'ಸರ್ಕಾರ ಸುಭದ್ರವಾಗಿದೆ. ನೀವ್ಯಾಕೆ ತಲೆ ಕೆಡಿಸ್ಕೋತೀರಿ?'
ಉಡುಪಿ, ಜೂನ್ 18: ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ರಾಜ್ಯ ಸರ್ಕಾರ ಸುಭದ್ರವಾಗಿದೆ. ಮಾಧ್ಯಮಗಳು ಸರ್ಕಾರಕ್ಕೆ ಸಹಕರಿಸಿ. ನಮ್ಮ ತಪ್ಪಿದ್ದರೆ ಅದನ್ನು ಎತ್ತಿ ತೋರಿಸಿ ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ.
ಐಎಂಎ ಹಗರಣಕ್ಕೆ ಸ್ಫೋಟಕ ತಿರುವು ನೀಡಿದ ಸಚಿವರ ಹೇಳಿಕೆ
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ದೆಹಲಿ ಪ್ರವಾಸ ವಿಚಾರ, ಕಾಂಗ್ರೆಸ್ ವರಿಷ್ಠ ರಾಹುಲ್ ಭೇಟಿ ಹಿನ್ನೆಲೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯ ಡೆಲ್ಲಿಗೆ ಹೋಗ್ಬಾರ್ದಾ? ರಾಹುಲ್ ಗಾಂಧಿಯವರನ್ನು ಭೇಟಿ ಮಾಡಬಾರದಾ? ಸಿದ್ದರಾಮಯ್ಯ ರಾಹುಲ್ ಭೇಟಿಯಾದ್ರೆ ಆಶ್ಚರ್ಯ ಯಾಕೆ? ಯಾರ ವಿರುದ್ಧ ಯಾರು ದೂರು ಕೊಡ್ತಾರೆ? ಮಾಧ್ಯಮಗಳು ಏನೇನೋ ಮಾತನಾಡೋದಕ್ಕೆ ಹೋಗ್ಬೇಡಿ, ನೀವ್ಯಾಕೆ ತಲೆ ಕೆಡಿಸ್ಕೋತೀರಿ? ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದರು. ಡಿಕೆಶಿ ಯಾವಾಗ ಪಕ್ಷದ ಅಧ್ಯಕ್ಷರಾಗ್ತಾರೆ ಗೊತ್ತಿಲ್ಲ. ಪಕ್ಷದ ರಾಜ್ಯ ಅಧ್ಯಕ್ಷರ ನೇಮಕ ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎಂದು ಹೇಳಿದರು.
ಉಡುಪಿಯಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸಭೆಗೆ ಉಸ್ತುವಾರಿ ಸಚಿವೆ ಜಯಮಾಲಾ ಗೈರಾಗಿದ್ದರು. ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಪ್ರವಾಹ ನಿರ್ವಹಣಾ ಸಭೆ ನಡೆಯಿತು. ಸಚಿವೆ ಜಯಮಾಲಾ ಗೈರನ್ನು ಸಮರ್ಥಿಸಿಕೊಂಡ ದೇಶಪಾಂಡೆ, ಜಯಮಾಲಾ ಬೆಂಗಳೂರಿನಲ್ಲಿ 30 ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆಗೆ ಬಂದು ಸಮಸ್ಯೆ ಅರಿತುಕೊಳ್ಳಬೇಕಿತ್ತು. ಹೆಣ್ಮಕ್ಕಳ ಮೇಲೆ ಸ್ವಲ್ಪ ಕಾಳಜಿ ಮಾಡ್ರೀ ಎಂದರು.