ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!
ಮಂಗಳೂರು, ಏಪ್ರಿಲ್ 29 : ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ತುಂಬೆಯ ನೀರು ಖಾಲಿಯಾಗದಂತೆ ಮಂಗಳೂರಿನ ಖಾಸಗಿ ಬಾವಿಗಳಿಂದ ನೀರು ಸಂಗ್ರಹಿಸಿ, ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಪಾಲಿಕೆ ಚಿಂತನೆ ನಡೆಸಿದೆ.
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿಯಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಶಕ್ತರಾಗಿರುವ ಸುಮಾರು 20 ಖಾಸಗಿ ಬಾವಿಗಳಿವೆ. ಕದ್ರಿ ಪರಿಸರದ 150 ಮೀಟರ್ನ ಒಳಗಡೆಯೇ 8 ಖಾಸಗಿ ಬಾವಿಗಳಿವೆ. ಉಳಿದಂತೆ ಸೂಟರ್ ಪೇಟೆ, ಪಂಪ್ವೆಲ್, ಪಡೀಲ್, ಆನೆಗುಂಡಿ, ಸುಲ್ತಾನ್ ಬತ್ತೇರಿ, ಅತ್ತಾವರ, ಮರೋಲಿ ಸೇರಿದಂತೆ ಮಂಗಳೂರಿನ ನಾನಾ ಭಾಗಗಳಲ್ಲಿ ಖಾಸಗಿ ಬಾವಿಗಳಿವೆ. [ಬತ್ತಿದ ನೇತ್ರಾವತಿ]

ಈ ಸ್ಥಳಗಳು ನಿರಂತರ ನೀರು ಸಾಗಾಟದ ಕೇಂದ್ರವಾಗಿವೆ. ಈ ಭಾಗದಿಂದ ಮಂಗಳೂರಿನ ನಾನಾ ಭಾಗಕ್ಕೆ ಟ್ಯಾಂಕರ್ ಮೂಲಕ ನೀರು ಸಾಗಾಟವಾಗುತ್ತಿದೆ. ಪ್ರಸಕ್ತ ಈ ವ್ಯಾಪ್ತಿಯಲ್ಲಿ ಟ್ಯಾಂಕರ್ ಸಂಚಾರ ಅಧಿಕಗೊಂಡಿದ್ದು, ನೀರಿಗಾಗಿ ಭಾರೀ ಬೇಡಿಕೆ ಇದೆ. ಟ್ಯಾಂಕರ್ನವರು ಖಾಸಗಿ ಬಾವಿ ಹೊಂದಿರುವವರಿಂದ ನೀರು ಪಡೆದು , ಅಗತ್ಯವಿರುವಲ್ಲಿಗೆ ನೀರು ಸರಬರಾಜು ಮಾಡುತ್ತಿದ್ದಾರೆ.[ಮಂಗಳೂರಿನಲ್ಲಿ ಈಗಲೇ ನೀರಿಲ್ಲ, ಇಂಚಾಂಡ ಎಂಚ!]
ನೇತ್ರಾವತಿ ನದಿ ನೀರಿಗೂ ಕಾವಲು : ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿಯ ನೀರನ್ನು ಕದಿಯಲಾಗುತ್ತದೆ ಎಂದು ಕಾವಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಗಾದರೆ ನೀರಿನ ಸಮಸ್ಯೆ ಅಷ್ಟೊಂದು ಬಿಗಡಾಯಿಸಿದೆಯೇ? ಎಂದರೆ ಹೌದು. [ಉಡುಪಿಯಲ್ಲೂ ನೀರಿಗೆ ಬರ, ಟ್ಯಾಂಕರ್ ಮೂಲಕ ನೀರು ಪೂರೈಕೆ]
