ಕೃಷ್ಣಮಠದಲ್ಲಿ ಮತ್ತೆ ಕನ್ನಡ ನಾಮಫಲಕ ಅಳವಡಿಕೆ: ಭಕ್ತರಲ್ಲಿ ಹರ್ಷ
ಉಡುಪಿ, ಡಿಸೆಂಬರ್ 3: ಉಡುಪಿಯ ಕೃಷ್ಣಮಠದಲ್ಲಿ ನಾಪತ್ತೆಯಾಗಿದ್ದ ಕನ್ನಡ ನಾಮಫಲಕ, ಕನಕ ಜಯಂತಿಯ ದಿನದಂದೇ ಸ್ವಸ್ಥಾನವನ್ನು ಅಲಂಕರಿಸಿದೆ. ಇದರಿಂದ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ದಿಢೀರ್ ಆಗಿ ಮಠದ ಮುಖ್ಯದ್ವಾರದ ಕನ್ನಡ ನಾಮಫಲಕ ಮಾಯವಾಗಿ, ಆ ಸ್ಥಳದಲ್ಲಿ ತುಳು ಮತ್ತು ಸಂಸ್ಕೃತ ಫಲಕ ಕಂಡುಬಂದಿತ್ತು. ಈ ವಿಚಾರ ವಿವಾದವಾಗಿ ಕನ್ನಡ ಪರ ಹೋರಾಟಗಾರರು ಮತ್ತು ಭಕ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದರಿಂದ ಎಚ್ಚೆತ್ತ ಕೃಷ್ಣಮಠ ಆಡಳಿತ ಮಂಡಳಿ, ಗುರುವಾರದಂದು ಮತ್ತೆ ಕನ್ನಡ ಫಲಕವನ್ನು ಅಳವಡಿಸಿದೆ. ""ಈ ದಿನ ಕನ್ನಡದ ನಾಮಫಲಕವನ್ನು ಹಾಕಿರುವುದು ನೋಡಿ ನಮಗೆ ತುಂಬಾ ಸಂತೋಷವಾಗಿದೆ'' ಎಂದು ಉಡುಪಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.

ಶ್ರೀಮಠವು ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಜನಪದಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದಿದ್ದಾರೆ.
ತುಳುಲಿಪಿಯನ್ನು ಹಾಕುವುದರ ಮೂಲಕ ನಮ್ಮ ಸೋದರ ಭಾಷೆಯಾದ ತುಳುವನ್ನು ಗೌರವಿಸಿರುವುದು ಕೂಡಾ ಸಂತಸದ ವಿಷಯ. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷನಾದ ನನಗೆ ಈ ಹಿಂದೆ ಕನ್ನಡ ನಾಮಫಲಕ ಬಿಟ್ಟುಹೋದ ಬಗ್ಗೆ ಸಹಜವಾಗಿ ಆಕ್ಷೇಪ ವ್ಯಕ್ತಪಡಿಸಿದ್ದೆ. ಈಗ ಇದು ಸುಲಲಿತವಾಗಿ ಸುಖಾಂತ್ಯ ಕಂಡಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಸಮಸ್ತ ಕನ್ನಡಿಗರ ಪರವಾಗಿ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಉಡುಪಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications