ಪ್ರಮೋದ್ ಮುತಾಲಿಕ್ ಶ್ರೇಯೋಭಿವೃದ್ಧಿಗಾಗಿ 'ನರಸಿಂಹ ಯಾಗ'
ಉಡುಪಿ, ಅಕ್ಟೋಬರ್ 04: ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಶ್ರೇಯೋಭಿವೃದ್ಧಿಗಾಗಿ ಉಡುಪಿಯಲ್ಲಿ ಅವರ ಅಭಿಮಾನಿಗಳು 'ನರಸಿಂಹ ಮಹಾಯಾಗ' ಮಾಡಿದ್ದಾರೆ.
ಅಭಿಮಾನಿಗಳು ಸೋಮವಾರ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮಣ್ಣಾಯ ನೇತೃತ್ವದಲ್ಲಿ 'ನರಸಿಂಹ ಮಹಾಯಾಗ' ಮಾಡಿದ್ದು, ಈ ವೇಳೆ ಯಾಗದ ಪೂರ್ಣಾಹುತಿಯಲ್ಲಿ ಪ್ರಮೋದ್ ಮುತಾಲಿಕ್ ಅವರು ಸಹ ಭಾಗಿಯಾಗಿದ್ದರು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ದಂಡ ತೀರ್ಥ ಮಠದಲ್ಲಿ ಮಹಾಯಾಗ ನಡೆಯಿತು. ಇದಾದ ಬಳಿಕ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಸಜ್ಜನರು ನಿರ್ಭಯದಿಂದ ಓಡಾಡುವಂತಾಗಬೇಕು. ಸಮಾಜದಲ್ಲಿ ಸಜ್ಜನರು ನಿರ್ಭಯದಿಂದ ಇರಬೇಕಾದರೆ ದುರ್ಜನರು ಇರಬಾರದು. ದುರ್ಜನರಿಗೆ ದೇವರು ಸದ್ಬುದ್ಧಿಯನ್ನು ಕೊಡಬೇಕು. ಪ್ರಮೋದ್ ಮುತಾಲಿಕ್ರಿಗೆ ಯಾಗ ನಡೆಸುವಂತೆ ನಾನು ಪ್ರೇರಣೆ ಕೊಟ್ಟಿದ್ದೆ. ಸತ್ಕರ್ಮ ಮಾಡುವವರಿಗೆ ಸೂಕ್ತ ರಕ್ಷಣೆ ಇರಬೇಕು ಎಂದರು.

ಸತ್ಕರ್ಮ ಮಾಡಲು ರಕ್ಷಣೆ ಬೇಕು
ಯಾವುದೇ ಸೂಕ್ತ ರಕ್ಷಣೆ ಇಲ್ಲದೆ ಸತ್ಕರ್ಮ ಮಾಡಲು ಸಾಧ್ಯವಿಲ್ಲ. ಹಾಗೇನಾದರೂ ರಕ್ಷಣೆ ಇಲ್ಲದೇ ಒಳಿತಿಗೆ ಮುಂದಾದರೆ ಅಂತವರಿಗೆ ಅಪಾಯ ಎದುರಾಗುವ ಸಂಭವ ಇರುತ್ತದೆ. ಮುತಾಲಿಕ್ ಅವರು ನಡೆಸುವ ಕಾರ್ಯಗಳಿಗೆ ದೈವಬಲ ಮತ್ತು ರಕ್ಷಣೆಯ ಅಗತ್ಯವಿದೆ. ಅವರು ಧರ್ಮ, ಸಮಾಜದಲ್ಲಿ ಶಾಂತಿ ಕಾಪಾಡುವ ಕುರಿತು ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದರು. ಅವರ ರಕ್ಷನೆ ಸಂಬಂಧ ಅಭಿಮಾನಿಗಳಿಗೆ ಸೂಚಿಸಿದ್ದೆ ಎಂದು ಅವರು ಹೇಳಿದರು.

