ನನ್ನ ಮೇಲೆ ತನ್ವೀರ್ ಸೇಠ್ ಅವರಿಗೆ ಪ್ರೀತಿ ಜಾಸ್ತಿ : ಯು.ಟಿ.ಖಾದರ್
ಉಡುಪಿ, ಜೂನ್ 14 : 'ನನ್ನ ಮೇಲೆ ತನ್ವೀರ್ ಸೇಠ್ ಅವರಿಗೆ ಪ್ರೀತಿ ಜಾಸ್ತಿ. ಆದ್ದರಿಂದ ಹೀಗೆ ಮಾತನಾಡುತ್ತಾರೆ. ನಾನು ಯಾರ ಸಚಿವ ಸ್ಥಾನಕ್ಕೂ ಕಲ್ಲು ಹಾಕಿಲ್ಲ' ಎಂದು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.
ಗುರುವಾರ ಉಡುಪಿಯಲ್ಲಿ ಮಾತನಾಡಿದ ಅವರು, 'ಖಾದರ್ ಮತ್ತು ಜಮೀರ್ ನಾಲಾಯಕ್' ಎಂಬ ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
'ಮುಸ್ಲಿಂ ಸಮುದಾಯ ಯಾರೊಬ್ಬರ ಕಿಸೆಯಲ್ಲಿಲ್ಲ. ಈ ಹಿಂದೆ ಎರಡೂ ಖಾತೆಗಳನ್ನು ಕಪ್ಪುಚುಕ್ಕೆ ಇಲ್ಲದೆ ನಿಭಾಯಿಸಿದ್ದೇನೆ. ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಶಾಸಕನಾಗಿ, ಮಂತ್ರಿಯಾಗಿ ನಾನು ಸಮುದಾಯ ನೋಡದೇ ಕೆಲಸ ಮಾಡಿದ್ದೇನೆ' ಎಂದು ಖಾದರ್ ಹೇಳಿದರು.
'ನಾಲಾಯಕ್ ಯಾರು? ಎಂದು ಜನರು ತೀರ್ಮಾನ ಮಾಡುತ್ತಾರೆ. ಪಕ್ಷದ ಹೈಕಮಾಂಡ್ಗೆ ನಮ್ಮ ಸಾಮರ್ಥ್ಯ ಗೊತ್ತಿದೆ' ಎಂದು ತನ್ವೀರ್ ಸೇಠ್ ಹೇಳಿಕೆಗೆ ತಿರುಗೇಟು ನೀಡಿದರು.

ನಮ್ಮ ಕುಟುಂಬ ಸದಸ್ಯರು : 'ಎಚ್.ಕೆ ಪಾಟೀಲ್, ಎಂ.ಬಿ ಪಾಟೀಲ್ ನಮ್ಮ ಕುಟುಂಬ ಸದಸ್ಯರು. ರಾಜಕೀಯದಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯ. ರಾಜಕೀಯ ಅಂದ ಮೇಲೆ ಇದನ್ನೆಲ್ಲಾ ಎದುರಿಸಬೇಕು' ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತದ ಬಗ್ಗೆ ಮಾತನಾಡಿದರು. 'ಮಂತ್ರಿಸ್ಥಾನ ಅಪೇಕ್ಷೆ ಮಾಡುವುದು ತಪ್ಪಲ್ಲ. ಮನೆಯ ಸಮಸ್ಯೆಯನ್ನು ಮನೆಯೊಳಗೆ ಬಗೆಹರಿಸುತ್ತೇವೆ. ಮಾಧ್ಯಮಗಳು ಅನಾವಶ್ಯಕವಾಗಿ ತಲೆಕೆಡಿಸಿಕೊಳ್ಳಬೇಡಿ' ಎಂದು ಸಲಹೆ ನೀಡಿದರು.
ಮಳೆ ಹಾನಿ ಪ್ರದೇಶಕ್ಕೆ ಭೇಟಿ : ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ ವಾರ ಭಾರೀ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಗುರುವಾರ ಭೇಟಿ ನೀಡಿದರು. ಉದ್ಯಾವರ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಜನರ ಜೊತೆ ಮಾತುಕತೆ ನಡೆಸಿದರು.
ಸಿಐಡಿ ತನಿಖೆಗೆ : ದನದ ವ್ಯಾಪಾರಿ ಹುಸೈನಬ್ಬ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದೆ. ಮೇ 30 ರಂದು ಉಡುಪಿಯ ಪೆರ್ಡೂರು ಸಮೀಪ ದನದ ವ್ಯಾಪಾರಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ.
ಮಂಗಳೂರಿನ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಮೇಲೆ ಪೊಲೀಸರ ಸಮ್ಮುಖದಲ್ಲೇ ಹಲ್ಲೇ ನಡೆದಿತ್ತು. ಬಳಿಕ ಹುಸೈನಬ್ಬ ಪೊಲೀಸರ ಜೀಪ್ನಲ್ಲಿಯೇ ಮೃತಪಟ್ಟಿದ್ದರು. ಮಾರಣಾಂತಿಕ ಹಲ್ಲೆ ನಡೆಸಿ ಸಾವಿಗೆ ಕಾರಣರಾದ 8 ಮಂದಿ ಭಜರಂಗದಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.












Click it and Unblock the Notifications