ಉಡುಪಿ; ರಸ್ತೆಗೆ ನಾಥುರಾಂ ಗೋಡ್ಸೆ ಹೆಸರು, ಬೋರ್ಡ್ ತೆರವು
ಉಡುಪಿ, ಜೂನ್ 6: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥುರಾಂ ಗೋಡ್ಸೆಯ ಹೆಸರನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮಪಂಚಾಯತಿಯ ಒಂದು ರಸ್ತೆಗೆ ಇಡಲಾಗಿತ್ತು. ಫೊಟೋ ವೈರಲ್ ಆಗುತ್ತಿದ್ದಂತೆ ಬೋರ್ಡ್ ತೆರವು ಮಾಡಲಾಗಿದೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತಿ ಪಡುಗಿರಿ ರಸ್ತೆಯ ನಾಮಫಲಕದಲ್ಲಿ ನಾಥುರಾಂ ಗೋಡ್ಸೆ ರಸ್ತೆ ಅಂತ ಹೆಸರನ್ನು ಇಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ನಾಮಫಲಕ ತೆರವಿಗೆ ಆಗ್ರಹಿಸಿದ್ದರು.
ಅಜ್ಜನ ನೆನಪಿಗಾಗಿ ಕೈಯ್ಯಾರೆ ಅಜ್ಜನ ಮೂರ್ತಿ ಮಾಡಿದ ಮೊಮ್ಮಕ್ಕಳು!
ವಿವಾದ ಸೃಷ್ಟಿಯಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಬೋಳ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಪೊಲೀಸರು ವಿವಾದಾಸ್ಪದ ನಾಮಫಲಕ ತೆರವು ಮಾಡಿದ್ದಾರೆ.
ದೇಶ ಕಂಡ ಮೊದಲ ಭಯೋತ್ಪಾದಕನ ಹೆಸರು ರಸ್ತೆಗೆ ಇಡಲಾಗಿದೆ. ಪಂಚಾಯತಿಗೂ ಈ ಬೋರ್ಡ್ಗೂ ಸಂಬಂಧವಿಲ್ಲ ಎಂದು ಪಿಡಿಓ ಹೇಳಿದ್ದಾರೆ. ಯಾರೋ ಕಿಡಿಗೇಡಿಗಳು ಬೋರ್ಡ್ ಹಾಕಿದ್ದಾರೆ ಎಂದು ಪಿಡಿಒ ಸ್ಪಷ್ಟಪಡಿಸಿದ್ದಾರೆ. ತಕ್ಷಣ ಈ ಬೋರ್ಡ್ ಅನ್ನು ತೆರವುಗೊಳಿಸುವಂತೆ ಒತ್ತಾಯ ಮಾಡಿದ್ದೇವೆ. ಪೊಲೀಸರನ್ನು ಕರೆಸಿ ಬೋರ್ಡ್ ತೆರವುಗೊಳಿಸುವುದಾಗಿ ಪಿಡಿಒ ಭರವಸೆ ನೀಡಿದ್ದಾರೆ. ಬೋರ್ಡ್ ತೆರವುಗೊಳಿಸದಿದ್ದರೆ ಪ್ರತಿಭಟನೆ ನೀಡುವುದಾಗಿ ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ಎಚ್ಚರಿಕೆ ನೀಡಿದ್ದಾರೆ.
ಮೇಗರವಳ್ಳಿ-ಆಗುಂಬೆ ರಸ್ತೆ ಅಭಿವೃದ್ಧಿಗೆ ಕೇಂದ್ರದ ಅನುದಾನ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೋಳ ಗ್ರಾಮ ಪಂಚಾಯತಿ ನಮಗೂ ನಾಮಫಲಕಕ್ಕೆ ಯಾವುದೇ ಸಂಬಂಧಗಳು ಇಲ್ಲ. ಇದು ಖಾಸಗಿಯವರು ಹಾಕಿದ ನಾಮಫಲಕ ಇದರ ಬಗ್ಗೆ ಗ್ರಾಮ ಪಂಚಾಯತಿಯಲ್ಲಿ ಯಾವುದೇ ನಿರ್ಣಯ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ, ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ, "ಈ ನಾಮಫಲಕವನ್ನು ಅಧಿಕೃತವಾಗಿ ಪಂಚಾಯತಿಯವರು ಹಾಕಿಲ್ಲ. ಖಾಸಗಿಯವರು ಹಾಕಿದ್ದಾರೆ. ಈ ಬಗ್ಗೆ ಪಂಚಾಯತ್ ನವರು ಪರಿಶೀಲಿಸಿ ಅಧಿಕೃತವಾಗಿ ವಸ್ತುಸ್ಥಿತಿಯನ್ನು ಜನರ ಮುಂದೆ ಇಡುತ್ತಾರೆ" ಎಂದು ಹೇಳಿದ್ದಾರೆ.