ಉಡುಪಿಯಲ್ಲಿ ಮೂವರಲ್ಲೂ ಕೊರೊನಾ "ನೆಗೆಟಿವ್"
ಉಡುಪಿ, ಮಾರ್ಚ್ 14: ಉಡುಪಿಯಲ್ಲಿ ಮೂವರು ವಿದ್ಯಾರ್ಥಿಗಳಲ್ಲಿ ನಿನ್ನೆ ಕೊರೊನಾ ವೈರಸ್ ಸೋಂಕಿನ ಶಂಕೆ ವ್ಯಕ್ತಗೊಂಡಿದ್ದು, ಮೂವರಿಗೂ ಯಾವುದೇ ಸೋಂಕು ಇಲ್ಲ ಎಂಬುದು ಖಚಿತವಾಗಿದೆ.
ಇಂದು ವೈದ್ಯಾಧಿಕಾರಿಗಳ ಕೈಗೆ ವರದಿ ಸೇರಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ದುಬೈ ಮೂಲದ ವಿದ್ಯಾರ್ಥಿ, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಿರ್ವ ಮೂಲದ ಯುವಕ ಹಾಗೂ ಸಾಗರ ಮೂಲದ ವೃದ್ಧೆಗೂ ಕೊರೊನಾವೈರಸ್ ಸೋಂಕು ಇಲ್ಲ ಎಂಬುದು ತಿಳಿದುಬಂದಿದೆ.
ಬಸ್ ನಿರ್ವಾಹಕ, ಚಾಲಕನಿಂದ ಮಾಸ್ಕ್ ವಿತರಿಸಿ ಕೊರೊನಾ ಜಾಗೃತಿ
ಕೊರೊನಾ ವೈರಸ್ ಸೋಂಕಿನ ಅನುಮಾನ ದಟ್ಟವಾಗಿದ್ದ ಹಿನ್ನೆಲೆಯಲ್ಲಿ ವೃದ್ಧೆಯ ರಕ್ತದ ಮಾದರಿಯನ್ನು ಮೂರನೇ ಬಾರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೂರೂ ಬಾರಿ ನೆಗೆಟಿವ್ ಎಂದು ವರದಿ ಬಂದಿರುವುದಾಗಿ ಡಿಎಚ್ ಇ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.
ಕಾಪು ಮೂಲದ, ಜರ್ಮನಿಯಿಂದ ಬಂದಿರುವ ಯುವಕನಲ್ಲೂ ಶೀತ, ಕೆಮ್ಮು ಕಾಣಿಸಿಕೊಂಡಿದ್ದು, ಸ್ವಯಂಪ್ರೇರಿತವಾಗಿ ಯುವಕ ಜಿಲ್ಲಾಸ್ಪತ್ರೆಯ ಐಸೋಲೇಟೆಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಈ ನಡುವೆ ಉಡುಪಿಯಲ್ಲಿ ಅನಿವಾಸಿ ಭಾರತೀಯ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇಂದು ರಣವೀರ್ ಸಿಂಗ್ (82) ಎಂಬ ಕೆನಡಾ ಮೂಲದ ವ್ಯಕ್ತಿ ಉಡುಪಿಯ ತೋನ್ಸೆ ಹೆಲ್ತ್ ಸೆಂಟರ್ ನಲ್ಲಿ ಸಾವನ್ನಪ್ಪಿದ್ದರು. ಅವರು ವಿದೇಶಿ ಪ್ರಜೆಯೆಂಬ ಕಾರಣಕ್ಕೆ ಆತಂಕ ಎದುರಾಗಿತ್ತು. ಆದರೆ ನವೆಂಬರ್ 5ಕ್ಕೇ ಅವರು ಆಸ್ಪತ್ರೆಗೆ ಬಂದಿದ್ದರು. "ಪ್ರತಿ ಚಳಿಗಾಲಕ್ಕೆ ಅವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದಯಾಘಾತದಿಂದ ರಣವೀರ್ ಸಾವನ್ನಪ್ಪಿದ್ದಾರೆ. ಅವರಲ್ಲಿಕೊರೊನಾ ಲಕ್ಷಣಗಳು ಇರಲಿಲ್ಲ. ಸಾರ್ವಜನಿಕರಲ್ಲಿ ಯಾವುದೇ ಆತಂಕ ಬೇಡ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಪ್ರಚಾರ ಮಾಡಬೇಡಿ. ಸುಳ್ಳು ಪ್ರಚಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.