ಕೃಷ್ಣಮಠದಲ್ಲಿ ನಡೆಯುವ ನಾಗಮಂಡಲದ ವಿಶೇಷವೇನು ಗೊತ್ತೆ?
ಉಡುಪಿ, ಜನವರಿ 6: ಮುಗಿಲು ಮುಟ್ಟಿದ ನಾಗಸ್ವರ ನಾದ. ಅದಕ್ಕೆ ತಕ್ಕಂತೆ ಕುಣಿಯುವ ನಾಗಪಾತ್ರಿ. ಕೈಯ್ಯಲ್ಲಿ ಡಮರುಗ ಹೊತ್ತು ಸುತ್ತು ಬರುವ ನಾಗಕನ್ನಿಕೆ, ಕರಾವಳಿಯ ನಾಗಮಂಡಲವೆಂದರೆ ಭಕ್ತಿ ಮತ್ತು ಶ್ರದ್ಧೆಯ ಪ್ರತೀಕ. ಆವೇಶಭರಿತ ನಾಗಪಾತ್ರಿಯ ಚಲನೆಯನ್ನು ನೋಡುವುದೇ ರೋಮಾಂಚನ. ಈ ನಾಗನೃತ್ಯ ನೋಡಲು ಸಾವಿರಾರು ಜನ ಸೇರುತ್ತಾರೆ.
ಉಡುಪಿಯ ಕೃಷ್ಣ ಮಠದಲ್ಲಿ ನಾಗ ದೇವರೇ ಸಂಪತ್ತಿನ ರಕ್ಷಣೆ ಮಾಡುತ್ತಾರೆಂಬ ನಂಬಿಕೆ ಇದೆ. ಹೀಗಾಗಿ ಪ್ರತಿಯೊಬ್ಬ ಮಠಾಧೀಶರೂ ತಮ್ಮ ಪರ್ಯಾಯ ಮಹೋತ್ಸವ ಅಂತ್ಯದಲ್ಲಿ ನಾಗದೇವರ ಸಂಪ್ರೀತಿಗಾಗಿ ನಾಗಮಂಡಲ ನಡೆಸುತ್ತಾರೆ. ಪಲಿಮಾರು ಪರ್ಯಾಯ ಮಠದವರು ನಡೆಸಿದ ನಾಗಮಂಡಲದ ವಿಶೇಷತೆಗಳೇನು?
ನಾಗಮಂಡಲ ಮಾಡಲು ಸುಬ್ರಮಣ್ಯ ದೇವರು ಬಂದು ಹೇಳಿದ್ನಾ: ವಿನಯ್ ಗುರೂಜಿ ವಿವಾದದ ಹೇಳಿಕೆ
ಪ್ರಸಿದ್ಧ ಯಾತ್ರಾ ಸ್ಥಳ, ಉಡುಪಿಯ ಕೃಷ್ಣಮಠದಲ್ಲಿ ನಡೆಯುವ ನಾಗಾರಾಧನೆ ವಿಶಿಷ್ಟಪೂರ್ಣವಾದದ್ದು. ಅಷ್ಟಮಠಾಧೀಶರು ತಮ್ಮ ಪರ್ಯಾಯ ಸಮಾಪ್ತಿಯ ಕಾಲದಲ್ಲಿ ನಾಗದೇವರಿಗೆ ಈ ವಿಶೇಷ ಸೇವೆ ಸಲ್ಲಿಸುತ್ತಾರೆ. ಸದ್ಯ ಪಲಿಮಾರು ಮಠದ ಪರ್ಯಾಯ ಮುಗಿಯುವ ಹಂತಕ್ಕೆ ಬಂದಿದ್ದು, ವಿದ್ಯಾಧೀಶ ತೀರ್ಥರು ಈ ನಾಗಮಂಡಲ ಏರ್ಪಡಿಸಿದ್ದರು.
ನಾಲ್ಕು ಶತಮಾನದ ಹಿಂದೆ ಭಾರೀ ಪ್ರಮಾಣದ ಸಂಪತ್ತು ಕೃಷ್ಣಮಠಕ್ಕೆ ಕೊಡುಗೆಯ ರೂಪದಲ್ಲಿ ಸಿಕ್ಕಿತ್ತು. ಯತಿ ಸಾರ್ವಭೌಮ ವಾದಿರಾಜ ಸ್ವಾಮಿಗಳ ಪವಾಡಗಳಿಂದ ಬೆರಗಾದ ಮುಸ್ಲಿಂ ಅರಸ ಈ ಸಂಪತ್ತನ್ನು ದಾನ ಮಾಡಿದ್ದ. ದಾನರೂಪದಲ್ಲಿ ಬಂದ ಸಂಪತ್ತನ್ನು ಕೃಷ್ಣನ ಆಜ್ಞೆಯಂತೆ ವಾದಿರಾಜ ಸ್ವಾಮಿಗಳು ಭೂಮಿಯಡಿ ಹೂತು, ನಾಗ ದೇವರ ರಕ್ಷಣೆಯಲ್ಲಿ ಇರಿಸಿದ್ದಾರೆ ಅನ್ನುವುದು ನಂಬಿಕೆ. ಕೃಷ್ಣಮಠದ ಹೊರ ಆವರಣದಲ್ಲಿ ಸುಬ್ರಹ್ಮಣ್ಯ ದೇವರ ಗುಡಿಯಿದ್ದು, ಇದರಡಿ ಅಪಾರ ಪ್ರಮಾಣದ ಸಂಪತ್ತು ಸಂಗ್ರಹವಾಗಿದೆ ಅನ್ನೋದು ಭಕ್ತರ ನಂಬಿಕೆ. ಈ ನಾಗ ದೇವರ ಸಂಪ್ರೀತಿಗೆ ಪ್ರತೀ ಎರಡು ವರ್ಷಕ್ಕೊಮ್ಮೆ ನಾಗಮಂಡಲ ನಡೆಯುತ್ತದೆ. ಹಳದಿ ಬಣ್ಣದ ಮಂಡಲದ ಸುತ್ತಲೂ ನಾಗಪಾತ್ರಿ ಮತ್ತು ನಾಗಕನ್ನಿಕೆಯರ ಈ ನೃತ್ಯದಿಂದ ದೇವರು ಸಂಪ್ರೀತನಾಗುತ್ತಾನೆ ಅನ್ನುವುದು ಭಕ್ತರ ನಂಬಿಕೆ. ಈ ಅಪರೂಪದ ಜನಪದ ಆಚರಣೆಯನ್ನು ವೈದಿಕ ಪದ್ಧತಿಯಂತೆ ನಡೆಸಲಾಗುತ್ತದೆ.
ಸುಂದರ ಮಂಡಲದ ರಚನೆ, ಆವೇಶಭರಿತ ಪಾತ್ರಿಯ ನೃತ್ಯ, ಅಡಿಕೆ ಸಿರಿಯ ಹೂವಿನ ಘಮ ಘಮ- ಕೊನೆಯಲ್ಲಿ ದರ್ಶನ ಪಾತ್ರಿಯು ನೀಡುವ ಅಭಯ... ಇವಿಷ್ಟು ನಾಗಮಂಡಲದ ಹೈಲೈಟ್ಸ್. ಜನತೆಯ ಶ್ರೇಯಸ್ಸು ಕೋರಿ ನಡೆಸಿದ ಈ ಮಂಡಲ ಸೇವೆ ಕೃಷ್ಣಮಠದ ಒಂದು ಅಪೂರ್ವ ಆರಾಧನೆಯಾಗಿ ದಾಖಲಾಯಿತು.