ಜಯಪ್ರಕಾಶ್ ಹೆಗ್ಡೆ ಪರ ಟ್ವಿಟರ್ ಅಭಿಯಾನ:ಚಿಂತೆಗೀಡಾದ ಶೋಭಾ ಕರಂದ್ಲಾಜೆ
ಉಡುಪಿ, ಜನವರಿ 08: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮುಂದೆ ಚುನಾವಣೆಗೆ ಸ್ಪರ್ಧಿಸಲಿರುವ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಚುನಾವಣಾ ಕಾವು ಹೆಚ್ಚಾಗುತ್ತಿದ್ದು, ಈ ನಡುವೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಆಯ್ಕೆಗೆ ಒತ್ತಾಯಿಸಿ ಟ್ವಿಟರ್ ಅಭಿಯಾನ ಆರಂಭವಾಗಿದೆ.
ಜಯಪ್ರಕಾಶ್ ಹೆಗ್ಡೆ ಅವರ ಅಭಿಮಾನಿಗಳು ಒಂದೇ ದಿನದಲ್ಲಿ ಮಾಡಿರುವ ಟ್ವೀಟ್ ಗಳು ನೂರೋ, ಇನ್ನೂರೋ ಅಲ್ಲ, ಭರ್ತಿ 3,000 ಟ್ವೀಟ್ ಗಳನ್ನು ಮಾಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚುತ್ತಲೇ ಇದೆ.
"ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಲು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸಮರ್ಥರು. ಇವರಿಗೆ ಟಿಕೆಟ್ ನೀಡಿ ಎಂದು ಟ್ವಿಟರ್ ನಲ್ಲಿ ಒತ್ತಾಯಿಸಲಾಗುತ್ತಿದೆ". ಕಳೆದ ಎರಡು ದಿನಗಳಿಂದ ನಿರಂತರವಾಗಿ ಟ್ವೀಟ್ ಗಳು ಹೆಚ್ಚುತ್ತಿದ್ದು, ಹೆಗ್ಡೆ ಅವರ ಪರವಾಗಿ ಮಾಡಲಾದ ಈ ಹ್ಯಾಶ್ ಟ್ಯಾಗ್ ಟ್ವೀಟ್ ಭಾರಿ ಗಮನ ಸೆಳೆಯುತ್ತಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಜಯಪ್ರಕಾಶ ಹೆಗ್ಡೆ ಬಿಜೆಪಿ ಅಭ್ಯರ್ಥಿಯಾಗಬೇಕು ಎನ್ನುವ ಒತ್ತಾಯ ಇತ್ತು. ಸದ್ಯ ಈ ಒತ್ತಾಯ ಟ್ವಿಟರ್ ಮೂಲಕವೂ ವ್ಯಕ್ತವಾಗುತ್ತಿದೆ. ಆದರೆ ಜಯಪ್ರಕಾಶ ಹೆಗ್ಡೆ ಅವರ ಅಭಿಮಾನಿಗಳು ಆರಂಭಿಸಿರುವ ಈ ಟ್ವಿಟರ್ ಅಭಿಯಾನ ಸಂಸದೆ ಶೋಭಾ ಕರದ್ಲಾಜೆ ಅವರನ್ನು ಚಿಂತೆಗೇಡುಮಾಡಿದೆ.
ಬಿಜೆಪಿ ರಾಷ್ಟ್ರೀಯ ಮಟ್ಟದ ನಾಯಕರು ಈ ಟ್ವೀಟ್ ಹ್ಯಾಶ್ ಟ್ಯಾಗ್ ನೋಡಿ ಜಯಪ್ರಕಾಶ ಹೆಗ್ಡೆ ಅವರನ್ನು ಮುಂದಿನ ಉಡುಪಿ -ಚಿಕ್ಕಮಂಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಿದ್ದಾರೋ ? ಕಾದು ನೋಡಬೇಕು.












Click it and Unblock the Notifications