ಪರಿಷತ್ ಫೈಟ್; ಬಿಜೆಪಿಯ ಮಾಜಿ ಶಾಸಕ ಪಕ್ಷೇತರರಾಗಿ ಕಣಕ್ಕೆ!
ಉಡುಪಿ, ಮೇ 14: ಲೋಕಸಭೆ ಚುನಾವಣೆಯ ಟಿಕೆಟ್ನಂತೆ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಘೋಷಣೆ ಬಳಿಕವೂ ಅಸಮಾಧಾನ ಉಂಟಾಗಿದೆ. ಜೂನ್ 3ರಂದು ಕರ್ನಾಟಕ ವಿಧಾನ ಪರಿಷತ್ನ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗ ವಿಧಾನ ಪರಿಷತ್ನ 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿ ಘೋಷಿಸಿದೆ. ಜೂನ್ 3ರಂದು ಮತದಾನ ನಡೆಯಲಿದ್ದು, ಜೂನ್ 6ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ನೈಋತ್ಯ ಪದವೀಧರ ಕ್ಷೇತ್ರಕ್ಕೆ ಸಹ ಚುನಾವಣೆ ನಡೆಯುತ್ತಿದೆ. ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜನಾಥ. ಬಿಜೆಪಿ ಶಿವಮೊಗ್ಗದ ಖ್ಯಾತ ವೈದ್ಯರಾದ ಧನಂಜಯ ಸರ್ಜಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಳಿಕ ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ.
ಮಾಜಿ ಶಾಸಕರಿಗೆ ನಿರಾಸೆ: ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಗೆ ಶಿವಮೊಗ್ಗ, ದಾವಣಗೆರೆ (ಹೊನ್ನಾಳಿ, ಚನ್ನಗಿರಿ) ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳು ಸೇರುತ್ತವೆ. ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಆದರೆ ಪಕ್ಷ ಧನಂಜಯ ಸರ್ಜಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಅವರು ಅಸಮಾಧಾನಗೊಂಡಿದ್ದಾರೆ. ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿದ್ದಾರೆ.
ರಘುಪತಿ ಭಟ್ ಮಾತನಾಡಿ, "ನಾನು ಬಿಜೆಪಿ ಕಾರ್ಯಕರ್ತರ ಪರವಾಗಿ ಚುನಾವಣಾ ಕಣಕ್ಕಿಳಿಯುತ್ತೇನೆ. ನಾನು ಸೋಲಲಿ ಅಥವ ಗೆಲ್ಲಲಿ ಬಿಜೆಪಿಯಲ್ಲಿಯೇ ಮುಂದುವರೆಯುತ್ತೇನೆ" ಎಂದು ಹೇಳಿದ್ದಾರೆ.
"ನಾನು ಬಿಜೆಪಿಯ ಯಾವ ನಾಯಕರ ವಿರುದ್ಧವೂ ಇಲ್ಲ. ಆದರೆ ನಾನು ನೈಋತ್ಯ ಪದವೀಧರ ಕ್ಷೇತ್ರದ ಜನರ ಸೇವೆ ಮಾಡಬೇಕು. ವಿಧಾನ ಪರಿಷತ್ನಲ್ಲಿ ಕರಾವಳಿ ಭಾಗದ ಜನರ ಧ್ವನಿಯಾಗಬೇಕು" ಎಂದು ರಘುಪತಿ ಭಟ್ ಹೇಳಿದರು.
"ಕರಾವಳಿ ಭಾಗದ ನಾಯಕರಿಗೆ ಟಿಕೆಟ್ ನಿರಾಕರಿಸುವ ಮೂಲಕ ಅನ್ಯಾಯ ಮಾಡಲಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಬಳಿಕ ನೈಋತ್ಯ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹಿರಿಯ ನಾಯಕರು ನನಗೆ ಭರವಸೆ ನೀಡಿದ್ದರು" ಎಂದರು.
"ನಾನು ಧನಂಜಯ ಸರ್ಜಿ ಅವರ ವಿರುದ್ಧವಾಗಿಲ್ಲ. ಪಕ್ಷ ಹಿರಿಯ ನಾಯಕರಿಗೆ ಟಿಕೆಟ್ ನೀಡಿದ್ದರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರಲಿಲ್ಲ. ಕೆಲವು ದಿನಗಳ ಹಿಂದೆ ಪಕ್ಷ ಸೇರಿದವರಿಗೆ ಟಿಕೆಟ್ ನೀಡಲಾಗಿದೆ" ಎಂದು ರಘುಪತಿ ಭಟ್ ತಿಳಿಸಿದ್ದಾರೆ.
"ಕ್ಷೇತ್ರದಲ್ಲಿ ಹೊಸದಾಗಿ 38,000 ಪದವೀಧರರು ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸಿದ್ದಾರೆ. ನನಗೆ ಟಿಕೆಟ್ ಸಿಗುವ ಭರವಸೆ ಸಿಕ್ಕ ಬಳಿಕ ನಾನು ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಶಿಕ್ಷಕರು ಮತ್ತು ಪದವೀಧರರಿಗೆ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಹೇಳಿದ್ದೆ. ಬಿಜೆಪಿ ಕಾರ್ಯಕರ್ತರು, ಪದವೀಧರರು ನನಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ" ಎಂದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಹಾಲಿ ಶಾಸಕರಲ್ಲಿ ರಘುಪತಿ ಭಟ್ ಸಹ ಒಬ್ಬರು. 2018ರ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಲ್ಲಿ ಅವರು ಜಯಗಳಿಸಿದ್ದರು. ಆದರೆ 2023ರಲ್ಲಿ ಅವರನ್ನು ಬಿಟ್ಟು ಬಿಜೆಪಿ ಯಶ್ಪಾಲ್ ಎ. ಸುವರ್ಣ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಚುನಾವಣೆಯಲ್ಲಿ ಅವರು 97079 ಮತಗಳನ್ನು ಪಡೆದು ಗೆದ್ದರು.
ಉಡುಪಿ ಕ್ಷೇತ್ರದ ಟಿಕೆಟ್ ಕೈತಪ್ಪಿದಾಗಲೂ ಸಹ ರಘುಪತಿ ಭಟ್ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಎಂದಿಗೂ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ ಎಂದು ಹೇಳಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದಾರೆ.












Click it and Unblock the Notifications