ಮೂರು ದಿನ ಶೀರೂರು ಮಠ ಪೊಲೀಸರ ವಶಕ್ಕೆ, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ
ಉಡುಪಿ, ಜುಲೈ 19: ಶೀರೂರು ಮಠವನ್ನು ಇಂದಿನಿಂದ ಮೂರು ದಿನಗಳ ಕಾಲ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಮೂರು ದಿನಗಳ ಕಾಲ ಮಠಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಭಂಧಿಸಲಾಗಿದೆ.
ಶೀರೂರು ಶ್ರೀಗಳ ಸಾವು ಅಸಹಜ ಎಂಬ ಅನುಮಾನ ವ್ಯಕ್ತಪಡಿಸಿ ಅವರ ಪೂರ್ವಾಶ್ರಮದ ಸಹೋದರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹೀಗಾಗಿ ಸಾಕ್ಷ್ಯ ಸಂಗ್ರಹಕ್ಕೆಂದು ಪೊಲೀಸರು ಮೂರು ದಿನಗಳ ಕಾಲ ಶೀರೂರು ಮಠವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲಾ ಎಸ್ಪಿ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದು, ಮಠದ ತನಿಖೆಯ ಜೊತೆಗೆ ಶೀರೂರು ಶ್ರೀಗಳ ಆಪ್ತೇಷ್ಟರ ವಿಚಾರಣೆ ಸಹ ನಾಳೆಯಿಂದ ನಡೆಯಲಿದೆ.

ಶೀರೂರು ಶ್ರೀಗಳು ಇಂದು ಬೆಳಿಗ್ಗೆ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನಹೊಂದಿದ್ದು, ಅವರಿಗೆ ಫೂಡ್ ಪಾಯ್ಸನ್ ಆಗಿತ್ತು ಎಂದು ವೈದ್ಯರು ಹೇಳಿದ್ದರು. ಅವರ ಸಮೀಪವರ್ತಿಗಳು ಸ್ವಾಮಿಗಳನ್ನು ಕೊಲ್ಲಲಾಗಿದೆ ಎಂದು ಅನುಮಾನವನ್ನೂ ಸಹ ವ್ಯಕ್ತಪಡಿಸಿದ್ದರು.
ಈಗಾಗಲೇ ಮಣಿಪಾಲದ ಕೆಎಂಸಿ ವೈದ್ಯರು ಶೀರೂರು ಶ್ರೀಗಳ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿಯನ್ನು ನ್ಯಾಯಾಲಯಕ್ಕೆ ನೀಡಲಿದ್ದಾರೆ. ಈ ನಡುವೆ ಶ್ರೀಗಳಿಗೆ ವಿಷ ಉಣ್ಣಿಸಿ ಕೊಲ್ಲಲಾಗಿದೆ ಎಂಬ ಊಹಪೋಹಗಳು ಹರಿದಾಡುತ್ತಿವೆ.

ಅಷ್ಟಮಠಗಳಲ್ಲಿ ಪ್ರತ್ಯೇಕವಾಗಿದ್ದ ಶೀರೂರು ಶ್ರೀಗಳು ಪುತ್ತಿಗೆ ಮಠ ಹೊರತು ಪಡಿಸಿ ಇನ್ನೆಲ್ಲ ಮಠಗಳ ಮೇಲೂ ಈಗಾಗಲೇ ಒಂದು ಮೊಕದ್ದಮೆ ಹೂಡಿದ್ದರು. ಅಲ್ಲದೆ ಮತ್ತೊಂದು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು ಆದರೆ ಅಷ್ಟರಲ್ಲೇ ಅವರು ದೈವಾಧೀನರಾಗಿದ್ದಾರೆ.












Click it and Unblock the Notifications