ಶತ್ರು ಬಾರದಂತೆ ಮಾಡುವ ಈ ಯಾಗ
ನರಸಿಂಹ ದೇವರಿಗೆ ಸಂಬಂಧಿಸಿದ ಮನ್ಯು ಸೂಕ್ತ ಯಾಗ ನಡೆಸಿದ್ದೇವೆ. ಶತ್ರುಗಳು ಬಾರದಂತೆ ನರಸಿಂಹ ದೇವರಲ್ಲಿ ಪ್ರಾರ್ಥಿಸಲು ಮಾಡುವ ಯಾಗ ಇದಾಗಿದೆ. ಕೆಲವರು ಅನಿವಾರ್ಯತೆಯಲ್ಲಿ ನಮಗೆ ಶತ್ರುಗಳಾಗುತ್ತಾರೆ, ಅವರಿಗೆ ಕೇಡು ಬಯಸಬಾರದು. ಆದರೆ ಉದ್ದೇಶ ಪೂರ್ವಕವಾಗಿ ಕೇಡು ಬಯಸುವವರು, ಅನ್ಯ ದೇಶದಿಂದ ದಾಳಿ ಇತ್ಯಾದಿ ಮಾಡುವವರು ಇದ್ದಾರೆ. ಅಂತವರನ್ನು ಪರಿವರ್ತನೆ ನಾವು ಮಾಡಲು ಸಾಧ್ಯವಿಲ್ಲ. ಅವರನ್ನು ನಾಶ ಮಾಡಲೇಬೇಕು. ಈ ಬಗ್ಗೆ ನರಸಿಂಹ ದೇವರನ್ನು ಪ್ರಾರ್ಥನೆ ಮಾಡಲಾಗಿದೆ ಎಂದು ಜ್ಯೋತಿಷಿ ಅಮ್ಮಣ್ಣಾಯ ಅವರು ವಿವರಿಸಿದರು.

ರಾಜಕೀಯ ಮುತಾಲಿಕ್ರಿಗೆ ಬಿಟ್ಟ ವಿಚಾರ
ಪ್ರಮೋದ್ ಮುತಾಲಿಕ್ ಅವರ ರಾಜಕೀಯ ಭವಿಷ್ಯ ದ ಬಗ್ಗೆ ಮಾತನಾಡಿದ ಅವರು, ರಾಜಕೀಯ ಅಂದರೆ ಗವರ್ನಿಂಗ್ ದ ವರ್ಕ್ ಅಂಡ್ ಐಡಿಯಾಲಜಿ. ಈ ಗುಣ ಮುತಾಲಿಕ್ ಅವರಲ್ಲಿದೆ. ಕೆಲಸ ಮತ್ತು ಚಿಂತನೆಯನ್ನು ಸಮರ್ಥವಾಗಿ ಮಾಡುವ ಶಕ್ತಿ ಮುತಾಲಿಕ್ ಗೆ ಇದೆ. ಮುತಾಲಿಕ್ ರಾಜಕೀಯಕ್ಕೆ ಹೋಗುತ್ತಾರೋ ಇಲ್ಲವೋ ಅನ್ನೋದು ಅವರ ಸೇನೆ ಸಂಘಟನೆಗೆ ಬಿಟ್ಟ ವಿಚಾರವಾಗಿದೆ. ಮುತಾಲಿಕ್ ಅವರ ಮನಸ್ಥಿತಿಯನ್ನು ಸ್ಥಿರವಾಗಿಡುವ ದೇವತಾ ಪ್ರಾರ್ಥನೆ ಮಾಡಿದ್ದೇವೆ. ರಾಜಕೀಯಕ್ಕೆ ಬರಬೇಕು? ಅಥವಾ ಬೇಡವೋ? ಅನ್ನೋದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಹಿಂದೂ ರಾಷ್ಟ್ರಬಲಕ್ಕಾಗಿ ಪೂಜೆ
'ನರಸಿಂಹ ಮಹಾಯಾಗ' ದ ಪೂರ್ಣಾಹುತಿ ನಂತರ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ಹಿಂದೂ ಸಮಾಜ ಮತ್ತು ಹಿಂದೂ ರಾಷ್ಟ್ರಕ್ಕೆ ಬಲಕ್ಕಾಗಿ ಈ ಯಾಗಪೂಜೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಹಿಂದುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದ ಯಾಗ ಇದಾಗಿದೆ. ಅತ್ಯಂತ ಶಾಸ್ತ್ರೋಕ್ತವಾಗಿ ಯಾಗ ಹೋಮವನ್ನು ಮಾಡಲಾಯಿತು. ಹಿಂದೂ ಸಮಾಜಕ್ಕೆ ಬಲ ಸಿಗಬೇಕು ಎಂಬುದೇ ಈ ಯಾಗದ ಉದ್ದೇಶ. ನನ್ನ ಜೀವನದಲ್ಲಿ ವೈಯಕ್ತಿಕ ಎಂಬುದೇ ಇಲ್ಲ. ಕಳೆದ 46 ವರ್ಷಗಳಿಂದ ನಾನು ಇರುವುದೇ ಹಿಂದೂ ಸಮಾಜಕ್ಕೋಸ್ಕರ. ನನ್ನ ಶಕ್ತಿಯನ್ನು ಹಿಂದೂ ಸಮಾಜಕ್ಕೆ ಅರ್ಪಣೆ ಮಾಡಿದ್ದೇನೆ. ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕು ಶತ್ರುಗಳ ನಾಶ ಆಗಬೇಕು ಎಂದು ಸಂಕಲ್ಪ ಮಾಡಿದ್ದೇವೆ ಎಂದು ಅವರು ತಿಳಿಸಿದರು.












Click it and Unblock the Notifications