ಉಡುಪಿಯಲ್ಲಿಪೇಜಾವರ ಶ್ರೀಗೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್
ಉಡುಪಿ, ಡಿಸೆಂಬರ್ 27: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಇಂದು ಮೊದಲ ಬಾರಿಗೆ ಉಡುಪಿಗೆ ಭೇಟಿ ನೀಡಿದ್ದು, ಪೇಜಾವರ ಶ್ರೀಯವರು ಸನ್ಯಾಸ ದೀಕ್ಷೆ ಸ್ವೀಕರಿಸಿ 80 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ಪೇಜಾವರ ಶ್ರೀಯವರಿಗೆ ಅಭಿನಂದನೆ ಸಲ್ಲಿಸಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಆದಿ ಉಡುಪಿ ಹೆಲಿಪ್ಯಾಡ್ ಗೆ ಆಗಮಿಸಿದ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ವಾಜುಬಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ, ಉಡುಪಿ ಉಸ್ತುವಾರಿ ಸಚಿವೆ ಜಯಮಾಲಾ , ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಸ್ಪಿ ಲಕ್ಷ್ಮಣ ನಿಂಬರಗಿ ಸ್ವಾಗತಿಸಿದರು.
ಪತ್ನಿ ಸಮೇತರಾಗಿ ಉಡುಪಿಗೆ ಆಗಮಿಸಿದ್ದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಅಭಿನಂದಿಸಿದರು. ಬಳಿಕ 5 ನಿಮಿಷಗಳ ಪೇಜಾವರ ಶ್ರೀಗಳ ಜೀವನ ಚರಿತ್ರೆ ಸಾಕ್ಷ್ಯಚಿತ್ರವನ್ನು ವೀಕ್ಷಿಸಿದರು.
ಸ್ವಾಮೀಜಿ ಅವರೊಂದಿಗೆ ಉಭಯಕುಶಲೋಪರಿ ನಡೆಸುತ್ತ, ಸಾಮಾಜಕ್ಕೆ ನಿಮ್ಮ ಮಾರ್ಗದರ್ಶನ ಅವಶ್ಯವಾಗಿ ಬೇಕಿದೆ. ಉಡುಪಿಗೆ, ಪೇಜಾವರ ಮಠಕ್ಕೆ ಆಗಮಿಸಿ ನಿಮ್ಮನ್ನು ಭೇಟಿ ಮಾಡಿದ್ದು ಅತೀವ ಸಂತಸ ತಂದಿದೆ ಸಂತೋಷ ವ್ಯಕ್ತಪಡಿಸಿದರು.

ಮನವಿ ಮಾಡಿದ ಶ್ರೀಗಳು
ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು ,ಗೋವಿಂದನ ಸನ್ನಿಧಿಗೆ ಕೋವಿಂದ ಅವರು ಆಗಮಿಸಿರುವುದು ಸಂತೋಷವಾಗಿದೆ. ಪಾಜಕ ಕ್ಷೇತ್ರದಲ್ಲಿ ಮಧ್ವ ವಿಶ್ವವಿದ್ಯಾನಿಲಯ ಸ್ಥಾಪಿಸಲು ತಯಾರಿ ನಡೆಯುತಿದ್ದು, ನಿಮ್ಮ ಸಹಕಾರ ಬೇಕು ಎಂದು ಶ್ರೀಗಳು ಮನವಿ ಮಾಡಿದರು.

ಕಂಚಿನ ಕೃಷ್ಣನ ಮೂರ್ತಿ ಉಡುಗೊರೆ
ಮೊದಲ ಬಾರಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ ಅವರಿಗೆ ಶ್ರೀಗಳು ಹಟ್ಟೆ ಪ್ರಭಾವಳಿ, ಕಂಚಿನ ಕೃಷ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು. ಪೇಜಾವರ ಶ್ರೀಗಳು ಬರೆದ 12ಧಾರ್ಮಿಕ ಪುಸ್ತಕಗಳು ನೀಡಿ ಶಾಲು ಹಾಕಿ ರಾಷ್ಟ್ರಪತಿಗಳನ್ನು ಗೌರವಿಸಲಾಯಿತು. ರಾಷ್ಟ್ರಪತಿ ಅವರ ಪತ್ನಿ ಸವಿತಾ ಕೋವಿಂದ ಅವರಿಗೆ ಸೀರೆ ಮತ್ತು ಶಂಕರಪುರ ಮಲ್ಲಿಗೆ ನೀಡಲಾಯಿತು.

ಪಲಿಮಾರು ಶ್ರೀಗಳಿಂದ ಮಂತ್ರಾಕ್ಷತೆ ಸ್ವೀಕಾರ
ನಂತರ ರಾಷ್ಟ್ರಪತಿ ಅವರು ಪೇಜಾವರ ಮಠದಿಂದ ಶ್ರೀ ಕೃಷ್ಣ ದರ್ಶನಕ್ಕೆ ತೆರಳಿ ಪರ್ಯಾಯ ಪಲಿಮಾರು ಶ್ರೀಗಳಿಂದ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಪಲಿಮಾರು ಮಠದ ವತಿಯಿಂದ 1.5 ಅಡಿ ಎತ್ತರದ ಕಡೆಗೋಲು ಶ್ರೀಕೃಷ್ಣ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಯಿತು.

ಮಠದ ಸುತ್ತ ಬಿಗಿ ಬಂದೋಬಸ್ತ್
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಉಡುಪಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆದಿ ಉಡುಪಿಯ ಹೆಲಿಪ್ಯಾಡ್ ನಿಂದ ಝೀರೋ ಟ್ರಾಫಿಕ್ ಮೂಲಕ ರಾಷ್ಟ್ರಪತಿ ಯವರು ಕೃಷ್ಣಮಠಕ್ಕೆ ತೆರಳಿದ್ದರು.ವಿಶೇಷ ಭದ್ರತಾ ದಳದಿಂದ ಕೃಷ್ಣಮಠ,ರಥಬೀದಿ ,ಪೇಜಾವರ ಮಠದ ಸುತ್ತ ಬಿಗಿ ಬಂದೋಬಸ್ತ್ ನಡೆಸಲಾಗಿತ್ತು.
ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆಯಲ್ಲಿ ಕೃಷ್ಣನಗರಿ ಉಡುಪಿ ಬಿಕೋ ಎನ್ನುದ್ದು ,ಎಲ್ಲಿ ನೋಡಿದರಲ್ಲಿ ಖಾಕಿ ಸರ್ಪಗಾವಲು ಕಂಡು ಬರುತ್ತಿದೆ. ರಾಷ್ಡ್ರಪತಿ ಆಗಮನ ಹಿನ್ನೆಲೆಯಲ್ಲಿ ಸಂಜೆ ತನಕ ಭಕ್ತರಿಗೆ ಶ್ರೀಕೃಷ್ಣ ದರ್ಶನಕ್ಕೆ ನಿರ್ಬಂಧ ಹೇರಲಾಗಿತ್ತು. ಸಂಜೆ ಭಕ್ತರಿಗೆ ಶ್ರಿ ಕೃಷ್ಣನ ದರ್ಶನಕ್ಕೆ ಅವಕಾಶ ದೊರಕಲಿದೆ.












Click it and Unblock the Notifications