ಅಕ್ರಮ ಮರಳು ಗಣಿಗಾರಿಕೆ; ತಹಶೀಲ್ದಾರ್ ದಾಳಿ ಬಗ್ಗೆ ಮಾಹಿತಿ ಸೋರಿಕೆ!
ಉಡುಪಿ, ಜುಲೈ 09; ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ತಹಶೀಲ್ದಾರ್ ದಾಳಿ ನಡೆಸುವ ವಿಚಾರವನ್ನು ಅಧಿಕಾರಿಗಳೇ ದಂಧೆಕೋರರಿಗೆ ನೀಡಿದ್ದಾರೆ. ಇದರಿಂದಾಗಿ ಅವರು ಪರಾರಿಯಾಗಲು ಸಹಾಯ ಮಾಡಿದ ಘಟನೆ ಉಡುಪಿ ಜಿಲ್ಲೆಯ ಶಿರ್ವದಲ್ಲಿ ನಡೆದಿದೆ.
ಶಿರ್ವದ ಮುಟ್ಲಪಾಡಿ ಬಳಿ ಎಗ್ಗಿಲ್ಲದೇ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಕಾಪು ತಹಶೀಲ್ದಾರ್ ಪ್ರತಿಭಾ ದಾಳಿ ನಡೆಸಿದ್ದು, ತಹಶೀಲ್ದಾರ್ ದಾಳಿ ಬಗ್ಗೆ ಗಣಿ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿ ಆರೋಪಿಗಳು ಪರಾರಿಯಾಗಿದ್ದಾರೆ.
ಹಲವು ದಿನಗಳಿಂದ ಶಿರ್ವ ಬಳಿಯ ಮುಟ್ಲುಪಾಡಿ ಸೇತುವೆ ಕೆಳಗಡೆ ಕೇರಳ ಮೂಲದ ಕೋಶಿ ಎಂಬಾತನ ತೋಟದ ಜಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತಿತ್ತು. ಹಗಲಿನಲ್ಲೇ ಯಾರ ಭಯವೂ ಇಲ್ಲದೇ ರಾಜಾರೋಷವಾಗಿ ಹೊಳೆಗೆ ಡ್ರಜ್ಜಿಂಗ್ ಮಿಶಿನ್ ಗಳನ್ನು ಹಾಕಿ ಮರಳು ತೆಗೆದು ನೂರಾರು ಲೋಡು ಸಾಗಿಸುತ್ತಿದ್ದರು.

ಸ್ಥಳೀಯರು ಶಿರ್ವ ಪೊಲೀಸರಿಗೆ ಹಾಗೂ ಗಣಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರ ಮೂಲಕ ಕಾಪು ತಹಶೀಲ್ದಾರ್ಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ಪ್ರಾಮಾಣಿಕ ಅಧಿಕಾರಿ ತಹಶೀಲ್ದಾರ್ ಪ್ರತಿಭಾ ಅಕ್ರಮ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.
ಆದರೆ ತಹಶೀಲ್ದಾರ್ ದಾಳಿ ವೇಳೆ ದಂಧೆಕೋರರು ಸ್ಥಳದಲ್ಲಿದ್ದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಲಾರಿಗಳನ್ನು ಸ್ಥಳಾಂತರ ಮಾಡಿದ್ದಾರೆ. ಹೊಳೆಯಲ್ಲಿ ಡ್ರಜ್ಜಿಂಗ್ ಮೆಶಿನ್ ಇದ್ದ ದೋಣಿಯನ್ನು ತೆರವುಗೊಳಿಸಿದ್ದಾರೆ. ಆದರೆ, ಪೈಪುಗಳನ್ನ ಅಲ್ಲೇ ಹೊಳೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಮತ್ತೊಂದು ಭಾಗದಲ್ಲಿ ಜೆಸಿಬಿಯನ್ನು ಲಾರಿ ಮೂಲಕ ಸಾಗಿಸಲು ಪ್ರಯತ್ನ ಪಡುವಷ್ಟರಲ್ಲಿ ತಹಶೀಲ್ದಾರ್ ದಾಳಿ ನಡೆಸಿಯಾಗಿತ್ತು. ಹೀಗಾಗಿ ಜೆಸಿಬಿ ಸಹಿತ ಲಾರಿಯನ್ನು ತಹಶೀಲ್ದಾರ್ ವಶಪಡಿಸಿಕೊಂಡಿದ್ದಾರೆ.
ಕಾಪು ಭಾಗದಲ್ಲಿ ಹಲವೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖೆ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ.












Click it and Unblock the Notifications