ಚುನಾವಣೆ ಬಂದಾಗ ಬಿಜೆಪಿಗೆ ಮಂದಿರ ನೆನಪಾ? ಪೇಜಾವರ ಶ್ರೀ ಹೇಳಿದ್ದೇನು?
ಬಿಜೆಪಿ-ರಾಮಂದಿರ ಎರಡೂ ಪರ್ಯಾಯ ಪದಗಳಂತೆ ಕೇಳುತ್ತಿದ್ದಂಥ ಕಾಲವೊಂದಿತ್ತು. ಈಗ ಅಲ್ಲೊಮ್ಮೆ-ಇಲ್ಲೊಮ್ಮೆ ರಾಮಮಂದಿರದ ಪ್ರಸ್ತಾವ ಆಗುತ್ತದೆ. ಈ ಬಗ್ಗೆ ಉಡುಪಿಯಲ್ಲಿ ಪೇಜಾವರ ಶ್ರೀಗಳು ಏನು ಹೇಳಿದ್ದಾರೆ ಎಂಬುದನ್ನು ಓದಿ
ಉಡುಪಿ, ಜನವರಿ 30: ಸಂವಿಧಾನದ ಚೌಕಟ್ಟಿನಲ್ಲಿ ರಾಮಮಂದಿರ ಕಟ್ಟುತ್ತೇವೆ ಎಂದಷ್ಟೇ ಬಿಜೆಪಿ ಹೇಳಿದೆ. ರಾಮಮಂದಿರ ಉದ್ದೇಶವನ್ನೇನೂ ಕೈ ಬಿಟ್ಟಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಯಾವ ಸರಕಾರಕ್ಕೂ ಮಂದಿರ ಕಟ್ಟಲು ಸಾಧ್ಯವಿಲ್ಲ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಮಮಂದಿರ ಕಟ್ಟಬೇಕು ಎಂಬ ಮನಸ್ಸಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಉತ್ತರ ಪ್ರದೇಶ ಚುನಾವಣೆ ಪ್ರಣಾಳಿಕೆಯಲ್ಲಿ ರಾಮಮಂದಿರದ ಪ್ರಸ್ತಾವ ಇದೆ. ಚುನಾವಣೆ ಬಂದಾಗ ಬಿಜೆಪಿಗೆ ರಾಮಮಂದಿರ ನೆನಪಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಬಿಜೆಪಿಯವರು ರಾಮಮಂದಿರ ಕಟ್ಟುವ ಉದ್ದೇಶ ಇದೆ ಎನ್ನುತ್ತಾರೆ. ಆದರೆ ಮಂದಿರ ಕಟ್ಟುವ ಉದ್ದೇಶ ಬಿಟ್ಟಿಲ್ಲ ಅನ್ನೋದು ಸ್ಪಷ್ಟ. ಅನುಕೂಲಕರ ಸನ್ನಿವೇಶ ಬಂದಿಲ್ಲ ಎಂದು ಅವರು ಹೇಳಿದರು.['ರಾಮ ಮಂದಿರ ಕಟ್ಟುತ್ತೇವೆ'... ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ]

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಯಾವುದೇ ಪಕ್ಷದಲ್ಲಿ ಬೇಕಾದರೂ ಇರಲಿ, ಅವರ ಮಾರ್ಗದರ್ಶನ ಈ ದೇಶಕ್ಕೆ ಅಗತ್ಯವಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಎಸ್ ಎಂ. ಕೃಷ್ಣ ಅವರ ರಾಜಕೀಯ ನಿವೃತ್ತಿ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಇದು ರಾಜಕೀಯ ವಿಚಾರ ನನಗೇನೂ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದವರು ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ, ಯಾವ ಪಕ್ಷದಲ್ಲಿರಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.












Click it and Unblock the Notifications