ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ಭವನ: ಮುಖ್ಯಮಂತ್ರಿಗೆ ಸಚಿವ ಕೋಟ ಪತ್ರ
ಉಡುಪಿ, ಆಗಸ್ಟ್ 04: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣದ ವೇಳೆಗೆ ಸುಸಜ್ಜಿತ ಕರ್ನಾಟಕ ಯಾತ್ರಿ ಭವನ ನಿರ್ಮಾಣವಾಗಬೇಕೆಂಬುದು ಪೇಜಾವರ ಶ್ರೀಗಳ ಕನಸಾಗಿತ್ತು.
ಶ್ರೀಗಳ ಕನಸು ಸಾಕಾರಗೊಳ್ಳಲು ಅನುಕೂವಾಗುವಂತೆ ರಾಮ ಮಂದಿರ ನಿವೇಶನದ ಆಸುಪಾಸಿನಲ್ಲಿ ಕನಿಷ್ಠ 3-5 ಎಕರೆ ನಿವೇಶನವನ್ನು ಒದಗಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿಗಳಲ್ಲಿ ನಿವೇದಿಸಿಕೊಳ್ಳುವಂತೆ ಕೋರಿ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಅಯೋಧ್ಯೆಯು ತಿರುಪತಿಯ ಮಾದರಿಯಲ್ಲಿ ಹಿಂದೂಗಳಿಗೆ ಪವಿತ್ರ ಕ್ಷೇತ್ರವಾಗಲಿದೆ. ಅಲ್ಲಿಗೆ ಹೋಗುವ ಕರ್ನಾಟಕದ ಆಸ್ತಿಕರ ಅನುಕೂಲದ ದೃಷ್ಟಿಯಿಂದ, ಅಲ್ಲಿ ಯಾತ್ರಿ ನಿವಾಸದ ಅಗತ್ಯ ಇದೆ. ಈ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದೆ ಬೇಡಿಕೆ ಇರಿಸುವಂತೆ ಸಚಿವ ಕೋಟ ಪತ್ರದಲ್ಲಿ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಕೋಟ್ಯಂತರ ಹಿಂದೂಗಳು ರಾಮ ಮಂದಿರಕ್ಕೆ ಹೋಗುವುದರಿಂದ, ಮಂದಿರದ ಪಕ್ಕದಲ್ಲೇ ಯಾತ್ರಿ ನಿವಾಸ ನಿರ್ಮಿಸಿದರೆ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications