ಶಬರಿಮಲೆ ವಿಚಾರದಲ್ಲಿ ಕೇರಳ ಸರಕಾರ ಹಠಮಾರಿತನ ಬಿಡಬೇಕು: ಪೇಜಾವರ ಶ್ರೀ
ಉಡುಪಿ, ಜನವರಿ 05 : ಶಬರಿಮಲೆ ವಿಚಾರದಲ್ಲಿ ಸರ್ಕಾರ ಜನಮತಗಣನೆ ಮಾಡಲಿ. ಹಿಂದೂಗಳ ಮತಗಣನೆ ಮಾಡಲಿ. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಪಟ್ಟಂತೆ ಧಾರ್ಮಿಕ ಮುಖಂಡರ ಸಭೆ ಕರೆಯಲಿ. ಅದನ್ನ ಬಿಟ್ಟು ಈ ವಿಚಾರವಾಗಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ಪೇಜಾವರ ಶ್ರೀ ಅಭಿಪ್ರಾಯ ವ್ಯಕ್ತಪಡಿಸದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಶಬರಿಮಲೆ ವಿಚಾರದಲ್ಲಿ ಕೇರಳ ಸರ್ಕಾರ ಜನಮತಗಣತೆ ಮಾಡಬೇಕು. ಹಿಂದೂಗಳ ಜನಮತಗಣನೆ ಪಡೆದುಕೊಳ್ಳಬೇಕು. ಅದಾಗದಿದ್ದರೆ ಧಾರ್ಮಿಕ ಮುಖಂಡರ ಸಭೆ ಕರೆದು ಇತ್ಯರ್ಥ ಮಾಡಲಿ ಎಂದರು.
ಶಬರಿಮಲೆ ಬಗ್ಗೆ ಹಲವಾರು ಬಾರಿ ಹೇಳಿಕೆ ಕೊಟ್ಟಿದ್ದೇನೆ. ಕೆಲವರು ನನ್ನ ಹೇಳಿಕೆಯನ್ನು ಗೊಂದಲ ಮಾಡಿಕೊಂಡಿದ್ದಾರೆ. ನಾನು ಶಬರಿಮಲೆ ವಿಚಾರದಲ್ಲಿ ತಾಟಸ್ಥ ನಾಗಿದ್ದೇನೆ.ಧಾರ್ಮಿಕ ವಿಚಾರದಲ್ಲಿ ಈ ಹಿಂದೆ ನಾನು ಹಲವಾರು ಪರಿವರ್ತನೆಗಳನ್ನು ಮಾಡಿದ್ದೇನೆ. ಹಲವಾರು ಸಂಪ್ರದಾಯ ಅನುಸರಿಸಿದ್ದೇನೆ. ಇದು ಸಂಪ್ರದಾಯ ಮತ್ತು ಶಾಸ್ತ್ರದ ತಿಕ್ಕಾಟ ಎಂದು ಅವರು ಹೇಳಿದರು.

ಇದನ್ನೆಲ್ಲಾ ನ್ಯಾಯಾಲಯ, ಜಾತ್ಯಾತೀತ ಸರ್ಕಾರ ತೀರ್ಮಾನ ಮಾಡಬಾರದು. ಹಿಂದೂ ಧಾರ್ಮಿಕ ಮುಖಂಡರು, ಹಿಂದೂ ಜನತೆ ತೀರ್ಮಾನ ಮಾಡಬೇಕು. ಮಹಿಳೆಯರ ವರ್ಗಕ್ಕೆ ಇದನ್ನು ಅಪಮಾನ ಎಂದು ಭಾವಿಸಬಾರದು. ಶಬರಿಮಲೆಗೆ ಇಬ್ಬರು ಮಹಿಳೆಯರ ಪ್ರವೇಶವನ್ನು ಬಿಜೆಪಿ, ಕಾಂಗ್ರೆಸ್ ರಾಜಕೀಯ ಪಕ್ಷಗಳು ವಿರೋಧಿಸಿದೆ. ಕೇರಳದ ಕಮ್ಯೂನಿಸ್ಟ್ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ಕೇರಳ ಸರಕಾರ ತನ್ನ ಹಠ ಬಿಟ್ಟು ಬಿಡಬೇಕು ಎಂದು ಅವರು ಆಗ್ರಹಿಸಿದರು.
ಜನಾಭಿಪ್ರಾಯಕ್ಕೆ ಮಣಿದು ಶ್ರೀರಾಮ ಸೀತೆಯನ್ನು ಕಾಡಿಗೆ ಕಳುಹಿಸಿದ. ವಾಲ್ಮಿಕಿ ರಾಮಾಯಣದಲ್ಲಿ ಇದು ಉಲ್ಲೇಖ ಇದೆ. ಸಿಎಂ ಪಿಣರಾಯಿ ವಿಜಯನ್ ಉದಾರ ಮನಸ್ಸು ಮಾಡಬೇಕು. ಕೇರಳ ಸರ್ಕಾರ ಹಠಮಾರಿತನದ ನಿಲುವನ್ನು ಬಿಟ್ಟು ಬಿಡಬೇಕು ಎಂದು ಮನವಿ ಮಾಡಿದರು.
ತ್ರಿವಳಿ ತಲಾಖ್ ಬಗ್ಗೆ ಚರ್ಚೆಯೇ ಆಗಿಲ್ಲ. ತಲಾಖ್ ವಿಚಾರವನ್ನು ಶಬರಿಮಲೆಗೆ ತಳುಕು ಹಾಕಬೇಡಿ ತಲಾಖ್ ಹಿಂದೂಗಳಲ್ಲಿರುವ ಅಸ್ಪೃಶ್ಯತೆ ಗೆ ಸಮಾನ. ತಲಾಖ್ ಅಮಾನವೀಯವಾದದ್ದು , ತಲಾಖ್ ವಿರುದ್ಧದ ಕಾಯ್ದೆಗೆ ನಾನು ಬೆಂಬಲಿಸುತ್ತೇನೆ ಎಂದು ಅವರು ಸ್ಪಷ್ಟ ಪಡಿಸಿದರು.












Click it and Unblock the Notifications