ಬಿಲ್ಲವ -ಮುಸ್ಲಿಂ ಸಮ್ಮಿಲನಕ್ಕೆ ಬಿಲ್ಲವ ಮುಖಂಡರಿಂದಲೇ ವಿರೋಧ; ಸ್ನೇಹ ಸಾಧ್ಯವಿಲ್ಲ ಎಂದ ಮುಖಂಡರು
ಉಡುಪಿ, ಜನವರಿ 6: ಕರಾವಳಿಯಲ್ಲಿ ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮಿಲನ ಕುರಿತಂತೆ ಪರ ವಿರೋಧ ಚರ್ಚೆ ತಾರಕಕ್ಕೇರತೊಡಗಿದೆ. ಇದೇ ತಿಂಗಳ ಹನ್ನೊಂದರಂದು ಉಡುಪಿಯಲ್ಲಿ ಬಿಲ್ಲವ-ಮುಸ್ಲಿಂ ಸ್ನೇಹ ಸಮ್ಮಿಲನವನ್ನು ಬಿಲ್ಲವ ಮುಖಂಡರು ಮತ್ತು ಮುಸ್ಲಿಂ ಮುಖಂಡರು ಆಯೋಜಿಸಿದ್ದಾರೆ. ಈ ಸಂಬಂಧ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿತ್ತು.
ಇಂದು ಬಿಲ್ಲವ ಮುಖಂಡರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಸಮ್ಮಿಲನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಲ್ಲವ - ಮುಸ್ಲಿಂ ಸ್ನೇಹ ಸಮ್ಮಿಲನಕ್ಕೂ ಬಿಲ್ಲವರಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
"ಹಿಂದೂ ಸಮಾಜವನ್ನು ಒಡೆಯುವ ಇಂತಹ ಸಮ್ಮಿಲನಕ್ಕೆ ನಮ್ಮ ವಿರೋಧ ಇದೆ. ಮುಸ್ಲಿಮರ ಜೊತೆ ಸ್ನೇಹ ಯಾವತ್ತೂ ಸಾಧ್ಯ ಇಲ್ಲ. ಮುಸ್ಲಿಂ ಸಮಾಜದಿಂದ ಬಿಲ್ಲವ ಸಮುದಾಯಕ್ಕೆ ಅನ್ಯಾಯವಾಗಿದೆ. ಕಪಟ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಈ ಸಮ್ಮಿಲನ ಆಯೋಜಿಸಿದ್ದಾರೆ. ಪೊಲೀಸರು ಈ ಸಮಾವೇಶಕ್ಕೆ ಅನುಮತಿ ನೀಡಬಾರದು" ಎಂದು ಇದೇ ಸಂದರ್ಭ ಬಿಲ್ಲವ ಮುಖಂಡರು ಮನವಿ ಮಾಡಿದರು.

ಬಿಲ್ಲವ ಎಂಬ ಪದವನ್ನು ಕೈಬಿಡದಿದ್ದರೆ ಇದೇ 9 ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಬಿಲ್ಲವ ಸಮುದಾಯದವರಾಗಿದ್ದು, ಈ ಸ್ನೇಹ ಸಮ್ಮಿಲನ ಆಯೋಜನೆಯಲ್ಲಿ ಮುಂಚೂಣಿಯಲ್ಲಿರುವುದು ಗಮನಾರ್ಹ ಸಂಗತಿ. ಸ್ನೇಹ ಸಮ್ಮಿಲನದ ಆಹ್ವಾನ ಪತ್ರಿಕೆಯಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ಹೆಸರೂ ಇತ್ತು. ಆದರೆ ತಾವು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕೋಟ ಶ್ರೀನಿವಾಸ್ ಪೂಜಾರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications