ಹೀಗೊಂದು ಯಕ್ಷ ಪ್ರಯೋಗ ನಡೆದಿದ್ದು ಕುಂದಾಪುರದ ಕುಂಭಾಶಿ ಕೊರಗರ ಮಕ್ಕಳ ಮನೆಯಲ್ಲಿ.
ಯಕ್ಷರಂಗದ 'ಚಾರ್ಲೀ ಚಾಪ್ಲಿನ್' ಸೀತಾರಾಮ್ ಕುಮಾರ್ ಕಟೀಲ್
ಬಾರ್ಕೂರು ಹುಭಾಶಿಕ ಕೊರಗರ ವೇದಿಕೆ ವತಿಯಿಂದ ಬಡಗುತಿಟ್ಟಿನ ಅತಿಥಿ ಕಲಾವಿದರು ಧ್ರುವ ಚರಿತ್ರೆ ಪ್ರಸಂಗದ ಮೂಲಕ ಪ್ರಕೃತಿಯ ಮಡಿಲಲ್ಲಿ ವಿಶಿಷ್ಟ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶಿಸಿದರು. ದಶಕಗಳ ಹಿಂದೆ ಗ್ರಾಮೀಣ ಪ್ರದೇಶದ ಹಾಡಿಗಳಲ್ಲಿ ನಡೆಯುತ್ತಿದ್ದ ಈ ಯಕ್ಷ ಪ್ರಯೋಗ ಮೂಲ ನಿವಾಸಿಗಳ ಜೊತೆ ನೆರೆದ ಯಕ್ಷಪ್ರಿಯರಿಗೂ ಮುದ ನೀಡಿತು.
ಯಕ್ಷಗಾನದಷ್ಟು ಪ್ರಯೋಗಗಳಿಗೆ ಒಡ್ಡಿಕೊಂಡ ಇನ್ನೊಂದು ಜನಪದ ಕಲೆ ದೇಶದಲ್ಲೇ ಇಲ್ಲ. ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣದಿಂದ ಯಕ್ಷಗಾನ ಜಗತ್ ಪ್ರಸಿದ್ಧ ಕಲೆಯಾಗಿರುವುದಕ್ಕೆ ಇಂತಹ ಪ್ರಯೋಗಗಳೇ ಕಾರಣವಿರಬಹುದು.