'ಶ್ರೀಕೃಷ್ಣ ಮಠಕ್ಕೆ ಬರುವಂತೆ ಸಿಎಂಗೆ ಆಹ್ವಾನ, ಬರೋದು ಬಿಡೋದು ಅವರಿಷ್ಟ'
ಉಡುಪಿ, ಜೂನ್ 15 : ಇದೇ ಭಾನುವಾರ (ಜೂ 18) ಪ್ರಣಬ್ ಮುಖರ್ಜಿ ಅವರು ಉಡುಪಿ ಶ್ರೀಕೃಷ್ಣಮಠ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಈ ಬಗ್ಗೆ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪ್ರಣಬ್ ಮುಖರ್ಜಿ ಅವರು ಮಠಕ್ಕೆ ಭೇಟಿ ನೀಡುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಬರುವಂತೆ ಮಠದ ಪ್ರತಿನಿಧಿಗಳ ಜತೆ ಆಹ್ವಾನ ಪತ್ರ ಕಳುಹಿಸಿಕೊಟ್ಟಿದ್ದೇವೆ.
ರಾಷ್ಟ್ರಪತಿಗಳ ಉಡುಪಿ ಭೇಟಿ: ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ
ಆದರೆ, ಅವರು ಅದಕ್ಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇನ್ನು ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಅವರ ಕಾರ್ಯದರ್ಶಿಗಳು ಮುಖ್ಯಮಂತ್ರಿ ಉಡುಪಿಗೆ ಬರುವ ಕಾರ್ಯಕ್ರಮ ಇಲ್ಲ ಅಂತ ತಿಳಿಸಿದ್ದಾರೆ. ಹಾಗಾಗಿ ಭಾನುವಾರದ ವರೆಗೆ ನೋಡಬೇಕಿದೆ ಎಂದರು.
ನಾವು ಸಿಕ್ಕಿದಾಗ ಚೆನ್ನಾಗಿ ಮಾತನಾಡಿದ್ದೇವೆ ಹಾಗೂ ಮಠಕ್ಕೆ ಬರುವಂತೆ ಆಹ್ವಾನ ನೀಡಿದ್ದೇನೆ. ನನಗೆ ಅವರ ಬಗ್ಗೆ ಯಾವುದೇ ವಿರೋಧ ಇಲ್ಲ. ಕನಕನಿಗೆ ಇಲ್ಲಿ ಯಾವುದೇ ಅಪಚಾರ ಆಗಿಲ್ಲ. ಏನು ಆಗಿದೆ ಎಂಬುದು ಅವರೇ ತಿಳಿಸಲಿ ಕೇವಲ ಆರೋಪ ಮಾಡಿದರೆ ಸಾಲದು ಎಂದು ಪೇಜಾವರ ಶ್ರೀ ಹೇಳಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ಅವರು ನನ್ನನ್ನು ಭೇಟಿ ಮಾಡಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಯಾದಾಗ ನಡೆದ ಉಪಚುನಾವಣೆ ಸಂದರ್ಭದಲ್ಲಿ ಅವರು ಮೈಸೂರಿನಲ್ಲಿ ನನ್ನನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು ಎಂದು ಹೇಳಿದರು.