ಅಮಿತ್ ಶಾ ಮಂಗಳೂರಿಗೆ ಆಗಮನ: ವಿರೋಧಿಸುವವರಿಗೆ ಬೊಮ್ಮಾಯಿ ಎಚ್ಚರಿಕೆ
ಉಡುಪಿ, ಜನವರಿ 07: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಂಗಳೂರು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವ ಬೊಮ್ಮಾಯಿ ಅವರು, ""ಅಮಿತ್ ಶಾ ಈ ದೇಶದ ಗೃಹ ಸಚಿವರು ಹಾಗೂ ರಾಷ್ಟ್ರ ನಾಯಕರು, ಅವರು ನಮ್ಮ ಜಿಲ್ಲೆಗೆ ಬರಬೇಕು, ಬಂದೇ ಬರುತ್ತಾರೆ'' ಎಂದರು.
ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವ ವಿರೋಧಿ ನಿಲುವು ವ್ಯಕ್ತಪಡಿಸುತ್ತಿದೆ. ಐವಾನ್ ಡಿಸೋಜಾ ಅವರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದ್ದಾರೆ, ಉಪವಾಸ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ವ್ಯಂಗ್ಯವಾಡಿದರು.

ಕೇಂದ್ರದ ಎನ್ ಡಿಆರ್ಎಫ್ ನಿಂದ ದೊಡ್ಡ ಪ್ರಮಾಣದ ನೆರೆ ಪರಿಹಾರದ ಹಣ ಬಿಡುಗಡೆಯಾಗಿದೆ, ಅದನ್ನು ಸೂಕ್ತ ರೀತಿಯಲ್ಲಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ""ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೆನಪು ಮಾಡಿಕೊಡ್ತೇನೆ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 14 ಸಾವಿರ ಕೋಟಿ ರುಪಾಯಿ ಬೇಡಿಕೆ ಇಟ್ಟಿದ್ದೆವು. 1400 ಕೋಟಿ ಪರಿಹಾರ ಕೊಟ್ಟಿದ್ದರು ಎಂದು ವಿಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು.
ಯುಪಿಎ ಸರಕಾರದ ಅವಧಿಯಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಮೊತ್ತ ಎಷ್ಟು ಬಿಡುಗಡೆಯಾಗಿದೆ ಎನ್ನುವುದನ್ನು ವಿಧಾನಸಭೆ ಅಧಿವೇಶನದಲ್ಲಿ ನಾವು ಹೇಳುತ್ತೆವೆ, ಕ್ಷುಲ್ಲಕ ರಾಜಕಾರಣ ಮಾಡೋದಕ್ಕೆ ಕಾಂಗ್ರೆಸ್ಸಿಗರು ಕೆಲವು ಅಸಂಬದ್ಧ ಹೇಳಿಕೆ ಕೊಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ನಾಳೆ ಭಾರತ್ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೃಹ ಸಚಿವರು, ಕಾನೂನು ಸುವ್ಯವಸ್ಥೆ ಕೈಗೊಂಡಿದ್ದೇವೆ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಸಿಐಟಿಯು ಅಧ್ಯಕ್ಷ ಅನಂತ್ ಸುಬ್ಬರಾವ್ ಮುಷ್ಕರ ಮಾಡೋದಾಗಿ ಹೇಳಿದ್ದಾರೆ. ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ ಆದರೆ ಮೆರವಣಿಗೆ ಮಾಡಲು ಅವಕಾಶ ಇಲ್ಲ ಅಂತ ಪೊಲೀಸ್ ಅಧಿಕಾರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆಂದರು.
ದಿನನಿತ್ಯದ ಚಟುವಟಿಕೆಗೆ ಯಾವುದೇ ಸಮಸ್ಯೆ ಇಲ್ಲ. ಬಂದ್ ಇರೋದಿಲ್ಲ, ಅಗತ್ಯ ವಸ್ತುಗಳು ಸಿಗುತ್ತವೆ ಮತ್ತು ಶಾಲಾ ಕಾಲೇಜುಗಳು ತೆರೆದಿರುತ್ತವೆ ಎಂದು ಉಡುಪಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದರು.












Click it and Unblock the Notifications