ಟಾರಸಿ ಮೇಲೆ ಅರಳಿತು ಮಲ್ಲಿಗೆ; ಭರ್ಜರಿ ಲಾಭ ಪಡೆದ ಕೃಷಿಕ
ಉಡುಪಿ, ಏಪ್ರಿಲ್ 07; ಕರಾವಳಿಯಲ್ಲಿ ಮಲ್ಲಿಗೆ ಹೂವಿಗೆ ಭಾರೀ ಬೇಡಿಕೆ. ಮಲ್ಲಿಗೆಯ ಕಂಪು ಎಲ್ಲಾ ಶುಭ ಕಾರ್ಯಕ್ರಮಗಳಿಗೂ ಬೇಕು. ಹೆಂಗಳೆಯರ ತಲೆಯಲ್ಲಿ ಮಲ್ಲಿಗೆ ಹೂವಿದ್ದರೆ ಲಕ್ಷಣವಾಗಿ ಕಾಣಿಸುತ್ತಾರೆ ಅನ್ನೋದು ಬಹುಜನರ ಅಭಿಪ್ರಾಯವಾಗಿದೆ.
ಅದೇ ರೀತಿ ಪೂಜಾ ಕಾರ್ಯಕ್ರಮದಲ್ಲೂ ಮಲ್ಲಿಗೆ ಹೂವಿಗೆ ಬಹಳ ಪ್ರಾಮುಖ್ಯತೆ ಇದೆ. ಆದರೆ ಮಲ್ಲಿಗೆ ಬೆಳೆ ಎಲ್ಲಾ ಕಡೆಯಲ್ಲೂ ಆಗಲ್ಲ. ಮಣ್ಣಿನ ಗುಣ, ಹವಾಗುಣದ ಬದಲಾವಣೆ ಸರಿ ಹೊಂದಲ್ಲ ಅನ್ನೋದು ಬಹು ಕೃಷಿಕರ ವಾದವಾಗಿದೆ. ಉಡುಪಿಯ ಕೃಷಿಕರಿಬ್ಬರು ಮಾತ್ರ ತಮ್ಮ ಮನೆಯ ಟಾರೆಸ್ ಮೇಲೆಯೇ ಮಲ್ಲಿಗೆ ಬೆಳೆ ಬೆಳೆದಿದ್ದಾರೆ. ಮಲ್ಲಿಗೆಯ ಮೂಲಕ ತಿಂಗಳಿಗೆ 10 ಸಾವಿರ ರೂಪಾಯಿ ಸಂಪಾದನೆಯನ್ನೂ ಮಾಡುತ್ತಿದ್ದಾರೆ.
ಕೃಷಿ ಮಾಡಬೇಕು, ಉತ್ತಮ ಆದಾಯ ಗಳಿಸಬೇಕು ಎನ್ನುವುದು ಹಲವರ ಆಸೆಯಾಗಿದೆ. ಆದರೆ ಸ್ಥಳವಾಕಾಶ ಕೊರತೆ ಆ ಆಸೆಗೆ ತಣ್ಣೀರೆರುಚುವಂತೆ ಮಾಡುತ್ತದೆ. ಆದರೆ ಉಡುಪಿಯ ಕೃಷಿಕರು ಟಾರಸಿಯಲ್ಲಿಯೇ ಮಲ್ಲಿಗೆ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಟಾರಸಿಯಲ್ಲಿ ಬೆಳೆದ ಮಲ್ಲಿಗೆ ಪರಿಮಳ, ಊರೆಲ್ಲಾ ಸುವಾಸನೆ ಬೀರುತ್ತಿದೆ.
ಮನೆಯವರ ಸಹಾಯದಿಂದ ಮಲ್ಲಿಗೆ ಕೃಷಿಯನ್ನು ಕೈಗೊಂಡಿದ್ದಾರೆ. ಮಲ್ಲಿಗೆ ಹೂ ಕಟ್ಟಿ ಮನೆಯವರು ಸಹಾಯ ಮಾಡುತ್ತಿದ್ದಾರೆ. ಸ್ಥಳೀಯ ಮಾರುಕಟ್ಟೆಗೆ ಮಲ್ಲಿಗೆ ಮಾರಾಟ ಮಾಡುತ್ತಿದ್ದಾರೆ. ಮುಂದೆ ವರ್ಷಕ್ಕೆ ಮೂರು ಲಕ್ಷ ರೂಪಾಯಿ ಆದಾಯ ಬರುವಂತೆ ಮಲ್ಲಿಗೆ ಬೆಳೆ ಬೆಳೆಯುವ ಗುರಿಯನ್ನು ಕೃಷಿಕರು ಹೊಂದಿದ್ದಾರೆ.

