ಪ್ರಧಾನಿ ಮೋದಿ ತಾಯಿ ಹೀರಾಬೆನ್ ವಿಧಿವಶ: ಮಠಾಧೀಶರ ಸಂತಾಪ
ಉಡುಪಿ,ಡಿಸೆಂಬರ್ 30: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಶತಾಯುಷಿ ಹೀರಾಬೆನ್ ಶುಕ್ರವಾರ ವಿಧಿವಶರಾಗಿದ್ದಾರೆ. ನರೇಂದ್ರ ಮೋದಿಯವರ ತಾಯಿ ನಿಧನಕ್ಕೆ ಉಡುಪಿಯ ಪೇಜಾವರ ಶ್ರೀ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಪೇಜಾವರ ಮಠದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, "ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಶತಾಯುಷಿ ಹೀರಾಬೆನ್ ಮೋದಿ ವಿಧಿವಶರಾಗಿದ್ದಾರೆ ಎಂದು ತಿಳಿದು ತೀವ್ರ ಖೇದವಾಗಿದೆ. ಮಕ್ಕಳಿಗೆ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿ ಶ್ರೀಕೃಷ್ಣ ಕೊಡಲಿ. ಮೃತರಿಗೆ ಸದ್ಗತಿ ಸಿಗಲಿ ಎಂದು ಶ್ರೀಕೃಷ್ಣ ನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಇನ್ನು ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಮೋದಿಯವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿರುವ ಪುತ್ತಿಗೆ ಸುಗುಣೇಂದ್ರ ಶ್ರೀ, ಅಲ್ಲಿಂದಲೇ ಸಂತಾಪ ಸೂಚಿಸಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹರಿ ಪಾದ ಸೇರಿರುವ ವಿಚಾರ ತಿಳಿದು ಬೇಸರವಾಯಿತು. ದೇಶಕ್ಕೆ ನಾಯಕ ವಿಶ್ವಕ್ಕೆ ನರೇಂದ್ರ ಮೋದಿಯವರನ್ನು ನೀಡಿದ ಆ ತಾಯಿ ಪುಣ್ಯಾತ್ಮರು. ಪ್ರಧಾನಿ ಮೋದಿಯಂತಹ ಸುಪುತ್ರನನ್ನು ದೇಶಕ್ಕೆ ನೀಡಿರುವ ಹಿನ್ನಲೆಯಲ್ಲಿ ಅವರು ದೇಶದ ಆಸ್ತಿ. ಮೋದಿಯವರಿಗೆ ಬೆನ್ನೆಲುಬಾಗಿ ಪೂರ್ಣ ಬಲವನ್ನು ನೀಡಿದ ಆ ಮಾತೆ ಅಸ್ತಂಗತರಾಗಿರುವುದು ದುಃಖ ತಂದಿದೆ. ಈ ದುಃಖವನ್ನು ಸಹಿಸುವ ಶಕ್ತಿ ಶ್ರೀಕೃಷ್ಣ ನೀಡಲಿ. ಇನ್ನಷ್ಟು ಉತ್ತಮ ಕಾರ್ಯಕ್ಕೆ ಆ ತಾಯಿಯ ಆರ್ಶೀವಾದ ಸದಾ ಕಾಲ ಇರಲಿ ಅಂತಾ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀ ವಿಡಿಯೋ ಸಂದೇಶ ನೀಡಿದ್ದಾರೆ.

ನರೇಂದ್ರ ಮೋದಿಯವರ ತಾಯಿ ಅವರ ನಿಧನಕ್ಕೆ ಶ್ರೀ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. "ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿರವರ ತಾಯಿ ಹೀರಾಬೆನ್ ಅವರು ಇನ್ನಿಲ್ಲವಾದುದು ಅತ್ಯಂತ ದುಃಖದ ಸಂಗತಿ. ಭವ್ಯ ಭಾರತಕ್ಕೆ ಸಮರ್ಥ ಪ್ರಧಾನಿಯನ್ನು ನೀಡಿದಂತಹ ಹೀರಾಬೆನ್ ಅವರ ನಿಧನದಿಂದ ಭಾರತ ಹಿರಿಯ ಚೇತನವೊಂದನ್ನು ಕಳೆದುಕೊಂಡಂತಾಗಿದೆ. ಭಾರತವನ್ನು ಮುನ್ನಡೆಸುವ ಸಮರ್ಥ ಪ್ರಧಾನಿಯನ್ನು ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ ಆ ತಾಯಿ ತಮ್ಮ ಮಕ್ಕಳಿಗೆ ನೀಡಿರುವ ಸಂಸ್ಕಾರ ಆದರ್ಶನೀಯ. ಹೀರಾಬೆನ್ ಅವರ ನಿಧನದಿಂದ ದುಃಖಿತರಾಗಿರುವ ಕುಟುಂಬ ವರ್ಗ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ, ಅವರ ಬಂಧು ವರ್ಗದವರಿಗೆ ಭಗವಂತನು ದುಃಖವನ್ನು ಸಹಿಸುವ ಶಕ್ತಿಯನ್ನು, ಮಾತೆ ಹೀರಾಬೆನ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.












Click it and Unblock the Notifications