ಉಡುಪಿ; ಕೊಲೆ ಆರೋಪ, ಗ್ರಾಮ ಪಂಚಾಯತಿ ಅಧ್ಯಕ್ಷನ ಬಂಧನ
ಉಡುಪಿ, ಜೂನ್ 06; ಕುಂದಾಪುರ ತಾಲೂಕು ವ್ಯಾಪ್ತಿಯ ಯಡಮೊಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಅಪಘಾತವೊಂದರ ಹಿಂದೆ ಕೊಲೆ ಆರೋಪ ಕೇಳಿಬಂದಿದೆ. ಆರೋಪಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ರನ್ನು ಪೊಲೀಸರು ಬಂಧಿಸಿದ್ದಾರೆ.
ಯಡಮೊಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ರಸ್ತೆಯಲ್ಲಿ ಬೈಕ್ನಲ್ಲಿ ನಿಂತಿದ್ದ ಉದಯ ಗಾಣಿಗ ಎಂಬುವವರಿಗೆ ಪ್ರಾಣೇಶ್ ಯಡಿಯಾಳ್ ಕಾರು ಡಿಕ್ಕಿಯಾಗಿತ್ತು. ಉದಯ ಗಾಣಿಗ ಗಂಭೀರ ಗಾಯಗೊಂಡಿದ್ದರು. ಅಧ್ಯಕ್ಷರು ಕಾರು ಬಿಟ್ಟು ಪರಾರಿಯಾಗಿದ್ದರು.
ಜನರು 108 ಅಂಬ್ಯುಲೆನ್ಸ್ ಮೂಲಕ ಉದಯ ಗಾಣಿಗರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಈ ಅಪಘಾತ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪ್ರಾಣೇಶ್ ಯಡಿಯಾಳ್ ವಿರುದ್ಧ ಕೊಲೆ ಆರೋಪ ಕೇಳಿ ಬರತೊಡಗಿತ್ತು.

ಎರಡು ದಿನಗಳ ಹಿಂದೆ ಗ್ರಾಮ ಪಂಚಾಯತಿ ಲಾಕ್ಡೌನ್ ಮಾಡುವ ಕುರಿತು ಉದಯ ಗಾಣಿಗ ಖಾರವಾದ ಸ್ಟೇಟಸ್ ಹಾಕಿದ್ದರು. "ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ, ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ, ಕೊರೊನಾ ಪೀಡಿತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ, ಆಮೇಲೆ ಪ್ರಚಾರ ತೆಗೆದುಕೊಳ್ಳಿ. ಸರ್ಕಾರದ ಸಹಾಯ ಧನ ನುಂಗಬೇಡಿ" ಎಂಬುದು ಸ್ಟೇಟಸ್ ಆಗಿತ್ತು.
ಗ್ರಾಮ ಪಂಚಾಯತಿ ಅಕ್ರಮಗಳ ಬಗ್ಗೆ ಉದಯ ಗಾಣಿಗ ಆಗಾಗ ಧ್ವನಿ ಎತ್ತುತ್ತಿದ್ದರು. ಇದರಿಂದಾಗಿ ಇವರಿಬ್ಬರ ಮಧ್ಯೆ ದ್ವೇಷ ಬೆಳೆದಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಅಧ್ಯಕ್ಷರು ಕಾರು ಹರಿಸಿ ಕೊಲೆ ಮಾಡಿದರೆ? ಎಂಬ ಅನುಮಾನ ಉಂಟಾಗಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಶಂಕರನಾರಾಯಣ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications