ಉಡುಪಿ; ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ ಆರಂಭ
ಉಡುಪಿ, ನವೆಂಬರ್ 17; ಕಾರ್ತಿಕ ಮಾಸ ಆರಂಭವಾಗಿದೆ. ಮಳೆ ಹನಿಯ ನಡುವೆಯೂ ಮೈ ಸೋಕುವ ಚಳಿಗೆ ಕರಾವಳಿಯ ದೇವಸ್ಥಾನಗಳಲ್ಲಿ ರಾತ್ರಿ ದೀಪಗಳ ಬೆಳಕು ಕಾಣಲಾರಂಭಿಸಿದೆ. ಕರಾವಳಿ ಭಾಗದ ಕಾರ್ತಿಕ ಮಾಸದ ಮೊದಲ ಲಕ್ಷದೀಪೋತ್ಸವ ಪೊಡವಿಗೊಡೆಯನ ಊರು ಉಡುಪಿಯಲ್ಲಿ ವಿಜೃಂಭಣೆಯಿಂದ ಆರಂಭವಾಗಿದೆ. ಲಕ್ಷ ಲಕ್ಷದೀಪಗಳ ಬೆಳಕಿನ ಪ್ರಭೆಯೊಂದಿಗೆ ಧಾರ್ಮಿಕ ವರ್ಷದ ಮೊದಲ ರಥೋತ್ಸವದ ನಡೆದಿದೆ.
ಕೃಷ್ಣನೂರು ಉಡುಪಿಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ ಶುರುವಾಗಿದೆ. ಮಧ್ವ ಸರೋವರದಲ್ಲಿ ತೆಪ್ಪೋತ್ಸವ ಅದ್ದೂರಿಯಾಗಿ ನಡೆದರೆ, ಕೃಷ್ಣ ಮಠದ ರಥಬೀದಿ ಸುತ್ತ ಹಣತೆಗಳು ಕಂಗೊಳಿಸಿವೆ. ಸಿಡಿ ಮದ್ದುಗಳು, ವಾದ್ಯಘೋಷಗಳ ಅಬ್ಬರದೊಂದಿಗೆ, ನಡೆದ ರಥೋತ್ಸವವನ್ನು ನೆರೆದಿದ್ದ ಸಾವಿರಾರು ಭಕ್ತಜನರು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.
ರಥಬೀದಿಯ ಸುತ್ತ ಹಣತೆಗಳ ಸೊಗಬು. ಎಲ್ಲೆಡೆ ಗೂಡ ಬೀದಿಗಳ ಮಂದೆ ಬೆಳಕು. ತೆಪ್ಪೋತ್ಸವ, ರಥೋತ್ಸವವನ್ನು ಕಣ್ತುಂಬಿಕೊಳ್ಳುವ ಕೃಷ್ಣ ಭಕ್ತರು. ಇದು ಉಡುಪಿ ಶ್ರೀ ಕೃಷ್ಣ ಮಠದ ಲಕ್ಷದೀಪೋತ್ಸವದ ಆರಂಭದ ಸಂಭ್ರಮ.

ಪೊಡವಿಗೊಡೆಯ ಉಡುಪಿ ಶ್ರೀ ಕೃಷ್ಣ ಉತ್ಸವ ಪ್ರಿಯ. ಆದರೆ ಕಡೆಗೋಲು ಕೃಷ್ಣ ಚಾರ್ತುಮಾಸದ ಅವಧಿಯಲ್ಲಿ ಯೋಗ ನಿದ್ರೆಯಲ್ಲಿ ಇರುತ್ತಾನೆ ಅಂತ ನಂಬಿಕೆಯಿದೆ. ಹೀಗಾಗಿ ದೇವರಿಗೆ ಅಡ್ಡಿ ಪಡಿಸಬಾರದು ಅಂತ ಮಳೆಗಾಲದಲ್ಲಿ ಯಾವುದೇ ಉತ್ಸವ ನಡೆಯೋದಿಲ್ಲ.
ಆದರೆ ಚಾರ್ತುಮಾಸ ಮುಗಿದು, ಉತ್ಥಾನ ದ್ವಾದಶಿಯಂದು ಲಕ್ಷದೀಪಗಳನ್ನು ಬೆಳಗಿ ಇಷ್ಟ ದೇವರನ್ನು ಬರಮಾಡಿಕೊಳ್ಳಲಾಗುತ್ತದೆ. ಈ ಪರಂಪರೆ ಆನಾಧಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಇಂತಹ ಅದ್ಭುತ ಕ್ಷಣಕ್ಕೆ ಉಡುಪಿಯ ಕೃಷ್ಣ ಮಠ ಸಾಕ್ಷಿಯಾಗಿದೆ.
ಇಡೀ ಊರಿಗೆ ಊರೇ ಲಕ್ಷದೀಪೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿದೆ. ಸೂರ್ಯಾಸ್ತಮಾನವಾಗುತ್ತಿದ್ದಂತೆ, ಮಕ್ಕಳು ಹಿರಿಯರು ಸೇರಿ ರಥಬೀದಿಯ ಸುತ್ತ ಹಣತೆಗಳನ್ನು ಬೆಳಗಿದ್ದಾರೆ. ಮಧ್ವ ಸರೋವರದಲ್ಲಿ ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆದಿದೆ.
ಶ್ರೀ ಕೃಷ್ಣಮುಖ್ಯಪ್ರಾಣ, ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ಉತ್ಸವ ಮೂರ್ತಿಗಳನ್ನು ಗರುಡ ರಥ ಹಾಗೂ ಮಹಾಪೂಜಾ ರಥದಲ್ಲಿರಿಸಿ ಸುಡುಮದ್ದು, ವಾದ್ಯಘೋಷಗಳಿಂದಿಗೆ ರಥೋತ್ಸವ ನಡೆಸಲಾಯಿತು. ಅಷ್ಟ ಮಠದ ಸ್ವಾಮಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಸಾವಿರಾರು ಭಕ್ತರು ಇಷ್ಟ ದೇವರ ರಥೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ.
ಒಟ್ಟು ನಾಲ್ಕು ದಿನಗಳ ದೀಪೋತ್ಸವ ನಡೆಯಲಿದ್ದು, ಧಾರ್ಮಿಕ ವರ್ಷದ ಮೊದಲ ರಥೋತ್ಸವ ಇದಾಗಿದೆ. ಲಕ್ಷದೀಪ ಉತ್ಸವ ಮೂಲಕ ಆರಂಭಗೊಂಡ ರಥೋತ್ಸವ ಮುಂದಿನ ಮಳೆಗಾಲದ ವರೆಗೂ ಇರುತ್ತದೆ. ಇದು ನಾಡಿನ ಬೇರೆಲ್ಲೂ ಕಾಣದ ವಿಶೇಷವಾಗಿದೆ.












Click it and Unblock the Notifications