'ಸಿದ್ದರಾಮಯ್ಯ ಸಾಧನೆಗೆ ಪ್ರತಿಪಕ್ಷಗಳು ಮಸಿ ಬಳಿಯುತ್ತಿವೆ'
ಉಡುಪಿ, ಜುಲೈ 26 : 'ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ಕೆ.ಜೆ.ಜಾರ್ಜ್ ಅವರನ್ನು ಟಾರ್ಗೆಟ್ ಮಾಡುತ್ತಿವೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ನೀತಿ ಅನುಸರಿಸುತ್ತಿರುವುದು ದೃಢಪಟ್ಟಿದೆ' ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಡಿವೈಎಸ್ಪಿಗಳಾದ ಎಂ.ಕೆ.ಗಣಪತಿ ಮತ್ತು ಕಲ್ಲಪ್ಪ ಹಂಡಿಭಾಗ್ ಅವರ ಆತ್ಮಹತ್ಯೆ ದುರದೃಷ್ಟಕರ. ಇದರಿಂದ ಅವರ ಕುಟುಂಬ ಹಾಗೂ ರಾಜ್ಯಕ್ಕೆ ನಷ್ಟವಾಗಿದೆ. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ' ಎಂದು ತಿಳಿಸಿದರು.[ಗಣಪತಿ ಆತ್ಮಹತ್ಯೆ : Timeline]
'ಡಿವೈಎಸ್ಪಿಗಳ ಆತ್ಮಹತ್ಯೆ ವಿಚಾರವನ್ನು ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದರೂ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೂ ವಿಪಕ್ಷಗಳು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಯತ್ನದಲ್ಲಿ ತೊಡಗಿವೆ' ಎಂದು ಆರೋಪಿಸಿದರು.[ಗಣಪತಿ ಆತ್ಮಹತ್ಯೆ : ಕೆಜೆ ಜಾರ್ಜ್ ವಿರುದ್ಧ ಎಫ್ ಐಆರ್]
'ಪ್ರತಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಗಳಿಗೆ ಮಸಿ ಬಳಿಯುವ ಪ್ರಯತ್ನವಾಗಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಅಪಪ್ರಚಾರ ಮಾಡುತ್ತಿವೆ' ಎಂದು ಪ್ರಮೋದ್ ಮಧ್ವರಾಜ್ ಆರೋಪಿಸಿದರು....
'ಪೊಲೀಸರ ಆತ್ಮಹತ್ಯೆ ಹೊಸತಲ್ಲ'
'ಪೊಲೀಸರ ಆತ್ಮಹತ್ಯೆ ಕೇವಲ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾತ್ರ ನಡೆದಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 24 ಮಂದಿ, ಯಡಿಯೂರಪ್ಪ ಮತ್ತು ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ 13 ಮಂದಿ ಮತ್ತು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 17 ಮಂದಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ'
'ನಮ್ಮ ಬೇಡಿಕೆಯನ್ನು ಪರಿಗಣಿಸಲಿಲ್ಲ'
'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3 ವರ್ಷಗಳಲ್ಲಿ 8 ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ 13 ಪ್ರಕರಣಗಳನ್ನು ಸಿಬಿಐಗೆ ನೀಡಬೇಕೆಂದು ಒತ್ತಾಯಿಸಲಾಗಿತ್ತು. ಬಿಜೆಪಿ ಬೇಡಿಕೆಯನ್ನು ಮನ್ನಿಸಿರಲಿಲ್ಲ. ತನಿಖಾ ಸಂಸ್ಥೆಗಳ ಬಗ್ಗೆ ಕಾಂಗ್ರೆಸ್ಗೆ ನಂಬಿಕೆ ಮತ್ತು ಗೌರವವಿದೆ' ಎಂದು ಸಚಿವರು ಹೇಳಿದರು.
'ಕಲ್ಲಪ್ಪ ಬಗ್ಗೆ ಮಾತನಾಡುತ್ತಿಲ್ಲ'
'ಎಂ.ಕೆ.ಗಣಪತಿ ಆತ್ಮಹತ್ಯೆಯ ಬಗ್ಗೆ ಮಾತನಾಡುವ ಬಿಜೆಪಿಯವರು ಕಲ್ಲಪ್ಪ ಹಂಡಿಭಾಗ್ ಅವರ ಆತ್ಮಹತ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಪ್ರಕರಣದಲ್ಲಿ ಭಜರಂಗದಳದ ಪ್ರಮುಖರೆ ಇರುವುದು ಇದಕ್ಕೆ ಕಾರಣವಾಗಿದೆ' ಎಂದು ಪ್ರಮೋದ್ ಆರೋಪಿಸಿದರು.
'ಯಾರೂ ರಾಜೀನಾಮೆ ಕೊಟ್ಟಿಲ್ಲ'
'ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಹಲವು ಸದಸ್ಯರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಆದರೆ ಯಾರು ಕೂಡಾ ರಾಜೀನಾಮೆ ನೀಡಿಲ್ಲ. ಕರ್ನಾಟಕವನ್ನು ಪ್ರತಿನಿಧಿಸುವ ಬಿಜೆಪಿಯ ಹಲವು ಸಂಸದರ ವಿರುದ್ಧವೂ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಅವರು ಏಕೆ ರಾಜೀನಾಮೆ ಕೊಟ್ಟಿಲ್ಲ?' ಎಂದು ಸಚಿವರು ಪ್ರಶ್ನಿಸಿದರು.
'ಜನರ ದಾರಿ ತಪ್ಪಿಸುತ್ತಿದ್ದಾರೆ'
'ಕೆಲವು ಜೆಡಿಎಸ್ ಮುಖಂಡರ ವಿರುದ್ಧವೂ ಪ್ರಕರಣಗಳಿವೆ. ಆದರೆ, ಬಿಜೆಪಿ ಮತ್ತು ಜೆಡಿಎಸ್ ನವರು ಗಾಜಿನ ಮನೆಯಲ್ಲಿದ್ದುಕೊಂಡು ಕಾಂಗ್ರೆಸ್ ಪಕ್ಷದ ಮುಖಂಡ ರತ್ತ ಕಲ್ಲೆಸೆಯುತ್ತಾ ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ವಿಪಕ್ಷಗಳಿಗೆ ಇಲ್ಲ' ಎಂದು ಸಚಿವರು ಹೇಳಿದರು.