ಉಡುಪಿಯಲ್ಲಿ ಬುಧವಾರ ಕೃಷ್ಣಾಷ್ಟಮಿ, ಗುರುವಾರ ವಿಟ್ಲಪಿಂಡಿ ಉತ್ಸವ
ಉಡುಪಿ, ಸೆಪ್ಟೆಂಬರ್ 13: ಉಡುಪಿಯಲ್ಲಿ ಇಂದು ಮತ್ತು ನಾಳೆ (ಸೆಪ್ಟೆಂಬರ್ 13, 14) ಶ್ರೀಕೃಷ್ಮಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಕಡೆಗೋಲು ಕೃಷ್ಣನ ಆರಾಧನೆಗೆ ರಥಬೀದಿ ಸಿದ್ಧವಾಗಿದೆ. ಕೃಷ್ಣ ಜಯಂತಿ ಉತ್ಸವ ಬುಧವಾರ ನಡೆಯಲಿದ್ದು, ಗುರುವಾರ ಶ್ರೀ ಕೃಷ್ಣ ಲೀಲೋತ್ಸವ ನಡೆಯಲಿದೆ. ಭಕ್ತರಿಗೆ ಪ್ರಸಾದವಾಗಿ ಹಂಚುವುದಕ್ಕಾಗಿ ಉಂಡೆ-ಚಕ್ಕುಲಿ ಸಿದ್ಧಗೊಂಡಿದೆ.
ಅಷ್ಟ ಮಠಗಳಿರುವ ರಥಬೀದಿಯಲ್ಲಿ ಕೃಷ್ಣನ ಜನ್ಮಾಷ್ಟಮಿ ಸಂಭ್ರಮಕ್ಕೆ ಸಿದ್ಧತೆ ಪೂರ್ಣಗೊಂಡಿದೆ. ರಥಬೀದಿಯಲ್ಲಿ ಮರದ ಗುರ್ಜಿಗಳನ್ನು ಹಾಕಿ, ಮೊಸರು ಕುಡಿಕೆಗೆ ಸಿದ್ಧತೆ ನಡೆಸಲಾಗಿದೆ. ಇಂದು ಮತ್ತೆ ನಾಳೆ ಎರಡು ದಿನ ಇಡೀ ಉಡುಪಿ ನಂದಗೋಕುಲವಾಗಿ ಕಂಗೊಳಿಸಲಿದ್ದು, ಹರಿ ಭಕ್ತಿಯಲ್ಲಿ ಭಕ್ತಜನ ಮಿಂದೇಳಲಿದ್ದಾರೆ.

ಆಚಾರ್ಯ ಮಧ್ವರಿಂದ ಸ್ಥಾಪನೆಯಾದ ಕೃಷ್ಣನ ಮೂರ್ತಿಗೆ ಎಂಟು ಶತಮಾನಗಳ ಇತಿಹಾಸವಿದೆ. ಕೃಷ್ಣ ದೇವರ ಮಠದಲ್ಲಿ ಪರಂಪರಾಗತವಾಗಿ ಜನ್ಮಾಷ್ಟಮಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಇತರೆ ಕಡೆ ಕಳೆದ ತಿಂಗಳು ಶ್ರಾವಣ ಮಾಸದ ಅಷ್ಟಮಿಯನ್ನೇ ಕೃಷ್ಣಾಷ್ಟಮಿ ಎಂದು ಆಚರಿಸಲಾಗಿದೆ.
ಆದರೆ, ಉಡುಪಿಯಲ್ಲಿ ಸೌರಮಾನದ ಸಿಂಹ ಮಾಸದ ಅಷ್ಟಮಿಯಂದೇ ಕೃಷ್ಣ ಜಯಂತಿಯನ್ನು ಆಚರಿಸುವ ಪದ್ಧತಿ ಇದೆ. ಹೀಗಾಗಿ ಸಿಂಹ ಮಾಸದ ಕೃಷ್ಣ ಪಕ್ಷ ದಿನವಾದ ಇಂದು ಕೃಷ್ಣ ಜಯಂತಿ ಆಚರಿಸಲಾಗುತ್ತದೆ.

ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ ಅಂಗವಾಗಿ ವಿಟ್ಲಪಿಂಡಿ ಉತ್ಸವ ಗುರುವಾರ ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ನಾಳೆ ವಿಟ್ಲಪಿಂಡಿಯ ದಿನ ಬರುವ ಭಕ್ತರಿಗೆ ಹಂಚುವುದಕ್ಕಾಗಿ ಮಠದ ಪಾಕ ಶಾಲೆಯಲ್ಲಿ 1 ಲಕ್ಷದ 50 ಸಾವಿರ ಚಕ್ಕುಲಿ ಸಿದ್ಧವಾಗುತ್ತಿದೆ.
ನಾಲ್ಕೈದು ಬಗೆಯ 75 ಸಾವಿರ ಉಂಡೆಗಳು ಸಿದ್ಧಗೊಂಡಿವೆ. ಕೃಷ್ಣನಿಗೂ ಅರ್ಪಣೆ ಮಾಡಲು ಬಗೆಬಗೆಯ ಉಂಡೆ- ಚಕ್ಕುಲಿಗಳು ಸಿದ್ಧವಾಗುತ್ತಿದೆ. 32 ಸಾವಿರ ಶಾಲಾ ಮಕ್ಕಳಿಗೆ ಉಂಡೆ- ಚಕ್ಕುಲಿ ಕೃಷ್ಣನ ಪ್ರಸಾದ ರೂಪದಲ್ಲಿ ವಿತರಣೆಯಾಗಲಿದೆ.

ಬುಧವಾರ ಮಧ್ಯರಾತ್ರಿ ಪರ್ಯಾಯ ಶ್ರೀಗಳಾದ ವಿಶ್ವೇಶತೀರ್ಥರು ಅರ್ಘ್ಯ ಪ್ರಧಾನ ಮಾಡುವ ಮೂಲಕ ಶ್ರೀಕೃಷ್ಣನನ್ನು ಬರಮಾಡಿಕೊಂಡರೆ, ವಿಟ್ಲಪಿಂಡಿಯ ದಿನ ಭಕ್ತಜನ ಗೊಲ್ಲರ ವೇಷ ಧರಿಸಿ ಮೊಸರು ಕುಡಿಕೆ ಒಡೆದು ಕೃಷ್ಣನ ಜನನದ ಸಂಭ್ರಮವನ್ನು ಆಚರಿಸಲಿದ್ದಾರೆ.

ಉಡುಪಿಯಲ್ಲಿ ಅಷ್ಟಮಿ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗಿರದೆ ಕಲಾರಾಧನೆಯ ಮೂಲಕವೂ ಕೃಷ್ಣನನ್ನು ಪೂಜಿಸಲಾಗುತ್ತದೆ. ದೇಶದ ನಾನಾ ಭಾಗದಿಂದ ಕೃಷ್ಣ ಭಕ್ತ ವೃಂದ ಉಡುಪಿಗೆ ಹರಿದು ಬರಲಿದೆ.












Click it and Unblock the Notifications