ಉಡುಪಿ: ಒಂದೇ ಕುಟುಂಬದ 4 ಜನರ ಆತ್ಮಹತ್ಯೆ ಹಿಂದೆ ನಕಲಿ ಚಿನ್ನ!
ಉಡುಪಿ, ಜುಲೈ 17: ಪಡುಬೆಳ್ಳೆಯಲ್ಲಿ ಕುಟುಂಬ ಸಹಿತ ಆತ್ಮಹತ್ಯೆ ಮಾಡಿಕೊಂಡ ಚಿನ್ನದ ವ್ಯಾಪಾರಿ ಶಂಕರ ಆಚಾರ್ಯ ಸಾವು ಇದೀಗ ಹೊಸ ತಿರುವು ಪಡೆದಿದೆ. ಮೃತ ಶಂಕರ ಆಚಾರ್ಯ ಬ್ಯಾಂಕೊಂದರಲ್ಲಿ ಸುಮಾರು 3 ಕೆ.ಜಿ ನಕಲಿ ಚಿನ್ನವನ್ನು ಅಡವಿಟ್ಟು 65 ಲಕ್ಷ ರೂಪಾಯಿ ವಂಚಿಸಿರುವುದು ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮೂವತ್ತು ವರ್ಷಗಳಿಂದ ಪಡುಬೆಳ್ಳೆಯಲ್ಲಿ ಜ್ಯುವೆಲ್ಲರಿ ಅಂಗಡಿ ಇಟ್ಟು ಚಿನ್ನದ ವ್ಯಾಪಾರ ನಡೆಸುತ್ತಿದ್ದ ಶಂಕರ ಆಚಾರ್ಯ, ಪತ್ನಿ ನಿರ್ಮಲ ಹಾಗು ಪುತ್ರಿಯರಾದ ಶೃತಿ ಮತ್ತು ಶ್ರೀಯ ಕಳೆದ ಗುರುವಾರ ರಾತ್ರಿ ತಮ್ನ ಮನೆಯಲ್ಲಿ ಸೈನೈಡ್ ಬೆರೆಸಿದ ಊಟ ಸೆವೆಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ 30ವರ್ಷಗಳಿಂದ ಪಡುಬೆಳ್ಳೆಯಲ್ಲಿ ಶ್ರೀಯಾ ಜುವೆಲ್ಲರ್ಸ್ ನಡೆಸುತ್ತಿದ್ದ ಶಂಕರ ಆಚಾರ್ಯರು, ಸುಮಾರು 15 ವರ್ಷಗಳಿಂದ ಕುರ್ಕಾಲಿನ ಬ್ಯಾಂಕ್ ಶಾಖೆಯ ಗ್ರಾಹಕರಾಗಿದ್ದರು. ಹಲವು ಬಾರಿ ಚಿನ್ನ ಅಡವಿಟ್ಟು ಸಾಲ ಪಡೆದು ಮರುಪಾವತಿ ಮಾಡಿದ್ದರು. ಇವರ ಹೆಸರಲ್ಲಿ ಈ ಶಾಖೆಯಲ್ಲಿ ಒಟ್ಟು 93 ಸಾಲದ ಖಾತೆ ಇದ್ದು, ಈ ಎಲ್ಲಾ ಖಾತೆಗಳಲ್ಲಿ ಒಟ್ಟು 3 ಕೆ.ಜಿ. ನಕಲಿ ಚಿನ್ನ ಅಡವಿಟ್ಟಿದ್ದರು. ಇದರಲ್ಲಿ 100 ಗ್ರಾಂ ಚಿನ್ನ ಹೊರತು ಪಡಿಸಿ ಉಳಿದ ಎಲ್ಲ ಚಿನ್ನಾಭರಣಗಳು ನಕಲಿಯಾಗಿದ್ದವು ಎಂದು ಬ್ಯಾಂಕಿನ ಮೂಲಗಳು ತಿಳಿಸಿವೆ.
ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ
ಜುಲೈ 13ರಂದು ಶಂಕರ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಕುರ್ಕಾಲು ಶಾಖೆಯ ವ್ಯವಸ್ಥಾಪಕ ಉಮೇಶ್ ಅಮೀನ್, ಬ್ಯಾಂಕಿನ ಜನರಲ್ ಮೆನೇಜರ್ ಮನೋಹರ್ ರಾವ್ ಅವರಿಗೆ ಶಂಕರ ಆಚಾರ್ಯರಿಗೆ ಸಾಲ ನೀಡಿರುವ ವಿಚಾರ ತಿಳಿಸಿದ್ದಾರೆ. ಕೂಡಲೇ ಮನೋಹರ್ ರಾವ್ ಬೇರೆ ಸರಾಪರ್ (ಬ್ಯಾಂಕಿನಲ್ಲಿ ಚಿನ್ನ ಪರೀಕ್ಷೆ ಮಾಡುವ ವ್ಯಕ್ತಿ) ಮೂಲಕ ಶಂಕರ ಆಚಾರ್ಯ ಅಡವಿಟ್ಟ ಚಿನ್ನದ ಪರೀಕ್ಷೆಯನ್ನು ಮಾಡಿಸಿದಾಗ ಇವುಗಳು ನಕಲಿ ಎಂಬುದು ತಿಳಿದು ಬಂದಿದೆ.
