ಉಡುಪಿ: ಮಹಿಳೆಯನ್ನು ಪೀಡಿಸುತ್ತಿದ್ದ ಕನ್ನಡ ಸಂಘಟನೆ ನಾಯಕನ ಬಂಧನ
ಉಡುಪಿ, ಜುಲೈ.15: ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಉಡುಪಿಯ ಶಿರ್ವ ಗ್ರಾಮದಲ್ಲಿ ಸಿಕ್ಕಿ ಬಿದ್ದ ಘಟನೆ ಶನಿವಾರ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ಸಂತೋಷ್ ಶೆಟ್ಟಿ ಪಂಜಿಮಾರ್ ಮಹಿಳೆಗೆ ಕಿರುಕುಳ ನೀಡಿ, ಬಂಧನಕ್ಕೆ ಒಳಗಾದ ಆರೋಪಿ.
ಸಂತೋಷ್ ಶೆಟ್ಟಿ ಪಂಜಿಮಾರ್ ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷನಾಗಿದ್ದು, ಹಲವಾರು ಕೆಟ್ಟ ಕೆಲಸ ಮಾಡಿ ತನ್ನ ಸ್ಥಾನ ಕಳೆದುಕೊಂಡಿದ್ದ. ಆದರೆ ಅದೇ ಸ್ಥಾನದ ಹೆಸರು ಹೇಳಿ ಹಲವರನ್ನು ಈಗಲೂ ಮಂಗ ಮಾಡಿದ್ದಾನೆ.
ಇತ್ತೀಚೆಗೆ ಶಿರ್ವ ಗ್ರಾಮದ ವಿವಾಹಿತ ಮಹಿಳೆಯೊಬ್ಬರನ್ನು ಪೀಡಿಸುತ್ತಿದ್ದು, ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂತೋಷ್ ಯುವತಿಗೆ ಕಿರುಕುಳು ನೀಡುವುದನ್ನು ಬಿಟ್ಟಿರಲಿಲ್ಲ. ಸಂತೋಷ್ ಗೆ ತಕ್ಕ ಪಾಠ ಕಲಿಸಲು ಮುಂದಾದ ಮಹಿಳೆ, ಪ್ಲಾನ್ ಮಾಡಿ ತನ್ನ ಪತಿಯ ಸಹಾಯದೊಂದಿಗೆ ಆರೋಪಿಯನ್ನು ಸೆರೆಹಿಡಿದಿದ್ದಾರೆ.

ರೂಮ್ ಬುಕ್ ಮಾಡಿ ಮಹಿಳೆಯನ್ನು ಕರೆಯಲು ಬಂದ ಸಂತೋಷ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಸಂತೋಷ್ ಗೆ ಮಹಿಳೆ ಗೂಸಾ ನೀಡಿದ್ದಾಳೆ. ಸಂತೋಷ್ ವಿಷಯ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆ , ಆತ ಸಂಘಟನೆಯಲ್ಲಿ ಇಲ್ಲ ಹಾಗೂ ಆತನನ್ನು ವಜಾಗೊಳಿಸಲಾಗಿದೆ ಎಂದು ಸಂಘಟನೆಯಿಂದ ಮಾಹಿತಿ ಬಂದಿದೆ.
ಈ ಹಿಂದೆ ಹಲವು ಮಹಿಳೆಯರು, ಯುವತಿಯರಿಗೆ ಕರೆ ಮಾಡಿ ಮಂಚಕ್ಕೆ ಕರೆಯುತ್ತಿದ್ದ ಸಂತೋಷ್ ಶೆಟ್ಟಿಯ ನೈಜ ಮುಖವಾಡ ಈಗ ಬಯಲಾಗಿದೆ. ಸ್ಥಳಕ್ಕೆ ಶಿರ್ವ ಪೊಲೀಸರು ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications