ಮಾನಸ ಸರೋವರ ಯಾತ್ರಾರ್ಥಿಗಳನ್ನು ಕರೆತರಲು ಪ್ರಯತ್ನ : ಸಂಸದೆ ಶೋಭಾ
ಉಡುಪಿ, ಜುಲೈ 03 : ಭಾರತದಿಂದ ಮಾನನಸರೋವರಕ್ಕೆ ಹೋದ ಯಾತ್ರಾರ್ಥಿಗಳ ಪೈಕಿ ಸುಮಾರು 500 ಮಂದಿ ನೇಪಾಳದ ಸಿಮಿಕೋಟ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ಕಠ್ಮಂಡು ಮೂಲಕ ಭಾರತಕ್ಕೆ ಕರೆತರುವಲ್ಲಿ ಎಲ್ಲಾ ಪ್ರಯತ್ನ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮಾನಸ ಸರೋವರದಲ್ಲಿ ಬಹಳಷ್ಟು ಕನ್ನಡಿಗರು ಸಿಕ್ಕಿ ಹಾಕಿಕೊಂಡಿದ್ದಾರೆ. ಅದರಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಬೆಂಗಳೂರಿನವರೇ ಹೆಚ್ಚು ಎಂಬ ಮಾಹಿತಿ ಇದೆ. ಈ ಬಗ್ಗೆ ನೇಪಾಳದ ಭಾರತದ ರಾಯಭಾರಿಯೊಂದಿಗೆ ಮಾತನಾಡಿದ್ದೇನೆ ಎಂದರು.
ಸಿಮಿಕೋಟ್ ನಲ್ಲಿರುವ ಸಣ್ಣ ಸಣ್ಣ ಹೋಟೆಲಿನಲ್ಲಿ ಅವರೆಲ್ಲ ತಂಗಿದ್ದಾರೆ. ಎರಡು ದಿನಕ್ಕೆ ಆಹಾರವಿದೆ. ಸಿಮಿಕೋಟ್ ಸಣ್ಣ ನಗರವಾಗಿದ್ದು ವಾಸಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ. ಊಟಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಶೋಭಾ ವಿವರಿಸಿದರು.

ಶೀರೂರು ಸ್ವಾಮೀಜಿ ಶಿಷ್ಯತ್ವ ಸ್ವೀಕಾರ
ಶಿರೂರು ಮಠಾಧೀಶರ ಬಗ್ಗೆ ಕೆಲ ತಿಂಗಳ ಹಿಂದೆ ಆರಂಭವಾಗಿದ್ದ ಚರ್ಚೆ ಈಗ ಮತ್ತೊಮ್ಮೆ ಜೀವ ಪಡೆದುಕೊಂಡಿದೆ.
ಶೀರೂರು ಸ್ವಾಮೀಜಿ ಶಿಷ್ಯ ಸ್ವೀಕಾರ ಮಾಡಬೇಕು ಎಂಬ ವಿಚಾರದಲ್ಲಿ ಇತರ ಅಷ್ಟ ಮಠಾಧೀಶರು ಕೆಲವೊಂದು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾನುವಾರ ಸೇರಿದ ಐದು ಮಠಾಧೀಶರು ಈ ಬಗ್ಗೆ ಚರ್ಚೆ ನಡೆಸಿದ್ದು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ಪರ್ಯಾಯ ಪಲಿಮಾರು ಮಠಾಧೀಶರು ತಿಳಿಸಿದ್ದಾರೆ.
ಅಷ್ಟ ಮಠಾಧೀಶರು ಪಾಲಿಸಬೇಕಾದ ನಿಯಮಗಳನ್ನು ಶೀರೂರು ಸ್ವಾಮೀಜಿ ಪಾಲಿಸುತ್ತಿಲ್ಲ ಎಂಬ ಬಗ್ಗೆ ಕೆಲ ತಿಂಗಳ ಹಿಂದೆ ಚರ್ಚೆ ಆರಂಭವಾಗಿತ್ತು. ಸದ್ಯ ಶೀರೂರು ಮಠದ ಪಟ್ಟದ ದೇವರು ಕೃಷ್ಣ ಮಠದಲ್ಲೇ ಇದ್ದು ಪಲಿಮಾರು ಸ್ವಾಮೀಜಿ ಪೂಜೆ ನಡೆಸುತ್ತಿದ್ದಾರೆ.
ಶೀರೂರು ಮಠದ ಶಿಷ್ಯ ಸ್ವೀಕಾರದ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ, ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ಇನ್ನೊಮ್ಮೆ ಸಭೆ ಸೇರಿ ಈಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಅಷ್ಟಮಠಾಧೀಶರಲ್ಲಿ ಬಹುಮತದ ತೀರ್ಮಾನವೇ ಅಂತಿಮ ಎಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಿಳಿಸಿದ್ದಾರೆ.
ಕಳೆದ ವಿಧಾನ ಸಭಾಚುನಾವಣೆ ಸಂದರ್ಭದಲ್ಲಿ ಶೀರೂರು ಸ್ವಾಮೀಜಿಯ ಶಿಷ್ಯ ಸ್ವೀಕಾರದ ಕುರಿತು ಚರ್ಚೆ ಆರಂಭವಾಗಿದ್ದನ್ನುಇಲ್ಲಿ ಸ್ಮರಿಸಬಹುದು.












Click it and Unblock the Notifications