ಸುದ್ದಿಗೋಷ್ಠಿಯಲ್ಲಿ ಕಾಲ ಕಳೆಯುವ ಪೂಜಾರಿಯಿಂದ ಕಾಂಗ್ರೆಸ್ ಗೆ ಏನು ಲಾಭ
ಕಾರ್ಕಳ, ಜನವರಿ.09 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರನ್ನು ಕಾರ್ಕಳ ಕಾಂಗ್ರೆಸ್ ಮುಖಂಡ ಕ್ಸೆವಿಯರ್ ಡಿಮೆಲ್ಲೋ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪಕ್ಷ ಸಂಘಟಿಸದೆ ಸುದ್ದಿಗೋಷ್ಠಿಯಲ್ಲಿ ಕಾಲ ಕಳೆಯುವ ಪೂಜಾರಿಯಿಂದ ಕಾಂಗ್ರೆಸ್ ಗೆ ಏನು ಲಾಭ? ಎನ್ನುವುದನ್ನು ನಾವೀಗ ಪ್ರಶ್ನಿಸಬೇಕಾಗುತ್ತದೆ.['ಮುಂದಿನ ಚುನಾವಣೆಯಲ್ಲಿ ಮಹದೇವ ಪ್ರಸಾದ್ ಕುಟುಂಬಕ್ಕೆ ಟಿಕೆಟ್ ಕೊಡಿ']
ಇನ್ನು ಅವರು ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದಲ್ಲಿ ಖಂಡಿತವಾಗಿಯೂ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಪ್ರತಿಭಟಿಸಲಿದ್ದೇವೆ ಎಂದು ಎಚ್ಚರಿಸಿದರು.
ಅವರು ದಿನಕ್ಕೊಂದು ಸ್ವ ಪಕ್ಷ ವಿರೋಧಿ ಹೇಳಿಕೆಗಳ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ. ಅವರ ವಿರುದ್ಧ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರಂತರ ಮಾತಾಡುತ್ತಾ ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇದ್ದಲ್ಲದೆ ಮುಖ್ಯಮಂತ್ರಿ ಸ್ಥಾನ ಬದಲಾಯಿಸಿ ಎನ್ನುವ ಸಲಹೆಯನ್ನು ಆಗಾಗ ನೀಡುವ ಬದಲು, ತಾವೇ ಅಧಿಕಾರ ಸ್ವೀಕರಿಸಿ ಕಾರ್ಯನಿರ್ವಹಿಸಬಹುದ್ದಲ್ಲವೇ? ಬದಲಿಗೆ ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡುವುದಾದರೂ ಏಕೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಸಿದ್ದರಾಮಯ್ಯ ಅವರಿಗೆ ಜನಾರ್ದನ ಪೂಜಾರಿ ಮಂಗಳಾರತಿ!]
ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳುವ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಪೂಜಾರಿ ಅವರು ಒಂದು ಕಡೆ ಬೆಂಬಲಿಸುತ್ತಾರೆ. ಇನ್ನೊಂದೆಡೆ ಯಡಿಯೂರಪ್ಪ ಅವರು ಇದು ನನ್ನ ಯೋಜನೆ ಎನ್ನುತ್ತಿದ್ದರೂ, ಆ ಬಗ್ಗೆ ಪೂಜಾರಿ ಚಕಾರ ಎತ್ತುತ್ತಿಲ್ಲ ಎಂದು ದೂರಿದರು.
ಪದೇ ಪದೇ ಕಾಂಗ್ರೆಸ್ ರಾಜ್ಯದಲ್ಲಿ ನಿರ್ಣಾಮವಾಗುತ್ತದೆ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದಾರೆ. ಮುಂದೆ ಕಾಂಗ್ರೆಸ್ ಗೆ ಸೋಲಾದರೆ ಅದರ ನೇರ ಹೊಣೆಯನ್ನು ಪೂಜಾರಿಯವರೇ ಹೊರಬೇಕು ಎಂದು ಹೇಳಿದರು.