ಮಲ್ಲಿಗೆ ಹೂವಿಗೆ ಭಾರೀ ಬೇಡಿಕೆ
ಹೂವುಗಳಲ್ಲಿ ಮಲ್ಲಿಗೆ ಹೂವಿಗೆ ಇರುವಷ್ಟು ಬೇಡಿಕೆ ಬೇರೆ ಯಾವ ಹೂವಿಗೂ ಇಲ್ಲ. ಅದರಲ್ಲೂ ಕರಾವಳಿಯಲ್ಲಿ ಬೆಳೆಯುವ ಮಲ್ಲಿಗೆಗೆ ಶುಭ ಕಾರ್ಯಗಳಲ್ಲಿ ಬಹು ಬೇಡಿಕೆ ಮಲ್ಲಿಗೆ ಬೆಳೆಗಾರಿಗೂ ಕೈ ತುಂಬಾ ಆದಾಯ ಸಿಗುತ್ತದೆ. ಆದರೆ ಈ ಮಲ್ಲಿಗೆ ಕೃಷಿ ಮಾಡಬೇಕಾದರೆ ಒಳ್ಳೆಯ ಜಾಗ ಅವಶ್ಯಕತೆ ಇದೆ ಎಂದು ಅಂದುಕೊಳ್ಳುವವರೇ ಹೆಚ್ಚು. ಆದರೆ, ಹೆಚ್ಚಿನ ಸ್ಥಳ ಇಲ್ಲದೇ ಇದ್ದರೂ ಮನೆಯ ಟಾರಸಿಯಲ್ಲೂ ಕೃಷಿ ಮಾಡಬಹುದು ಎಂದು ಉಡುಪಿಯ ಕೃಷಿಕರು ತೋರಿಸಿಕೊಟ್ಟಿದ್ದಾರೆ.

ನೂರು ಮಲ್ಲಿಗೆ ಗಿಡಗಳಿವೆ
ಉಡುಪಿಯ ಕಾಪು ತಾಲೂಕಿನ ಇನ್ನಂಜೆಯ ಉದಯ್ ಎಂಬುವವರು ಟಾರಸಿಯಲ್ಲಿ ಮಲ್ಲಿಗೆ ಕೃಷಿ ಮಾಡಿ ತೋರಿಸಿದ್ದಾರೆ. ತಮ್ಮ ಮನೆಯ ಟಾರಸಿಯಲ್ಲಿ ಸುಮಾರು ನೂರು ಮಲ್ಲಿಗೆ ಗಿಡ ನೆಟ್ಟು, ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಸದ್ಯ ತಿಂಗಳಿಗೆ 10 ಸಾವಿರ ಆದಾಯಗಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ವರ್ಷಕ್ಕೆ ಮೂರು ಲಕ್ಷದ ಆದಾಯದ ಗುರಿ ಹೊಂದಿದ್ದಾರೆ.

ಪ್ರಯೋಗ ಮಾಡಿ ಯಶಸ್ಸು ಕಂಡರು
ತಮ್ಮ ಮಲ್ಲಿಗೆ ತೋಟದ ಬಗ್ಗೆ ಮಾತನಾಡಿದ ಕೃಷಿಕ ಉದಯ್, "ವಾಣಿಜ್ಯ ಉದ್ದೇಶದಿಂದ ಮಲ್ಲಿಗೆ ಕೃಷಿಯನ್ನು ಆರಂಭ ಮಾಡಿರಲಿಲ್ಲ. ಸ್ವಲ್ಪ ಗಿಡ ನೆಟ್ಟು ಪ್ರಯೋಗ ಮಾಡಿದೆವು. ಟಾರಸಿಯಲ್ಲಿ ನೆಟ್ಟ ಕಾರಣ ಬಿಸಿಲಿನ ಝಳಕ್ಕೆ ಬೆಳೆ ಚೆನ್ನಾಗಿ ಬರುವ ನಿರೀಕ್ಷೆಯೂ ಇರಲಿಲ್ಲ. ಆದರೆ ಮಲ್ಲಿಗೆ ಬೆಳೆ ನಿರೀಕ್ಷೆಗಿಂತಲೂ ಹೆಚ್ಚು ಫಸಲು ನೀಡಿತು. ನಿತ್ಯ ಆರೈಕೆ, ನೀರಿನ ಪೂರೈಕೆಯಿಂದ ಮಲ್ಲಿಗೆ ಬೆಳೆ ಕೈ ಹಿಡಿದಿದೆ. ಸದ್ಯ ಮಲ್ಲಿಗೆ ಬೆಳೆಯಿಂದ ತಿಂಗಳಿಗೆ 10 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದೇವೆ" ಎಂದರು.

ಟಾರಸಿ ಕೃಷಿಯೇ ಉತ್ತಮವಾಗಿದೆ
ನೆಲೆದ ಮೇಲೆ ಮಾಡುವ ಮಲ್ಲಿಗೆ ಕೃಷಿಗೆ ಹೋಲಿಸಿದರೆ ಟಾರಸಿ ಮೇಲಿನ ಮಲ್ಲಿಗೆ ಕೃಷಿ ಉತ್ತಮ ಎನ್ನುವುದು ಹಿರಿಯ ಕೃಷಿಕರ ಅಭಿಪ್ರಾಯವಾಗಿದೆ. "ಗಿಡಕ್ಕೆ ಇತರೆ ಮರ ಗಿಡಗಳ ಬೇರು ಬರೋದಿಲ್ಲ. ಅಲ್ಲದೇ ಕಳೆ ಗಿಡಗಳ ಕಾಟವೂ ಮಲ್ಲಿಗೆ ಗಿಡಕ್ಕೆ ಇಲ್ಲ. ಖರ್ಚು ಕಮ್ಮಿಯ ಜೊತೆಗೆ ಹೆಚ್ಚು ನೀರಿನ ಅವಶ್ಯಕತೆ ಟಾರಸಿ ಮಲ್ಲಿಗೆ ಕೃಷಿಗೆ ಇಲ್ಲ. ಲೆಕ್ಕಾಚಾರ ಮಾಡಿದರೆ ಲಾಭವೂ ಅಧಿಕ" ಎನ್ನುತ್ತಾರೆ ಹಿರಿಯ ಕೃಷಿಕ ಎಡ್ವರ್ಡ್ ಡಿಸೋಜಾ.
ಒಟ್ಟಿನ್ನಲ್ಲಿ ಕೃಷಿ ಮಾಡುವುದಕ್ಕೆ ಮನಸ್ಸು ಇದ್ದರೆ ಇದ್ದ ಸ್ಥಳವನ್ನೇ ಉಪಯೋಗ ಮಾಡಿಕೊಂಡು ಉತ್ತಮ ಬೆಳೆ ತೆಗೆಯಬಹುದು ಎಂದು ಮಲ್ಲಿಗೆ ಬೆಳೆಗಾರ ಉದಯ್ ನಿರೂಪಿಸಿದ್ದಾರೆ.












Click it and Unblock the Notifications