ಬಡ ಮಕ್ಕಳ ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸುವ ರವಿಗೆ ಕೆಬಿಸಿ ಗೌರವ!
ಉಡುಪಿ, ಜನವರಿ 17: ಉಡುಪಿ ಜಿಲ್ಲೆಯ ಕಟಪಾಡಿಯ ರವಿ ಕಟಪಾಡಿ ಹೆಸರು ಕೇಳದವರಿಲ್ಲ. ತನ್ನ ವಿಶಿಷ್ಟ ಸಮಾಜಸೇವೆಯ ಮೂಲಕ ರಾಜ್ಯದಲ್ಲಿ ಗುರುತಿಸಿಕೊಂಡಿರುವವರು ಇವರಿಗೆ ಕೆಬಿಸಿ ಗೌರವ ಸಿಕ್ಕಿದೆ. ಕೆಬಿಸಿಯಲ್ಲಿ ಗೆದ್ದ ಹಣವನ್ನು ಬಡ ಮಕ್ಕಳ ಚಿಕಿತ್ಸೆಗೆ ಬಳಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕೌನ್ ಬನೇಗಾ ಕರೊಡ್ ಪತಿಯು ಸಮಾಜ ಸೇವಾ ವಿಭಾಗದ ಸಾಧಕರಿಗಾಗಿ ನಡೆಸಲಾಗುವ 'ಕರಮ್ ವೀರ್' ವಿಭಾಗದಲ್ಲಿ ರವಿ ಕಟಪಾಡಿ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ 12.5 ಲಕ್ಷ ರೂ. ಗೆದ್ದಿದ್ದಾರೆ. ಈ ಮೊತ್ತವನ್ನು ಅನಾರೋಗ್ಯ ಪೀಡಿತ ಬಡಮಕ್ಕಳ ಚಿಕಿತ್ಸೆಗೆ ವಿನಿಯೋಗಿಸುವುದಾಗಿ ಹೇಳಿದ್ದಾರೆ.
ಸಮಾಜಸೇವೆಗೆ ನಾನಾ ಮುಖ. ಸಮಾಜಸೇವೆ ಮಾಡಲು ಮನಸ್ಸಿದ್ದರೆ ಹಲವು ಮಾರ್ಗಗಳಿವೆ. ಇದಕ್ಕೆ ತಾಜಾ ಉದಾಹರಣೆ ರವಿ ಕಟಪಾಡಿ. ಅಷ್ಠಮಿ ಸಂದರ್ಭ ಮತ್ತು ಇನ್ನಿತರ ಸಂದರ್ಭಗಳಲ್ಲಿ ಇವರು ವಿಶಿಷ್ಟ ವೇಷಗಳ ಮೂಲಕ ಗಮನ ಸೆಳೆಯುತ್ತಾರೆ.
ರವಿ ಸುಮ್ಮನೆ ವೇಷಗಳನ್ನು ಹಾಕುವುದಿಲ್ಲ. ಅತ್ಯಂತ ವಿಶಿಷ್ಟವಾಗಿ ಕಾಣುವ ವೇಷಗಳ ಮೂಲಕ ಇವರು ದಾನಿಗಳ ಬಳಿ ತೆರಳುತ್ತಾರೆ. ಅವರಿಂದ ಹಣ ಸಂಗ್ರಹಿಸುತ್ತಾರೆ. ದಿನಗಟ್ಟಲೆ ವೇಷ ಹಾಕಿ ಮನೆಮನೆಗೂ ತೆರಳಿ ಹಣ ಸಂಗ್ರಹ ಮಾಡುತ್ತಾರೆ. ಬಸ್ ನಿಲ್ದಾಣ, ಅಂಗಡಿಗಳಿಗೂ ತೆರಳಿ ಹಣ ಸಂಗ್ರಹಿಸುತ್ತಾರೆ.

ಸುಮಾರು 50 ಲಕ್ಷ ಸಂಗ್ರಹ
ರವಿ ಕಟಪಾಡಿ ಬಹಳ ವರ್ಷಗಳಿಂದ ವೇಷತೊಟ್ಟು ಹಣ ಸಂಗ್ರಹಣೆ ಮಾಡುತ್ತಾರೆ. ಇಲ್ಲಿಯ ತನಕ ರವಿ ಕಟಪಾಡಿ ಅವರು ತಮ್ಮ ವೇಷಗಳ ಮೂಲಕ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದಾರೆ ಮತ್ತು ಹಣವನ್ನು ಬಡಮಕ್ಕಳ ಚಿಕಿತ್ಸೆಗಾಗಿ ವಿನಿಯೋಗ ಮಾಡಿದ್ದಾರೆ. ಅಚ್ಚರಿಯಾದರೂ ಇದು ಸತ್ಯ.

ವಿಶಿಷ್ಟ, ವಿಲಕ್ಷಣ ವೇಷಗಳು
ರವಿ ಕಟಪಾಡಿ ಅವರು ಹಾಕುವ ವೇಷ ಕೂಡ ವಿಭಿನ್ನವಾದ್ದರು. ಪಾಶ್ಚಾತ್ಯ ಸಿನಿಮಾಗಳಲ್ಲಿ ಬರುವ ಪಾತ್ರಗಳಲ್ಲಿರುವ ವಿಲಕ್ಷಣ ವೇಷಗಳನ್ನು ಅವರು ಹಾಕುತ್ತಾರೆ. ವೇಷ ಹಾಕಿ ಜನರ ಗಮನ ಸೆಳೆಯುತ್ತಾರೆ. ಈ ವೇಷಗಳ ಹಿಂದಿರುವ ಸಾಮಾಜಿಕ ಕಳಕಳಿ ಜನರಿಗೂ ತಿಳಿದಿದೆ. ಹೀಗಾಗಿ ರವಿ ಕಟಪಾಡಿ ವೇಷ ಹಾಕಿದರೆಂದರೆ ಜನರು ಸಹಾಯ ಮಾಡುತ್ತಾರೆ.

12 ಲಕ್ಷವನ್ನು ಗೆದ್ದಿದ್ದಾರೆ
ಜನಪ್ರಿಯ ಸೋನಿ ವಾಹಿನಿಯವರು ರವಿ ಕಟಪಾಡಿಯ ಈ ಸಮಾಜ ಸೇವೆ ಗುರುತಿಸಿ ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಲ್ಲಿ ರವಿ ಅವರು 12.5 ಲಕ್ಷ ರೂ ಗೆದ್ದಿದ್ದಾರೆ. ಈ ಎಲ್ಲ ಹಣವನ್ನು ಮಕ್ಕಳ ಚಿಕಿತ್ಸೆಗೆ ನೀಡುತ್ತೇನೆಂದು ರವಿ ಘೋಷಿಸಿದ್ದಾರೆ.
|
ರವಿ ವೇಷದ ಝಲಕ್
ರವಿ ಕಟಪಾಡಿ ಅವರು ಹಾಕುವ ವೇಷದ ಝಲಕ್ ಇಲ್ಲಿದೆ ನೋಡಿ. ಮಕ್ಕಳ ಚಿಕಿತ್ಸೆಗೆ ಸಹಾಯ ಮಾಡಲು ಹೀಗೆ ವಿಧ ವಿಧದ ವೇಷ ತೊಡುತ್ತಾರೆ.












Click it and Unblock the Notifications