ಸೆಪ್ಟಂಬರ್ 4 ರಂದು ನಡೆಯಲಿದೆ ಶೀರೂರು ಶ್ರೀಗಳ ಆರಾಧನೆ
ಉಡುಪಿ, ಆಗಸ್ಟ್.30: ಶೀರೂರು ಶ್ರೀಗಳು ಸಾವನ್ನಪ್ಪಿ 40 ದಿನಗಳು ಕಳೆದಿವೆ. ತನಿಖಾ ದೃಷ್ಟಿಯಿಂದ ಪೊಲೀಸ್ ಸುಪರ್ದಿಯಲ್ಲಿದ್ದ ಶೀರೂರು ಮಠ ಈಗ ವಿಮುಕ್ತಗೊಂಡಿದೆ. ತನಿಖಾ ವೇಳೆಯಲ್ಲಿ ಸಾಕ್ಷ್ಯಾಧಾರಗಳು ನಾಶವಾಗಬಹುದೆಂಬ ಹಿನ್ನಲೆಯಲ್ಲಿ ಪೊಲೀಸರು ಶ್ರೀಗಳ ಆರಾಧನೆಗೆ ಅವಕಾಶ ನೀಡಿರಲಿಲ್ಲ.
"ತನಿಖೆ ಮುಗಿದು ಶೀರೂರು ಮಠ ಪೂರ್ಣವಾಗಿ ನಮ್ಮ ಕೈ ಸೇರಿದ ಮೇಲೆ ಶ್ರೀಗಳ ಆರಾಧನೆ ಕ್ರಿಯೆಯನ್ನು ನಡೆಸಲಿದ್ದೇವೆ" ಎಂದು ದ್ವಂದ್ವ ಮಠದ ಯತಿಗಳಾದ ಸೋದೆ ಶ್ರೀಗಳು ತಿಳಿಸಿದ್ದರು. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಹಿನ್ನಲೆಯಲ್ಲಿ ಪೊಲೀಸರು ಶೀರೂರು ಮೂಲಮಠವನ್ನು ಸೋದೆ ಮಠಕ್ಕೆ ಹಸ್ತಾಂತರಿಸಿದ್ದಾರೆ.
ಹಾಗಾಗಿ ಶೀರೂರು ಶ್ರೀಗಳ ಆರಾಧನೆಗೆ ದಿನ ನಿಗದಿಯಾಗಿದೆ. ಸೆಪ್ಟಂಬರ್ 5ಕ್ಕೆ ಶ್ರೀಗಳ ಆರಾಧನೆ ನಡೆಯಲಿದೆ. ಶೀರೂರು ಮೂಲಮಠದಲ್ಲಿ ಸೋದೆ ಶ್ರೀಗಳ ನೇತೃತ್ವದಲ್ಲಿ ಆರಾಧನೆ ನಡೆಯಲಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

ಜುಲೈ 19 ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶೀರೂರು ಶ್ರೀಗಳು, ಬಳಿಕ ಅದು ಅಸಹಜ ಸಾವು ಎಂಬ ವೈದ್ಯರ ಉಲ್ಲೇಖದಿಂದ ಹಲವು ಆಯಾಮಗಳನ್ನು ಕಂಡಿತ್ತು. ವಿಷಪ್ರಾಶನವೆಂದು ಹೇಳಿದ್ದ ಕೆಎಂಸಿ ಆಸ್ಪತ್ರೆ ವೈದ್ಯರ ಹೇಳಿಕೆ ಹಲವು ಗೊಂದಲವನ್ನು ಉಂಟುಮಾಡಿತ್ತು.
ಇದೀಗ ಶ್ರೀಗಳ ದೇಹದಲ್ಲಿ ವಿಷವಿಲ್ಲವೆಂದು ವಿಧಿವಿಜ್ಞಾನ ತಜ್ಞರು ಖಚಿತ ಪಡಿಸಿದ್ದಾರೆ. ಅದರ ಜೊತೆಗೆ ಶ್ರೀಗಳ ಭಕ್ತರು ಅವರ ಆತ್ಮಕ್ಕೆ ಶಾಂತಿ ಸಿಗಲಿಲ್ಲ. ಅವರ ಆರಾಧನಾ ಕ್ರಿಯೆಯನ್ನು ಮಾಡಬೇಕೆಂದು ಹೇಳಿದ್ದರು. ವಿಳಂಬವಾದ ಹಿನ್ನಲೆ ಭಕ್ತವೃಂದದಲ್ಲಿ ಬೇಸರದ ಛಾಯೆ ಮೂಡಿದ್ದು, ಸೋದೆ ಶ್ರೀಗಳ ನಿರ್ಧಾರದಿಂದ ಎಲ್ಲದಕ್ಕೂ ಅಂತ್ಯ ಸಿಗಲಿದೆ.












Click it and Unblock the Notifications