ಕುಂದಾಪುರದ ಕೋಟೇಶ್ವರದಲ್ಲಿ ನೈತಿಕ ಪೊಲೀಸ್ ಗಿರಿ
ಉಡುಪಿ, ಸೆಪ್ಟೆಂಬರ್ 13: ಜಿಲ್ಲೆಯ ಕುಂದಾಪುರದಲ್ಲಿ ಸೋಮವಾರ ನೈತಿಕ ಪೊಲೀಸ್ ಗಿರಿ ನಡೆದ ಘಟನೆ ಬೆಳಕಿಗೆ ಬಂದಿದೆ. ಇದೀಗ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುಂದಾಪುರದಿಂದ ಉಡುಪಿ ಕಡೆ ತೆರಳುತ್ತಿದ್ದ ಮೂವರು ಯುವತಿಯರು ಹಾಗೂ ಇಬ್ಬರು ಯುವಕರಿದ್ದ ಕಾರನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಕೋಟೇಶ್ವರದ ಬಳಿ ಅಡ್ಡಗಟ್ದಿದ್ದಾರೆ. ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ಕಾರಿನಲ್ಲಿದ್ದವರನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಯುವಕ-ಯುವತಿಯರನ್ನು ಉಡುಪಿಯ ಕಾಲೇಜೊಂದರ ವಿದ್ಯಾರ್ಥಿಗಳೆಂದು ಗುರುತಿಸಲಾಗಿದ್ದು, ಈ ಯುವಕ ಯುವತಿಯರು ಕುಂದಾಪುರದ ಮರವಂತೆ ಬೀಚ್ ನಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ದೂರಲಾಗಿದೆ.
ಈ ಹಿನ್ನೆಲೆಯಲ್ಲಿ ಅದನ್ನು ಗಮನಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಯುವಕ ಯುವತಿಯರಿದ್ದ ಕಾರನ್ನು ಹಿಂಬಾಲಿಸಿ ಕೋಟೇಶ್ವರದಲ್ಲಿ ಅಡ್ಡಗಟ್ಟಿ ಕುಂದಾಪುರ ಪೊಲೀಸರಿಗೊಪ್ಪಿಸಿದ್ದಾರೆ.
ಘಟನೆಯ ಬಗ್ಗೆ ತಿಳಿಯುತಿದ್ದಂತೆ ಪೊಲೀಸ್ ಠಾಣೆಗೆ ನೂರಾರು ಮಂದಿ ನೆರೆದಿದ್ದ ಹಿನ್ನೆಲೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾನವಾಗಿತ್ತು.ಇದರಿಂದ ಪೊಲೀಸರು ಗರಂ ಆದರು. ಅಲ್ಲದೆ ಹಿಂದೂ ಸಂಘಟನೆ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಪೊಲೀಸರು ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ಕುರಿತು ವಿದ್ಯಾರ್ಥಿಗಳ ವಿಚಾರಣೆ ನಡೆಸಿದ ಕುಂದಾಪುರ ಠಾಣೆಯ ಪೊಲೀಸರು ನಂತರ ವಿದ್ಯಾರ್ಥಿಗಳನ್ನು ಪೋಷಕರಿಗೆ ಒಪ್ಪಿಸಿದ್ದಾರೆ.











Click it and Unblock the Notifications