ಮಂಗಳೂರಿನ ಜನತೆಗೆ ನೀರು ಒದಗಿಸುವುದಕ್ಕಾಗಿ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಕಂಕಣಬದ್ಧವಾಗಿದೆ. ಎಲ್ಲೆಲ್ಲಿಂದ ನೀರು ಸಿಗುತ್ತದೆಯೋ ಅಲ್ಲಿಂದೆಲ್ಲ ಬಳಸಲು ಈಗಲೇ ನಿರ್ಧರಿಸಿದೆ. ತುಂಬೆ ಡ್ಯಾಂ ಹಿಂದೆ ಇರುವ ಎಂಆರ್ಪಿಎಲ್ ಮತ್ತು ಸೆಝ್ ಡ್ಯಾಂ ಪರಿಸರದಲ್ಲಿ ರಾತ್ರಿ ಸಮಯ ಕಾವಲು ಕಾಯಲಾಗುತ್ತಿದೆ. ಈ ಕಂಪೆನಿಗಳು ರಾತ್ರಿ ಸಮಯ ನೀರು ಕದಿಯಬಾರದೆಂದು ಪಾಲಿಕೆ ಇಲ್ಲಿಗೆ ಸಿಬ್ಬಂದಿಯನ್ನು ನಿಯೋಜಿಸಿದೆ. [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ]
ಇದಲ್ಲದೆ ಮೆಸ್ಕಾಂ ಅಧಿಕಾರಿಗಳು ಕೂಡಾ ಸೆಝ್ ಮತ್ತು ಎಂಆರ್ಪಿಎಲ್ ನೀರೆತ್ತುವ ಸ್ಥಾವರಗಳಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ವಿದ್ಯುತ್ ಮೀಟರ್ ರೀಡಿಂಗ್ ನಡೆಸಿ ದಾಖಲಿಸಿಕೊಂಡಿದ್ದಾರೆ. ಇದರಿಂದಾಗಿ ಕಾವಲು ಸಿಬ್ಬಂದಿಯ ಕಣ್ತಪ್ಪಿಸಿ ಈ ಸ್ಥಾವರಗಳ ಪಂಪ್ ಸೆಟ್ ಚಾಲು ಮಾಡಿದರು ಸಿಕ್ಕಿ ಬೀಳುವುದು ಖಚಿತ.
ಕಟ್ಟೆ ದಿಶಾ, ಕಡಬಾ ಡ್ಯಾಂಗಳಲ್ಲಿ ನೀರು ಸಂಪೂರ್ಣ ಬರಿದಾಗಿದೆ. ನೆಕ್ಕಿಲಾಡಿ ಡ್ಯಾಂನಲ್ಲಿ 10 ಹತ್ತು ಅಡಿ ನೀರಿದ್ದು, 6 ಅಡಿ ನೀರು ಮಾತ್ರ ಬಳಸಬಹುದಾಗಿದೆ. ಕುಮಾರಧಾರ ನದಿಯ ಗೌಡ ಮನೆ ಮಿನಿ ಹೈಡಲ್ ನಾಗಾರ್ಜುನ ಪ್ರಾಜೆಕ್ಟ್ ನಲ್ಲಿ ಹತ್ತು ಅಡಿ ನೀರಿನ ಲಭ್ಯತೆ ಇರುವುದಾಗಿ ಮೂಲಗಳು ತಿಳಿಸಿವೆ.
ಆದರೆ, ಇಲ್ಲಿಂದ ನೀರು ಬಿಟ್ಟರು ತುಂಬೆಗೆ ಹರಿದು ಬರಲು ಕನಿಷ್ಟ ಒಂದು ವಾರದ ಅವಧಿ ಬೇಕಾಗುತ್ತದೆ. ನದಿಯ ಅಲ್ಲಲ್ಲಿ ಈಗಾಗಲೇ ಬರಿದಾಗಿರುವುದರಿಂದ ಆಳ ಪ್ರದೇಶಕ್ಕೆ ನೀರು ತುಂಬಿ ಬರುವಾಗ ನೀರಿನ ಹರಿವು ಹೇಳಿಕೊಳ್ಳುವಷ್ಟು ದೊರೆಯದು ಎನ್ನುತ್ತಾರೆ ಅಧಿಕಾರಿಗಳು.
ಮಂಗಳೂರು ಮಹಾನಗರ ಪಾಲಿಕೆ ಕಾರ್ಮಿಕರು ನೇತ್ರಾವತಿ ನದಿಯಲ್ಲಿ ತುಂಬೆಯಿಂದ ಶಂಭೂರು ಎಎಂಆರ್ ತನಕ ಸುಮಾರು 11 ಕಿ.ಮೀ ಉದ್ದಕ್ಕೆ ಇರುವಂತಹ ನೀರಿನ ಹರಿವು ತಡೆಗಳನ್ನು ತೆರವು ಮಾಡಿದ್ದು ಸ್ವಲ್ಪ ಮಟ್ಟಿನ ನೀರಿನ ಹರಿವು ನದಿಯಲ್ಲಿ ಕಂಡು ಬಂದಿದೆ. ಪ್ರಸ್ತುತ ಇರುವ ನೀರು 4 ದಿನಕ್ಕೆ ಸಾಕಾಗುತ್ತದೆ ಎಂದು ಅಂದಾಜಿಸಿದ್ದಾರೆ ಅಧಿಕಾರಿಗಳು.












Click it and Unblock the Notifications