ಉಡುಪಿ ಜಿಲ್ಲಾಧಿಕಾರಿ ಎತ್ತಂಗಡಿ ಹಿಂದೆ ಮರಳು ಲಾಬಿ?
ಉಡುಪಿ, ಆಗಸ್ಟ್ 20: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎತ್ತಂಗಡಿ ಹಿಂದೆ ಮರಳು ಲಾಬಿ ಕೆಲಸ ಮಾಡಿದೆಯೇ? ಹಾಗೆಂದು ಮಾತು ಕೇಳಿಬರುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಮರಳಿನ ತೀವ್ರ ಅಭಾವ ಸೃಷ್ಟಿಯಾಗಿದೆ. ಈ ಹಿಂದೆ ಡಿಸಿ ಆಗಿದ್ದ ಪ್ರಿಯಾಂಕಾ ಮೇರಿ ಕೆಲವೇ ತಿಂಗಳ ಹಿಂದೆ ವರ್ಗಾವಣೆ ಆದಾಗಲೂ ಇದೇ ಮಾತು ಕೇಳಿ ಬಂದಿತ್ತು.
ಮರಳುಗಾರಿಕೆ ವಿಷಯದಲ್ಲಿ ತೀವ್ರ ನಿರ್ಬಂಧ ವಿಧಿಸಿದ್ದ ಪ್ರಿಯಾಂಕಾ ಮೇಲೆ ಹಿಂದೆ ಅಕ್ರಮ ಮರಳು ಸಾಗಾಟಗಾರರು ದಾಳಿ ನಡೆಸಿದ್ದೂ ಉಂಟು. ಅದಕ್ಕೂ ಕ್ಯಾರೇ ಎನ್ನದ ಪ್ರಿಯಾಂಕಾ ಮೇರಿ ಮರಳು ಮಾಫಿಯಾಗೆ ಸೊಪ್ಪು ಹಾಕಿರಲಿಲ್ಲ. ಪರಿಣಾಮ, ಅವರನ್ನು ಜಿಲ್ಲೆಯಿಂದ ಎತ್ತಂಗಡಿ ಮಾಡಲಾಗಿತ್ತು.
ಇದೀಗ ಕೇವಲ ನಾಲ್ಕು ತಿಂಗಳ ಹಿಂದೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಹೆಪ್ಸಿಬಾ ರಾಣಿ ಕೂಡ ಇದೇ ಮರಳು ಮಾಫಿಯಾ ಕಾರಣಕ್ಕೆ ವರ್ಗಾವಣೆಗೊಂಡಿದ್ದಾರೆ ಎನ್ನಲಾಗುತ್ತಿದೆ. ಹೆಪ್ಸಿಬಾ ಜಾಗಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಜಗದೀಶ್ ಅವರು ಬಂದಿದ್ದಾರೆ. ಆದರೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ವರ್ಗವಾಗಿದ್ದು ಹುದ್ದೆ ಇನ್ನಷ್ಟೇ ನಿಗದಿಯಾಗಬೇಕಾಗಿದೆ.

ಜಗದೀಶ್ ಕೆಎಎಸ್ ಅಧಿಕಾರಿಯಾಗಿ ಐಎಎಸ್ ಶ್ರೇಣಿಗೆ ಬಡ್ತಿಗೊಂಡವರು. ಒಟ್ಟು 13 ವರ್ಷಗಳ ಸೇವೆಯಲ್ಲಿ ಅವರು ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್, ಹೇಮಲತಾ ಅವರ ಅವಧಿಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸವಣೂರು, ಶಿರಸಿಯಲ್ಲಿ ಸಹಾಯಕ ಕಮಿಷನರ್, ಹಾವೇರಿಯಲ್ಲಿ ಅಪರ ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಜಂಟಿ ಕಾರ್ಯದರ್ಶಿ, ಮೈಸೂರು ಮಹಾ ನಗರಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಮೊದಲ ಬಾರಿ ಡಿಸಿ ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯವರಾದ ಜಗದೀಶ್ ಇಂದು ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.











Click it and Unblock the Notifications