ದ್ವಾರಕನಾಥ್ ಗೆ ತಿರುಗೇಟು ನೀಡಿದ ಪೇಜಾವರ ಶ್ರೀ
ಉಡುಪಿ, ಡಿಸೆಂಬರ್ 6: ಶ್ರೀರಾಮನ ಅಸ್ತಿತ್ವಕ್ಕೆ ಸರಿಯಾದ ಸ್ಪಷ್ಟತೆಯಿಲ್ಲ, ಪುರಾವೆಗಳು ಇಲ್ಲವೇ ಇಲ್ಲ ಎಂದು ಹೇಳಿಕೆ ನೀಡಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ಅವರಿಗೆ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶ್ರೀ ರಾಮ ಹಿಂದೂಗಳ ಆರಾಧ್ಯ ದೇವರು. ಜನರಿಗೆ ಶ್ರೀರಾಮನ ಬಗ್ಗೆ ನಂಬಿಕೆ ಇದೆ. ಜನರ ನಂಬಿಕೆ ಅಲುಗಾಡಿಸುವ ನಿಮ್ಮ ಯತ್ನ ಬೇಡ ಎಂದು ಅವರು ದ್ವಾರಕನಾಥ್ ವಿರುದ್ಧ ಕಿಡಿಕಾರಿದರು.
ಅನ್ಯ ಧರ್ಮೀಯರ ಬಗ್ಗೆ ಹೀಗೆ ಹೇಳ್ತಿರಾ? ಬೇರೆ ಧರ್ಮದ ಬಗ್ಗೆ ಯಾಕೆ ದ್ವಾರಕನಾಥರು ಮಾತನಾಡುವುದಿಲ್ಲ? ಎಂದು ಪೇಜಾವರ ಶ್ರೀ ಪ್ರಶ್ನಿಸಿದರು. ಇಂತಹ ಅನಗತ್ಯ ಹೇಳಿಕೆಗಳನ್ನು ಕೊಡಬೇಡಿ ಎಂದು ಅವರು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ಮಂಗಳೂರಿನಲ್ಲಿ ಮಂಗಳವಾರ ಎಸ್.ಡಿ.ಪಿ.ಐ ಆಯೋಜಿಸಲಾಗಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣ ಕುರಿತ ವಿಚಾರ ಸಂಕಿರಣದಲ್ಲಿ ದ್ವಾರಕನಾಥ್ ಶ್ರೀರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದ್ವಾರಕನಾಥ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.