ಉಡುಪಿಯಲ್ಲಿ ಮೊಬೈಲ್ ಆಸೆಗೆ ಸಿಕ್ಕಿದ್ದು ಆರತಿ ತಟ್ಟೆ, ದೇವರ ಗಂಟೆ
ಉಡುಪಿ, ಅಕ್ಟೋಬರ್ 12: "ನಿಮ್ ಮೊಬೈಲ್ ನಂಬರ್ ಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಸಿಕ್ಕಿದೆ. ಈಗ್ಲೇ ಪರ್ಚೇಸ್ ಮಾಡಿ ಬರೇ 1850 ರೂಪಾಯಿಗೆ". ಮೊಬೈಲ್ ಗೆ ಬಂದ ಹೀಗೊಂದು ಮೆಸೇಜ್ ಗೆ ಮರುಳಾಗಿ ಹಣ ಪಾವತಿಸಿದಾಗ ಬಂದ ಪಾರ್ಸಲ್ ನಲ್ಲಿ ದೇವರ ವಿಗೃಹ, ಆರತಿ ತಟ್ಟೆ, ಗಂಟೆ ಕಳುಹಿಸಿ ವಂಚಿಸಿದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿಯ ಕಲ್ಯಾಣಪುರ ನಿವಾಸಿ ಹರೀಶ್ ಕುಮಾರ್ ಅವರೇ ಈ ರೀತಿ ಮೋಸ ಹೋದವರಾಗಿದ್ದಾರೆ.
ಹರೀಶ್ ಕುಮಾರ್ ಎಂಬವರಿಗೆ ಎಸ್.ಕೆ.ವರ್ಲ್ಡ್ ಅನ್ನೋ ಸಂಸ್ಥೆಯಿಂದ ಕರೆ ಬಂದಿತ್ತು. ನಿಮ್ಮ ಮೊಬೈಲ್ ನಂಬರ್ ಲಕ್ಕಿ ಡ್ರಾ ದಲ್ಲಿ ಆಯ್ಕೆಯಾಗಿದ್ದು 10 ಸಾವಿರ ರೂಪಾಯಿ ಬೆಲೆ ಬಾಳುವ ಮೊಬೈಲ್ ಬರೇ 1850 ರೂಪಾಯಿ ಪಾವತಿಸಿದರೆ ನಿಮಗೆ ಪೋಸ್ಟ್ ಮೂಲಕ ಕಳಿಸಲಾಗುವುದು ಎಂದು ಕರೆ ಮಾಡಿ ತಿಳಿಸಿದ್ದರು.
ಇದಕ್ಕೆ ಹರೀಶ್ ಕುಮಾರ್ ಸ್ಪಂದಿಸಿ ಮೊಬೈಲ್ ಕಳುಹಿಸಿಕೊಡುವಂತೆ ಸೂಚಿಸಿದ್ದರು.
ಆದರೆ ಅದ್ಯಾವಾಗ ಮೊಬೈಲ್ ಬಂದು ಕೈ ಸೇರಿತೋ ಅದಾಗಲೇ ಹರೀಶ್ ಕುಮಾರ್ ರವರಿಗೆ ಬಾಕ್ಸ್ ಕಂಡ ಕೂಡಲೇ ಮೋಸ ಹೋಗಿರುವುದು ಅರಿವಾಯಿತು.
ಆದರೂ ಹರೀಶ್ ಹಣ ಪಾವತಿಸಿ ಪಾರ್ಸಲ್ ಬಾಕ್ಸ್ ಪಡೆದಿದ್ದಾರೆ. ಪಾರ್ಸಲ್ ಬಾಕ್ಸ್ ನಲ್ಲಿ ಮೊಬೈಲ್ ಬದಲಿಗೆ ದೇವರ ವಿಗ್ರಹ, ದೀಪ, ಗಂಟಾಮಣಿ, ಆರತಿ ತಟ್ಟೆಗಳು ಕಂಡು ಒಂದು ಕ್ಷಣ ಹೌ ಹಾರಿದ್ದಾರೆ.
ತಕ್ಷಣ ಹರೀಶ್ ಕುಮಾರ್ ಪೋಸ್ಟ್ ಆಫೀಸ್ ಗೆ ಅರ್ಜಿಯೊಂದನ್ನು ಬರೆದು ತನಗಾದ ಅನ್ಯಾಯದ ಬಗ್ಗೆ ವಿವರಿಸಿ ತಾನು ನೀಡಿದ ಮೊತ್ತವನ್ನು ತಡೆ ಹಿಡಿಯುವಂತೆ ಕೋರಿದ್ದಾರೆ.
ಈ ರೀತಿಯ ವಂಚನೆ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಆಫರ್ ಗಳಿಗೆ ಮರುಳಾಗುತ್ತಲೇ ಇದ್ದಾರೆ. ವಂಚನೆಗೆ ಒಳಗಾದವರು ಅದರ ಬಗ್ಗೆ ಗೊಣಗುತ್ತಾ, ಕಳುಹಿಸಿದ ದೇವರ ಮೂರ್ತಿಗೆ ಗಂಟೆ ಆಡಿಸುತ್ತಾ, ಆರತಿ ಬೆಳಗುತ್ತಿರಿ ಎಂದು ವಂಚಕರು ಮೋಸ ಮಾಡುತ್ತಲೇ ಇರುತ್ತಾರೆ.
ಇಂತಹ ವಂಚನೆ ನಡೆಸುವವರಿಗೆ ಕಠಿಣ ಶಿಕ್ಷೆ ನೀಡುವ ಅಗತ್ಯವಿದೆ.