ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ: ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ, ಸೆಪ್ಟೆಂಬರ್.21: ರಾಜ್ಯವೇ ಕಂಡು ಕೇಳರಿಯದ ದಬ್ಬಾಳಿಕೆ ಗುರುವಾರ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಎಸ್ ವೈ ಮನೆಗೆ ಮುತ್ತಿಗೆ ಹಾಕಿದ್ದಾರೆ ಇದು ಸಮ್ಮಿಶ್ರ ಸರ್ಕಾರದ ಗೂಂಡಾಗಿರಿ ಎಂದು ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಳುವ ಪಕ್ಷದ ಆಣತಿಯಂತೆ ಎಲ್ಲವೂ ನಡೆದಿದೆ. ಸಿಎಂ ಭಯೋತ್ಪಾದಕನ ರೀತಿ ಹೇಳಿಕೆ ಕೊಡುತ್ತಾರೆ. ಅವರ ಮಾದರಿಯಲ್ಲೇ ದಂಗೆ ಏಳುವುದಾಗಿ ಕರೆ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ಆಡಳಿತದಲ್ಲಿ ಹಿಡಿತ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಯಡಿಯೂರಪ್ಪ ಮೇಲಿನ ಎಲ್ಲಾ ಕೇಸ್ ಖುಲಾಸೆಯಾಗಿದೆ. ಸಿಎಂ ಹಳೇ ಕೇಸ್ ರೀ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದಾರೆ.

ರೇವಣ್ಣ ಮೇಲಿನ ಕೇಸಿಗೂ ಪುನರ್ ಜೀವ ಕೊಡಿಸ್ತಾರಾ? ಎಂದು ಪ್ರಶ್ನಿಸಿದರು. ರೇವಣ್ಣ ಮೇಲೆ ಭಾರೀ ಭೂಕಬಳಿಕೆ ಆರೋಪವಿದೆ. ಹಾಗಾದರೆ ಮಾಜಿ ಸಚಿವ ಓಲೆ ಮಂಜು ಆರೋಪಗಳ ಸಮಗ್ರ ತನಿಖೆ ಮಾಡಿಸ್ತಾರಾ ಎಂದು ಪೂಜಾರಿ ಸವಾಲು ಹಾಕಿದರು.
ಡಿಕೆಶಿಯವರನ್ನು ಸಚಿವ ಸಂಪುಟದಿಂದ ಕೈಬಿಡಿ. ಇಡಿ ತನಿಖೆ ನಡೆಯುವಾಗ ಡಿಕೆ ಅಧಿಕಾರದಲ್ಲಿ ಇರುವುದು ಎಷ್ಟು ಸರಿ?ರಾಜ್ಯದಲ್ಲಿ ಗೂಂಡಾಗಿರಿ ರಾಜಕಾರಣ ನಡೆಯೋದಿಲ್ಲ. ಕಾಂಗ್ರೆಸ್ ನಾಯಕ ಜಾರಕಿ ಹೋಳಿ ಸಹೋದರರಿಗೆ ಅಸಮಾಧಾನವಿದೆ.
ಕುಂದಾನಗರದ ಮೇಲೆ ಕನಕಪುರದ ಬಂಡೆ ಬಿದ್ದಿದೆ. ಕಾಂಗ್ರೆಸ್ ನ ಒಳಗೆ ಯಾವುದೂ ಸರಿಯಿಲ್ಲ ಎಂದು ಅವರೇ ಒಪ್ಪಿದ್ದಾರೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.












Click it and Unblock the Notifications