ಶಂಕರ ಆಚಾರ್ಯ ಮಾಡಿರುವ ಈ ವಂಚನೆಯಲ್ಲಿ ವ್ಯವಸ್ಥಾಪಕ ಉಮೇಶ್ ಅಮೀನ್ ಹಾಗೂ ಸರಾಪರ್ ಉಮೇಶ್ ಆಚಾರ್ಯ ಶಾಮೀಲು ಆಗಿದ್ದಾರೆ ಎಂದು ಮನೋಹರ್ ರಾವ್ ದೂರು ನೀಡಿದ್ದಾರೆ. ಶಂಕರ ಆಚಾರ್ಯರ ನಕಲಿ ಚಿನ್ನವನ್ನು ಸರಾಪರ್ ಉಮೇಶ್ ಆಚಾರ್ಯ ಅಸಲಿ ಎಂದು ಸುಳ್ಳು ಹೇಳಿ, ವ್ಯವಸ್ಥಾಪಕ ಉಮೇಶ್ ಅಮೀನ್ ಬ್ಯಾಂಕಿನ 5ಲಕ್ಷ ರೂ. ಸಾಲದ ಮಿತಿಯ ನಿಯಮವನ್ನು ಮೀರಿ 65 ಲಕ್ಷ ರೂ.ವರೆಗೆ ಸಾಲವನ್ನು ಶಂಕರ ಆಚಾರ್ಯರಿಗೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಶಂಕರ ಆಚಾರ್ಯ ಕೊಲ್ಕತ್ತಾದಿಂದ ತರಿಸುತ್ತಿದ್ದ 80ರೂ. ಮೌಲ್ಯದ ಸರಗಳಿಗೆ ಎರಡು ಬಾರಿ ಚಿನ್ನದ ಕೋಟಿಂಗ್ ಮಾಡಿ ಅಡವು ಇಡುತ್ತಿದ್ದರು. ಅಡವಿಟ್ಟ ನಕಲಿ ಚಿನ್ನಾಭರಣಗಳಲ್ಲಿ ಹೆಚ್ಚಿನವು ಸರ ಆಗಿದ್ದರೆ, ಉಳಿದಂತೆ ಬ್ರಾಸ್ಲೈಟ್ ಹಾಗೂ ಬಳೆಗಳು ಕೂಡ ಇದ್ದವು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಮಧ್ಯೆ ಶಂಕರ ಆಚಾರ್ಯರ ಮಗಳು ಶ್ರುತಿ ಆಚಾರ್ಯಳಿಗೆ ಹೈದರಬಾದಿನ ಇಂಜಿನಿಯರ್ನೊಂದಿಗೆ ವಿವಾಹ ಕೂಡ ನಿಶ್ಚಯವಾಗಿತ್ತು. ಇದೀಗ ಈ ವಂಚನೆ ಪ್ರಕರಣ ಬಯಲಿಗೆ ಬಂದರೆ ಇಡೀ ಕುಟುಂಬದ ಮಾನ ಹರಾಜು ಆಗಬಹುದು ಹಾಗೂ ಮಗಳ ಮದುವೆ ಕೂಡ ನಿಲ್ಲಬಹುದೆಂಬ ಭೀತಿಗೆ ಶಂಕರ ಆಚಾರ್ಯರು ಒಳಗಾಗಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಇದೇ ಕಾರಣಕ್ಕೆ ಅವರು ಜುಲೈ 13ರಂದು ಬೆಳಗ್ಗೆ ಮನೆಯವರಿಗೆ ಗೊತ್ತಿಲ್ಲದ ರೀತಿಯಲ್ಲಿ ಅನ್ನದಲ್ಲಿ ಸೈನೆಡ್ ಬೆರೆಸಿ ತಾನು ಹಾಗೂ ಪತ್ನಿ ನಿರ್ಮಲ ಆಚಾರ್ಯ(43), ಮಕ್ಕಳಾದ ಶ್ರುತಿ ಆಚಾರ್ಯ(24) ಮತ್ತು ಶ್ರೀಯಾ ಆಚಾರ್ಯ(22) ಸಾಯುವಂತೆ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಶಂಕರ ಆಚಾರ್ಯ ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕಿಗೆ ವಂಚನೆ ಎಸಗಿರುವ ಪ್ರಕರಣದಲ್ಲಿ ಶಾಮೀಲಾಗಿರುವ ಕುರ್ಕಾಲು ಶಾಖೆಯ ವ್ಯವಸ್ಥಾಪಕ ಇನ್ನಂಜೆಯ ಉಮೇಶ್ ಅಮೀನ್(35) ಹಾಗೂ ಕುಂಜಾರುಗಿರಿಯ ಸರಾಪರ್ ಉಮೇಶ್ ಆಚಾರ್ಯ(35) ಎಂಬವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.