ನಾಪತ್ತೆಯಾದ ಮೀನುಗಾರರನ್ನು ಹುಡುಕಲು ಸಾಗರದಾಳಕ್ಕೆ ಇಳಿದ ನೌಕಾಪಡೆ
ಉಡುಪಿ, ಫೆಬ್ರವರಿ 12: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ 7 ಮಂದಿ ಮೀನುಗಾರರ ಸುಳಿವು ಈವರೆಗೆ ಪತ್ತೆಯಾಗಿಲ್ಲ. ಅವರು ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನ ಕುರುಹು ಕೂಡ ದೊರೆತಿಲ್ಲ. ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಉಡುಪಿ ಪೊಲೀಸರು, ತಟರಕ್ಷಣಾ ಪಡೆ ಒಂದೆಡೆ ತಮ್ಮ ಪ್ರಯತ್ನ ಮುಂದುವರೆಸಿದರೆ, ಇನ್ನೊಂದೆಡೆ ಮೀನುಗಾರರ ಪತ್ತೆಗೆ ಭಾರತೀಯ ನೌಕೆಯ ಐಎನ್ ಎಸ್ ಸಟ್ಲೆಜ್ ನೌಕೆ ಶೋಧಕಾರ್ಯಾಚರಣೆ ಆರಂಭಿಸಿದೆ. ಈ ನೌಕೆ ಸಾಗರದಾಳದ ಕಾರ್ಯಾಚರಣೆಯಲ್ಲಿ ತೊಡಗಿದೆ.
ಹೈಡ್ರೋ ಗ್ರಾಫಿಕ್ ಸರ್ವೇ ಮೂಲಕ ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ನ ಕುರುಹುಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ. ಈ ತುರ್ತು ಅಗತ್ಯ ಕಾರ್ಯಾಚರಣೆಗೆ ಸಂಬಂಧಪಟ್ಟ ಎಲ್ಲ ರೀತಿಯ ಸೌಲಭ್ಯಗಳು ಇದರಲ್ಲಿವೆ. ಸಮುದ್ರಯಾನ ಹಾಗೂ ಸಾಗರದೊಳಗಿನ ವಸ್ತುಗಳ ಸಮೀಕ್ಷೆ ನಡೆಸುವಲ್ಲಿ ಇದು ಮಹತ್ತರ ಪಾತ್ರ ವಹಿಸಿದೆ.

ಸಾಗರದಾಳದಲ್ಲಿ ಹುದುಗಿಹೋಗಿರುವ ವಸ್ತುಗಳ ಬಗ್ಗೆ ಈ ನೌಕೆ ಶೋಧಕಾರ್ಯ ನಡೆಸುತ್ತಿದೆ. ಬೋಟ್ ನ ಅವಶೇಷಗಳಿಗಾಗಿ ಶೋಧಕಾರ್ಯ ನಡೆಸುತ್ತಿರುವ ಈ ನೌಕೆ, ಕಡಲಾಳದಲ್ಲಿ ದೊರಕುವ ವಸ್ತುಗಳ ಬಗ್ಗೆ ಖಚಿತಪಡಿಸಿಕೊಳ್ಳುವುದಕ್ಕಾಗಿ ಹಡಗಿನಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಪ್ರಯೋಗಾಲಯ ಹೊಂದಿದೆ. ಅದರ ಮೂಲಕ ಲಭಿಸಿದ ವಸ್ತುಗಳ ಮಾಹಿತಿ ಕಲೆ ಹಾಕುವ ಕೆಲಸವೂ ನಡೆಯುತ್ತಿದೆ.
ನೌಕಾ ಪಡೆ ಕಾರ್ಯಾಚರಣೆ ಆರಂಭಿಸಿರುವ ಹಿನ್ನೆಲೆಯಲ್ಲಿ ನಾಪತ್ತೆಯಾಗಿರುವ ಮೀನುಗಾರರ ಕುಟಂಬಸ್ಥರಲ್ಲಿ ಚಿಕ್ಕದೊಂದು ಆಶಾಭಾವನೆ ಮೂಡಿದೆ. ಆದರೆ ಡಿಸೆಂಬರ್ 13 ರಂದು ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ 7 ಮಂದಿ ಮಲ್ಪೆ ಮೀನುಗಾರರು ಎಲ್ಲಿ ಹೋದರು? ಏನಾದರು? ಎಂಬುದೇ ಇನ್ನೂ ನಿಗೂಢವಾಗಿಯೇ ಉಳಿದಿದೆ.












Click it and Unblock the Notifications