ಧರ್ಮದೈವ ಕೊಡಮಣಿತ್ತಾಯನ ಉಗ್ರಕೋಪಕ್ಕೆ ಗುರಿಯಾದರೇ ಶೀರೂರು ಶ್ರೀ?
Recommended Video

ಗಾಳಿಗೊಂದು ಸುದ್ದಿಯೆನ್ನುವಂತೆ ಆಷಾಢ ಶುಕ್ಲ ಸಪ್ತಮಿಯ ದಿನವಾದ ಜುಲೈ 19ರಂದು ವೃಂದಾವನಸ್ಥರಾದ ಉಡುಪಿ ಅಷ್ಟಮಠಗಳ ಶ್ರೀಗಳಲ್ಲೊಬ್ಬರಾದ ಶೀರೂರು ಲಕ್ಷ್ಮೀವರ ತೀರ್ಥರ ನಿಧನದ ಸುತ್ತ ಹೊಸ ಗುಸುಗುಸು ಸುದ್ದಿಯೊಂದು ಹರಿದಾಡುತ್ತಿದೆ.
ಶೀರೂರು ಶ್ರೀಗಳಿಗೆ ಫುಡ್ ಪಾಯ್ಸನ್ ಆಗಿತ್ತಾ ಅಥವಾ ಫುಡ್ಡಿಗೆ ಪಾಯ್ಸನ್ ಹಾಕಲಾಗಿತ್ತಾ ಎನ್ನುವ ಬಿಸಿಬಿಸಿ ಚರ್ಚೆಯ ನಡುವೆ, ವಾಟ್ಸಾಪ್ ನಲ್ಲೊಂದು ಹೊಸಸುದ್ದಿ ಹರಿದಾಡುತ್ತಿದೆ. ತುಳುನಾಡಿನಲ್ಲಿ ಬಹುವಾಗಿ ನಂಬುವ ದೈವದ ಶಾಪ ಶ್ರೀಗಳಿಗೆ ತಟ್ಟಿದೆ ಎನ್ನುವುದೇ ಈ ಹೊಸ ಸುದ್ದಿ.
ಪ್ರಮುಖವಾಗಿ ದೇವರಿಗಿಂತೆ ದೈವವನ್ನೇ ನಂಬುವರು ಸಂಖ್ಯೆ ಒಂದು ಕೈಮೇಲು ಎನ್ನುವ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭೂತಾರಾಧನೆಗೆ ಇನ್ನಿಲ್ಲದ ಮಹತ್ವ. ಹೀಗಿರುವಾಗ, ದೈವದ ಕೋಲ/ನೇಮವೊಂದರಲ್ಲಿ ಶೀರೂರು ಶ್ರೀಗಳು ದೈವಕ್ಕೆ ವಿಢಂಬನೆ ಮಾಡಿದ್ದಾರೆ. ಅದಕ್ಕೆ ಹೀಗಾಗಿರುವ ಸಾಧ್ಯತೆಯಿದೆಯಾ ಎನ್ನುವ ಚರ್ಚೆ ಆರಂಭವಾಗಿದೆ.

ಉಡುಪಿ ಕೃಷ್ಣಮಠದ ಮೂಲ ಶ್ರೀಕೃಷ್ಣ, ಮುಖ್ಯಪ್ರಾಣ ದೇವರ ವಿಗ್ರಹವನ್ನು ಮುಟ್ಟಿ ಪೂಜೆ ಮಾಡುವ ಪೀಠಾಧಿಪತಿಗಳಿಗೆ ದೈವದ ಶಾಪ ತಟ್ಟುತ್ತಾ? ಅಷ್ಟಮಠದ ಪದ್ದತಿಯನ್ನು ಬಹುವಾಗಿ ಪಾಲಿಸದಿದ್ದರೂ, ಹಿಂದೂ ಸಂಪ್ರದಾಯಕ್ಕೆ ಯಾವತ್ತೂ ಲೋಪ ತರದ ಶೀರೂರು ಶ್ರೀಗಳು ಉದ್ದೇಶಪೂರ್ವಕವಾಗಿ ದೈವಕ್ಕೆ ಅಪಮಾನ ಮಾಡಿಯಾರೇ ಎನ್ನುವ ಪರ/ವಿರೋಧ ಚರ್ಚೆಗಳೂ ನಡೆಯುತ್ತಿದೆ.
ಕೆಲವು ತಿಂಗಳ ಹಿಂದೆ ನಡೆದ ದೈವಪೂಜೆಯ ಸಂದರ್ಭವನ್ನು ವಿವರಿಸುವುದಾದರೆ, ಉಡುಪಿ ಜಿಲ್ಲೆ ಪಡುಬಿದ್ರೆಯ ಬಾಲುಪೂಜಾರಿ ಎನ್ನುವವರ ಕುಟುಂಬದ ಧರ್ಮದೈವ ಕೊಡಮಣಿತ್ತಾಯನ ಧರ್ಮನೇಮದ ಸಂದರ್ಭದಲ್ಲಿ ಶೀರೂರು ಶ್ರೀಗಳು ದೈವದ ಜೊತೆ ಅನುಚಿತವಾಗಿ ವರ್ತಿಸಿದರು ಎನ್ನುವುದೀಗ ಸುದ್ದಿ.
ದೈವದ ನಡೆಯಲ್ಲಿ ನಡೆಯುವ ಕಟ್ಟು-ಪಾಡುಗಳ ವಿಢಂಬನೆ ಜೀವಹಾನಿಗೆ ಕಾರಣವಾದ ಅನೇಕ ಉದಾಹರಣೆಗಳಿವೆ. ಈ ರೀತಿಯ ವಿಢಂಬನೆ ಇತ್ತೀಚಿಗೆ ನಡೆದ ಧರ್ಮನೇಮದ ರಂಗದ ವೇಳೆಯೂ ನಡೆದಿತ್ತು. ಕೊಡಮಣಿತ್ತಾಯನ ಕೋಲದ ವೇಳೆ, ಶೀರೂರು ಶ್ರೀಗಳು ದೈವದ ಜೊತೆ ಹಾವಭಾವಗಳ ಮೂಲಕ ಹಾಸ್ಯಾಸ್ಪದವಾಗಿ ನಡೆದಿದ್ದರು ಎನ್ನುವುದಕ್ಕೆ ವಿಡಿಯೋ ತುಣುಕು ಕೂಡಾ ಸಾಕ್ಷಿಯಾಗಿದೆ.
ವಿಡಿಯೋ ತುಣುಕವನ್ನು ಅವಲೋಕಿಸುವುದಾದರೆ, ದೈವ ಶೀರೂರು ಶ್ರೀಗಳಿಗೆ ಏನನ್ನೋ ಸೂಚಿಸುತ್ತದೆ, ಆದರೆ, ಶ್ರೀಗಳು ಅದಕ್ಕೆ ಹಾವಭಾವಗಳ ಮೂಲಕ ವಿಢಂಬನಾತ್ಮಕವಾಗಿ ಉತ್ತರಿಸುತ್ತಾರೆ. ಶ್ರೀಗಳ ಈ ಅನುಚಿತ ವರ್ತನೆ ದೈವಾರಾಧನೆಯ ರಂಗದಲ್ಲೂ ಸಾಕಷ್ಟು ಚರ್ಚೆಗೆ ದಾರಿಯಾಗಿತ್ತು.
ಏನೇ ಆಗಲಿ, ಅದೇನೇ ಇರಲಿ.. ಶ್ರೀಗಳ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಆ ಶ್ರೀಕೃಷ್ಣ ಮುಖ್ಯಪ್ರಾಣರು ಕರುಣಿಸಲಿ, ಹಿಂದೂ ಮಾಧ್ವ ಸಂಪ್ರದಾಯದ ಪೀಠಾಧಿಪತಿಗಳನ್ನು ನಾವು ಕಳೆದುಕೊಂಡಿದ್ದೇವೆ ಎನ್ನುವ ದುಃಖವನ್ನು ಎಲ್ಲರೂ ಸಮಾಜಿಕ ತಾಣದಲ್ಲಿ ತೋಡಿಕೊಳ್ಳುತ್ತಿದ್ದಾರೆ.












Click it and Unblock the Notifications